ಕೊರೊನಾ ಎಫೆಕ್ಟ್: ಉಡುಪಿಯ ಕೃಷ್ಣಮಠ, ಮಸೀದಿಗಳಲ್ಲೂ ನಿರ್ಬಂಧ
ಉಡುಪಿ, ಮಾರ್ಚ್ 20: ದೇಶಾದ್ಯಂತ ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಇಂದು ಉಡುಪಿಯಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯ ಸಮಯವನ್ನು ಮೊಟಕುಗೊಳಿಸಲಾಯಿತು. ಸಾಮಾನ್ಯವಾಗಿ ಶುಕ್ರವಾರದ ನಮಾಜ್ ಒಂದು ಗಂಟೆಗಳ ಕಾಲ ನಡೆಯುತ್ತಿದ್ದವು. ಆದರೆ ಇಂದು ಎಲ್ಲೆಡೆ ನಮಾಜ್ ಮತ್ತು ಪ್ರಾರ್ಥನೆ ಹದಿನೈದು ನಿಮಿಷಕ್ಕೆ ಸೀಮಿತಗೊಳಿಸಲಾಯಿತು.
ಉಡುಪಿಯ ಜಾಮಿಯಾ ಮಸೀದಿಯಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡುವ ನಿಟ್ಟಿನಲ್ಲಿ ಪ್ರಾರ್ಥನೆಗೆ ಬಂದವರಿಗೆ ಸ್ಯಾನಿಟೈಜರ್ ಹಂಚಿಕೆ ಮಾಡುವುದು ಕಂಡು ಬಂದಿತು. ನಮಾಜಿನ ಬಳಿಕ ಮಹಾಮಾರಿ ಕೊರೋನಾ ದೂರವಾಗಲು ವಿಶೇಷ ಪ್ರಾರ್ಥನೆ ನೆರವೇರಿತು. ಮನೆಯಲ್ಲೂ ಪ್ರಾರ್ಥನೆ ಮಾಡುವಂತೆ ಪ್ರಾರ್ಥನೆಯ ಮಾದರಿ ಕರಪತ್ರ ಹಂಚಿಕೆ ನಡೆಯಿತು.
ಉಡುಪಿ ನಗರ ಮಾತ್ರವಲ್ಲದೇ ನಗರದ ಹೊರಭಾಗಗಳಲ್ಲೂ ಹತ್ತರಿಂದ ಹದಿನೈದು ನಿಮಿಷ ಮಾತ್ರ ನಮಾಜ್ ಮತ್ತು ಪ್ರಾರ್ಥನೆಗೆ ಅವಕಾಶ ಇತ್ತು. ಮಹಿಳೆಯರಿಗೆ ಮನೆಯಲ್ಲೇ ಪ್ರಾರ್ಥನೆಗೆ ಮನವಿ ಮಾಡಲಾಗಿತ್ತು. ಅದರಂತೆ ಇವತ್ತು ಜಾಮಿಯಾ ಮಸೀದಿಗೆ ಮಹಿಳೆಯರು ಆಗಮಿಸದೆ ಮನೆಯಲ್ಲಿಯೇ ನಮಾಜ್ ನಿರ್ವಹಿಸಿದರು.
ಕೃಷ್ಣಮಠ ಬಂದ್, ದರ್ಶನ ಇಲ್ಲ, ಅನ್ನದಾನಕ್ಕೂ ಬ್ರೇಕ್!
ಇದೇ ಮೊದಲ ಬಾರಿಗೆ ಉಡುಪಿಯ ಶ್ರೀ ಕೃಷ್ಣಮಠವನ್ನು ಬಹುತೇಕ ಬಂದ್ ಮಾಡಲಾಗಿದೆ. ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಇಂತಹದ್ದೊಂದು ಮಹತ್ವದ ನಿರ್ಧಾರಕ್ಕೆ ಪರ್ಯಾಯ ಶ್ರೀಗಳು ಬಂದಿದ್ದಾರೆ. ಕೃಷ್ಣನ ದರ್ಶನಕ್ಕೂ ಸದ್ಯಕ್ಕೆ ಅವಕಾಶ ಇಲ್ಲ. ಭಕ್ತರು ಮಠ ಪ್ರವೇಶಿಸುವ ಗೇಟ್ ಮತ್ತು ಹೊರಹೋಗುವ ಗೇಟ್ ಗಳನ್ನು ಇವತ್ತು ಕ್ಲೋಸ್ ಮಾಡಲಾಯಿತು.
ಸದಾ ಗಿಜಿಗುಡುವ ರಥಬೀದಿ ಕೂಡ ಬಹುತೇಕ ಸ್ತಬ್ಧ ಆಗಿದೆ. ರಥಬೀದಿಯಲ್ಲಿ ಅನೇಕ ಅಂಗಡಿ ಮುಂಗಟ್ಟುಗಳು ಇದ್ದು, ಇವತ್ತಿನಿಂದ ಅಂಗಡಿಗಳು ಬಂದ್ ಆಗಿವೆ. ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಸಾಕಷ್ಟು ಭಕ್ತರು ಸೇರುವ ಕಾರಣಕ್ಕೆ ರಥೋತ್ಸವವನ್ನೂ ಪರ್ಯಾಯ ಶ್ರೀಗಳು ರದ್ದುಗೊಳಿಸಿದ್ದಾರೆ.
ಉಳಿದಂತೆ ರಾಜಾಂಗಣ ಮತ್ತಿತರೆಡೆಗಳಲ್ಲಿ ನಡೆಯುತ್ತಿದ್ದ ಪ್ರವಚನಗಳನ್ನೂ ಕ್ಯಾನ್ಸಲ್ ಮಾಡಲಾಗಿದ್ದು, ಕೃಷ್ಣಮಠ ಈಗ ಬಿಕೋ ಎನ್ನುತ್ತಿದೆ. ಸಾಮಾನ್ಯವಾಗಿ ಶಾಲೆ-ಕಾಲೇಜುಗಳಿಗೆ ರಜೆ ಇದ್ದಾಗ ದೂರದ ಭಕ್ತರು ಮತ್ತು ಪ್ರವಾಸಿಗರು ಕೃಷ್ಣಮಠಕ್ಕೆ ದಾಂಗುಡಿ ಇಡುವುದು ವಾಡಿಕೆ.
ಆದರೆ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಜನಸಂದಣಿ ಕಡಿಮೆ ಮಾಡಬೇಕಿರುವ ಕಾರಣ, ಮಠಕ್ಕೆ ಬಂದ ಪ್ರವಾಸಿಗರನ್ನು ಇವತ್ತು ವಾಪಸ್ ಕಳಿಸಲಾಗಿದೆ. ಜೊತೆಗೆ ಅನ್ನಸಂತರ್ಪಣೆಗೂ ಇವತ್ತಿನಿಂದ ಬ್ರೇಕ್ ಬಿದ್ದಿದೆ.