ಉಡುಪಿ: ಶೇ.40.83 ತಲುಪಿದ ಕೋವಿಡ್ ಪಾಸಿಟಿವಿಟಿ ರೇಟ್
ಉಡುಪಿ, ಮೇ 21: ಉಡುಪಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ನಿಯಂತ್ರಣ ಮೀರಿ ಹಬ್ಬುತ್ತಿದ್ದು, ಇಲ್ಲಿಯವರೆಗೆ ಅತಿಹೆಚ್ಚು ಅಂದರೆ ಶೇ.40.83 ಪಾಸಿಟಿವಿಟಿ ರೇಟ್ ದಾಖಲಾಗಿದೆ.
ಇದರ ಜೊತೆಗೆ ನಗರಗಳಿಂದ ಹಳ್ಳಿಗಳಿಗೂ ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದ್ದು, ಹಳ್ಳಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ ಎಂಬ ಆತಂಕಕಾರಿ ಅಂಶಗಳನ್ನು ಉಡುಪಿ ಡಿಎಚ್ಒ ಡಾ.ಸುಧೀರ್ ಚಂದ್ರಚೂಡ ಬಿಚ್ಚಿಟ್ಟಿದ್ದಾರೆ.
ಹಳ್ಳಿಯವರೇ ಕೊರೊನಾ ವೈರಸ್ಗೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದಿರುವ ಅವರು, ಮೊದಲ ಮತ್ತು ಎರಡನೇ ಅಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಸಾವುಗಳಾಗಿವೆ. ಗ್ರಾಮಾಂತರ ಪ್ರದೇಶದಲ್ಲಿ 208 ಜನ ಕೋವಿಡ್ಗೆ ಬಲಿಯಾದರೆ, ನಗರ ಪ್ರದೇಶದ ಸಾವಿನ ಸಂಖ್ಯೆ 64 ಆಗಿದೆ.
ಕೊರೊನಾ ವೈರಸ್ ಬಗ್ಗೆ ಹಳ್ಳಿಯ ಜನ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಕೊರೊನಾದ ಲಕ್ಷಣ ಕಂಡುಬಂದ ಕೂಡಲೇ ಸರಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗಲಕ್ಷಣವನ್ನು ಯಾವುದೇ ಕಾರಣಕ್ಕೂ ಅಸಡ್ಡೆ ಮಾಡಬೇಡಿ. ಸ್ವಯಂ ಚಿಕಿತ್ಸೆ ಮಾಡುವುದನ್ನು ಬಿಟ್ಟುಬಿಡಿ ಎಂದು ಡಿಎಚ್ಒ ಡಾ.ಸುಧೀರ್ ಚಂದ್ರಚೂಡ ಜನತೆಗೆ ಮನವಿ ಮಾಡಿದ್ದಾರೆ.
Recommended Video
ಆಸ್ಪತ್ರೆಯ ಚಿಕಿತ್ಸೆ ಬಗ್ಗೆ ನಿಮಗೆ ಯಾವುದೇ ಆತಂಕ ಸಂಶಯಗಳು ಬೇಡ ಎಂದು ಹೇಳಿರುವ ಅವರು, ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗುತ್ತದೆ. ಆರೋಗ್ಯ ಗಂಭೀರವಾಗುವತನಕ ಕಾಯದೆ ಪ್ರಾರಂಭಿಕ ಹಂತದಲ್ಲೇ ಬಂದು ಚಿಕಿತ್ಸೆ ಪಡೆದುಕೊಳ್ಳಿ. ಈ ಮೂಲಕ ಕೊರೊನಾ ಹರಡುವುದನ್ನೂ ತಪ್ಪಿಸಬಹುದು ಎಂದು ಹೇಳಿದ್ದಾರೆ.