ಕೊರೊನಾ ಎಫೆಕ್ಟ್: ವಿದ್ಯಾಕಾಶಿ ಮಣಿಪಾಲ ಅಕ್ಷರಶಃ ಬಂದ್
ಉಡುಪಿ, ಮಾರ್ಚ್ 16: ರಾಜ್ಯದಾದ್ಯಂತ ಕೊರೊನಾ ಭೀತಿಗೆ ಹೈಅಲರ್ಟ್ ಘೋಷಿಸಿದ್ದು, ಒಂದು ವಾರದ ಕಾಲ ರಾಜ್ಯದ ಮೇಲೆ ಸರ್ಕಾರ ಎಮರ್ಜೆನ್ಸಿ ಘೋಷಿಸಿದಂತಾಗಿದೆ.
ಉಡುಪಿ ಜಿಲ್ಲೆಯ ವಿದ್ಯಾಕಾಶಿ ಮಣಿಪಾಲದಲ್ಲಿ ಸಾವಿರಾರು ವಿದೇಶಿ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರಿ ಸುಮಾರು ಅರವತ್ತು ದೇಶಗಳ ವಿದ್ಯಾರ್ಥಿಗಳು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಯೂನಿವರ್ಸಿಟಿಯಲ್ಲಿದ್ದಾರೆ.
ಉಡುಪಿ ಚರ್ಚ್ ಗಳಲ್ಲಿ ಕೊರೊನಾ ಜಾಗೃತಿಗೆ ಸೂಚನೆ
ಹೀಗಾಗಿ ಈ ನಗರಕ್ಕೆ ಕೊರೊನಾ ರಿಸ್ಕ್ ಸ್ವಲ್ಪ ಜಾಸ್ತಿನೇ. ಈ ಹಿನ್ನೆಲೆಯಲ್ಲಿ ಮಣಿಪಾಲ ವಿಶ್ವವಿದ್ಯಾಲಯಕ್ಕೆ ಎರಡು ವಾರ ರಜೆ ಘೋಷಣೆ ಮಾಡಲಾಗಿದೆ. 60 ದೇಶಗಳ ವಿದ್ಯಾರ್ಥಿಗಳನ್ನು ಹೊಂದಿರುವ ಮಣಿಪಾಲ ವಿವಿ, ಸೋಂಕು ತಡೆಗೆ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಮಾರ್ಚ್ 29 ರವರೆಗೆ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಿಗೆ ರಜೆ ನೀಡಿ ಆದೇಶ ಹೊರಡಿಸಿದೆ. ಮೆಡಿಕಲ್, ಎಂಜಿನಿಯರಿಂಗ್ ಸಹಿತ ಎಲ್ಲ ವಿದ್ಯಾರ್ಥಿಗಳಿಗೆ 15 ದಿನ ರಜೆ ನೀಡಿದೆ. ಹೀಗಾಗಿ ಮಣಿಪಾಲ ಈಗ ಬಿಕೋ ಎನ್ನುತ್ತಿದೆ.
ಹೊರ ರಾಜ್ಯದ ವಿದ್ಯಾರ್ಥಿಗಳು ಈಗಾಗಲೇ ನಗರ ತೊರೆದಿದ್ದು, ವಿದೇಶೀ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ತೆರಳಲು ಸದ್ಯ ನಿರ್ಬಂಧ ಇದೆ. ಹೀಗಾಗಿ ಅವರೆಲ್ಲ ತಮ್ಮ ಹಾಸ್ಟೆಲ್ ಗಳಲ್ಲೇ ಉಳಿದುಕೊಂಡಿದ್ದಾರೆ.