ಪಲಿಮಾರು ಮಠದಲ್ಲಿ ಗ್ಯಾಸ್ ನಿಂದ ಅಡುಗೆ ಮಾಡಿದ್ರೆ ಮೈಲಿಗೆಯಂತೆ!
ಉಡುಪಿ, ಸೆಪ್ಟೆಂಬರ್ 11 : ಕಟ್ಟಿಗೆಯ ಒಲೆಗಳನ್ನೇ ತೊಲಗಿಸಿ ಗ್ಯಾಸ್ ಹಾಗೂ ಸೌರ ಒಲೆ ಬಳಸಿ ದೇಶದಲ್ಲಿ ಹೊಗೆ ರಹಿತ ಗ್ರಾಮ ಮಾಡಬೇಕೆಂಬುದು ಸರ್ಕಾರಗಳ ಆಶಯ. ಆದರೆ, ಉಡುಪಿಯ ಪಲಿಮಾರು ಮಠ ಇದಕ್ಕೆ ತದ್ವಿರುದ್ಧವಾಗಿದೆ.
ಗ್ಯಾಸ್, ಸೌರ ಒಲೆ ಅಥವಾ ಸ್ಟೀಮ್ ನಲ್ಲಿ ಅಡುಗೆ ಮಾಡಿದರೆ ಅದು ಮೈಲಿಗೆಯಂತೆ. ಹೀಗಾಗಿ ಪಲಿಮಾರು ಮಠಾಧೀಶರ ಪರ್ಯಾಯದ ಸಂದರ್ಭದಲ್ಲಿ ದೇವಾಲಯಕ್ಕೆ ಬರುವ ಭಕ್ತರಿಗೆ ಕಟ್ಟಿಗೆ ಒಲೆಯಲ್ಲೇ ಅಡುಗೆ ತಯಾರಿಸಿ ಭಕ್ತರಿಗೆ ಬಡಿಸಲು ಮಠ ನಿರ್ಧರಿಸಿದೆ.
ಉಡುಪಿ ಮಠದಲ್ಲಿ ನಡೆಯಿತು ಕಟ್ಟಿಗೆ ಮುಹೂರ್ತ
ಪರ್ಯಾಯದ ಗದ್ದುಗೆ ಏರಲಿರುವ ಪಲಿಮಾರು ಮಠಕ್ಕೆ ಗ್ಯಾಸ್, ಸೌರ ಒಲೆ ಅಥವಾ ಸ್ಟೀಮ್ ನಲ್ಲಿ ಮಾಡಿದ ಅಡುಗೆ ಮೈಲಿಗೆಯಂತೆ. ಇದಕ್ಕೆ ಪಲಿಮಾರು ಮಠಾಧೀಶರು ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರದ ವೈಚಕೂರಹಳ್ಳಿ ದೇಶದ ಮೊದಲ ಹೊಗೆ ರಹಿತ ಗ್ರಾಮ
ಗ್ಯಾಸ್ ಅಥವಾ ಸ್ಟೀಮ್ ನಲ್ಲಿ ಅಡುಗೆ ಮಾಡಿದರೆ ಮಡಿಗೆ ಭಂಗ ಬರುತ್ತದೆ. ಶಾಸ್ತ್ರದ ಪ್ರಕಾರ ಇದು ತಂಗಳನ್ನವಾಗುತ್ತದೆ ಎಂದು ಮಡಿವಂತ ಪಂಡಿತರು ಉಡುಪಿಯ ಶ್ರೀಕೃಷ್ಣ ಮಠದ ಭಾವಿ ಪರ್ಯಾಯ ಪೀಠಾಧೀಶ ಪಲಿಮಾರ್ ಸ್ವಾಮೀಜಿಗೆ ಒತ್ತಡ ಹೇರಿರುವುದೇ ಇದಕ್ಕೆಲ್ಲ ಕಾರಣವಾಗಿದೆ.
25 ವರ್ಷಗಳ ಹಿಂದೆ ಸ್ಟೀಮ್ ಮೂಲಕ ಅಡುಗೆ
25 ವರ್ಷಗಳ ಹಿಂದೆ ಅದಮಾರು ಮಠಾಧೀಶರ ನೇತೃತ್ವದಲ್ಲಿ ಭೋಜನ ಶಾಲೆ ನವೀಕರಣಗೊಂಡಿತ್ತು. ಈ ಸಂದರ್ಭದಲ್ಲಿ ಸ್ಟೀಮ್ ಮೂಲಕ ಅಡುಗೆ ಪ್ರಾರಂಭಿಸಲಾಗಿತ್ತು. ಈ ಸ್ಟೀಮ್ ಅಡುಗೆ ಮಾಡಲು ಕಡಿಮೆ ಪ್ರಮಾಣದ ಕಟ್ಟಿಗೆ ಸಾಕಿತ್ತು. ಕಟ್ಟಿಗೆಯ ಕೊರತೆ, ಪರಿಸರ ನಾಶ ಹಾಗೂ ಪರಿಸರ ಸ್ನೇಹಿಯಾದ ಇದು ಕಳೆದ ಎರಡುವರೆ ದಶಕಗಳಿಂದ ನಡೆದು ಬಂದಿದೆ. ಇದೀಗ ಅಡುಗೆಯನ್ನೂ ಕಟ್ಟಿಗೆ ಒಲೆಯಲ್ಲಿ ಮಾಡಬೇಕು ಎಂದು ಶಾಸ್ತ್ರಗಳನ್ನು ಉದಾಹರಿಸಿ ಪಟ್ಟು ಹಿಡಿದಿದ್ದಾರೆ.
ಮಠದ ವಕ್ತಾರ ಶ್ರೀಶ ಆಚಾರ್ ಹೇಳುವುದೇನು?
ಪಲಿಮಾರು ಪರ್ಯಾದ ಸಂದರ್ಭ ಭೋಜನಶಾಲೆ ಸಹಿತ ಎಲ್ಲೆಡೆ ಕಟ್ಟಿಗೆ ಒಲೆ ಮೂಲಕವೇ ಅಡುಗೆ ತಯಾರಿ ನಡೆಯಲಿದೆ. ನಿತ್ಯವೂ ಕಟ್ಟಿಗೆ ಒಲೆ ಬಳಸುವ ಚಿಂತನೆ ಇದೆ. ಆದರೆ ಇದಕ್ಕೆ ನುರಿತ ಅಡುಗೆಯವರು ಬೇಕಾಗುತ್ತಾರೆ. ಒಮ್ಮೆ ಆರಂಭಿಸಿದ ಬಳಿಕ ಮುಂದಿನ ಪರ್ಯಾಯದ ಅವಧಿ ವರೆಗೂ ಕಟ್ಟಿಗೆ ಬಳಸಿ ಅಡುಗೆ ತಯಾರು ಮಾಡುವುದು ಕಷ್ಟಸಾಧ್ಯ. ಆದರೆ, ಮಡಿವಂತ ಯಾತ್ರಾರ್ಥಿಗಳು ಬರುವುದರಿಂದ ಇದಕ್ಕೆ ಕಟ್ಟಿಗೆಯಿಂದಲೇ ಅಡುಗೆ ಮಾಡುವ ಕುರಿತು ತೀರ್ಮಾನಿಸಲಾಗಿದ್ದು, ಕಟ್ಟಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಠದ ವಕ್ತಾರ ಶ್ರೀಶ ಆಚಾರ್ ತಿಳಿಸಿದ್ದಾರೆ.
ಪ್ರತಿ ದಿನ 24 ಟನ್ ಕಟ್ಟಿಗೆ
ಉಡುಪಿ ಶ್ರೀ ಕೃಷ್ಣನ ದರ್ಶನಕ್ಕೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಪ್ರತಿ ದಿನ ಹತ್ತು ಸಾವಿರ ಮಂದಿ ಊಟ ತಯಾರು ಮಾಡಲು ಸ್ಟೀಮ್ ಅಡುಗೆಯಾದರೆ ಸ್ಟೀಮ್ ಉತ್ಪತ್ತಿ ಮಾಡುವ ಬಾಯ್ಲರಿಗೆ ಉರುವಲಾಗಿಗೆ ತಿಂಗಳಿಗೆ 6 ಟನ್ ಕಟ್ಟಿಗೆ ಬೇಕು. ಅದನ್ನೇ ಬೆಂಕಿ ಒಲೆಯಲ್ಲಿ ಮಾಡಲು 24 ಟನ್ ಕಟ್ಟಿಗೆ ಬೇಕಾಗುತ್ತದೆ.
ವರ್ಷಕ್ಕೆ ಅಂದಾಜು 300 ಟನ್ ಕಟ್ಟಿಗೆ
ವರ್ಷಕ್ಕೆ ಅಂದಾಜು 300 ಟನ್ ಕಟ್ಟಿಗೆ ಬೇಕು. ಇದರಿಂದ ವರ್ಷಕ್ಕೆ 10 ಎಕರೆ ಕಾಡು ನಾಶ ಮಾಡಬೇಕಾಗುತ್ತದೆ. ಬೆಂಕಿ ಒಲೆ ಸುರಕ್ಷಿತವೂ ಅಲ್ಲ, ನಿತ್ಯ ರಾಶಿಗಟ್ಟಲೆ ಶೇಖರಣೆಯಾಗುವ ಬೂದಿ ವಿಲೆವಾರಿ ಮಾಡಲು ಕಷ್ಟ ಸಾಧ್ಯ, ಇದರಿಂದ ಸ್ವಚ್ಛತೆಗೂ ಸಮಸ್ಯೆ.