ಕೊರೊನಾ ಭಯ: ಮಾನವೀಯ ಮೌಲ್ಯ ಮರೆತ ಜನ
ಉಡುಪಿ, ಮಾರ್ಚ್ 18: ಹಿಂದೆಲ್ಲ ರಸ್ತೆ ಬದಿಯಲ್ಲಿ ಯಾರಾದರೂ ಬಿದ್ದಿದ್ದರೆ ಮಾನವೀಯತೆಯ ದೃಷ್ಟಿಯಿಂದ ಅವರನ್ನು ಎಬ್ಬಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಜನರು ಈಗ ಕೊರೊನಾ ವೈರಸ್ ಭಯದಿಂದಾಗಿ ಯಾರ ರಕ್ಷಣೆಗೂ ಮುಂದಾಗುತ್ತಿಲ್ಲ.
ರಸ್ತೆಯಲ್ಲಿ ಯಾರಾದರೂ ತಲೆ ತಿರುಗಿ ಬಿದ್ದರೆ ಕಳೆದ ಕೆಲವು ದಿನಗಳಿಂದ ಕೊರೊನಾ ಭೀತಿಯಿಂದಾಗಿ, ಅವರ ಹತ್ತಿರಕ್ಕೂ ಜನ ಸುಳಿಯುತ್ತಿಲ್ಲ. ಮೂರು ದಿನಗಳ ಹಿಂದೆ ಉಡುಪಿ ಕೃಷ್ಣಮಠದ ಪರಿಸರದಲ್ಲಿ ವ್ಯಕ್ತಿಯೋರ್ವರು ತೀವ್ರ ಬಿಸಿಲಿನ ಝಳದಿಂದ ತಲೆ ತಿರುಗಿಬಿದ್ದಿದ್ದರು.
ಈ ಸಂದರ್ಭದಲ್ಲಿ ಅವರ ತಲೆಗೆ ಕಲ್ಲು ತಾಗಿ ಗಾಯವಾಗಿತ್ತು. ತಲೆಗೆ ಆದ ಗಾಯದಿಂದ ರಕ್ತ ಸೋರಿ ಹೋಗುತ್ತಿದ್ದರೂ ಆ ಸ್ಥಳದಲ್ಲಿದ್ದ ಯಾರೊಬ್ಬರೂ ಅವರನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಲಿಲ್ಲ.
ಜನರು ಅವರನ್ನು ಕೊರೊನಾ ಪೀಡಿತ ಇರಬೇಕು ಎಂದೇ ಭಾವಿಸಿದ್ದರು. ಕೊನೆಗೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರು.
ಆದರೆ ಅದಾಗಲೇ ಕಾಲ ಮಿಂಚಿದ್ದರಿಂದ ತಲೆಯಿಂದ ತೀವ್ರ ರಕ್ತಸ್ರಾವ ಆಗಿದ್ದ ಕಾರಣ ಆ ವ್ಯಕ್ತಿ ಮೃತಪಟ್ಟಿದ್ದರು. ಸಕಾಲದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರೆ ಅವರನ್ನು ಉಳಿಸಬಹುದಿತ್ತು.
ಆದರೆ ಕೊರೊನಾ ಭೀತಿಯಿಂದ ಜನರು ಸಹಾಯಕ್ಕೆ ಮುಂದೆ ಬರದ ಕಾರಣ ಅವರ ಜೀವ ಕಳೆದು ಹೋಗಿದೆ. ಕಣ್ಣಿಗೆ ಕಾಣದಿರುವ ಈ ಕೊರೊನಾ ವೈರಸ್ ಮಾನವೀಯ ಮೌಲ್ಯಗಳನ್ನೇ ನಾಶಪಡಿಸುತ್ತಿರೋದು ನಿಜಕ್ಕೂ ದುರಂತ.