ಪಟ್ಟದ ದೇವರ ವಿವಾದ : ಕೇವಿಯೆಟ್ ಅರ್ಜಿ ಸಲ್ಲಿಸಿದ ಶೀರೂರು
ಉಡುಪಿ, ಜುಲೈ.06: ಶೀರೂರು ಮಠದ ಪಟ್ಟದ ದೇವರ ವಿವಾದ ಮತ್ತೆ ಭುಗಿಲೆದ್ದಿದೆ. ಉತ್ತರಾಧಿಕಾರಿ ನೇಮಕ ಇಲ್ಲದೆ ಪಟ್ಟದ ದೇವರು ನೀಡಲು ಆಗುವುದಿಲ್ಲ ಎಂದು ಪಟ್ಟು ಹಿಡಿದಿರುವ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಗೆ ಅಷ್ಟ ಮಠದ ಎಲ್ಲಾ ಮಠಾಧೀಶರು ಬೆಂಬಲವಾಗಿ ನಿಂತಿದ್ದಾರೆ.
ಅಲ್ಲದೇ, ಮಠಾಧೀಶರು ಪಟ್ಟದ ದೇವರು ಹಸ್ತಾಂತರ ಕುರಿತು ಹಿರಿಯ ಯತಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸೇರಿದಂತೆ ಯಾವುದೇ ಸ್ವಾಮೀಜಿಗಳು ನನ್ನ ವಿರುದ್ಧ ಹೇಳಿಕೆ ನೀಡಬಾರದು. ಯಾವುದೇ ಬೆಳವಣಿಗೆ ನಡೆಸಬಾರದು ಎಂದು ಶೀರೂರು ಶ್ರೀ ಲಕ್ಷ್ಮೀವರ ತೀರ್ಥರು ಕೋರ್ಟ್ ಮೆಟ್ಟಿಲೇರಿ ಕೇವಿಯೆಟ್ ತಂದಿದ್ದಾರೆ.
ಶೀರೂರು ಶ್ರೀ ಹುಟ್ಟುಹಬ್ಬದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾದ ಶಿವಮಣಿ
ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ ಕೊಡಲು ನಿರ್ಧಾರ ಮಾಡಿದ ಬಳಿಕ ಕೆಲವೇ ಸಮಯದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ವೇಳೆ ಶೀರೂರು ಮಠದ ಪಟ್ಟದ ದೇವರಾದ ವಿಠಲ ದೇವರ ಮೂರ್ತಿಯನ್ನು ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ಸ್ವಾಮೀಜಿಗೆ ಪ್ರತಿ ನಿತ್ಯ ಪೂಜಾ ಕೈಂಕರ್ಯ ನಡೆಸುವಂತೆ ನೀಡಿದ್ದರು.
ಆದರೆ ಈಶಪ್ರಿಯರು ಈಗಿನ ಪರ್ಯಾಯ ಸ್ವಾಮೀಜಿಗಳಾದ ವಿದ್ಯಾಧೀಶ ತೀರ್ಥರಿಗೆ ಹಸ್ತಾಂತರ ಮಾಡಿದ್ದರು. ಇದೀಗ ಪ್ರತೀ ನಿತ್ಯ ಪೂಜೆ ನಡೆಸುವ ಪರ್ಯಾಯ ಶ್ರೀ ವಿದ್ಯಾದೀಶತೀರ್ಥರು, ಶೀರೂರು ಶ್ರೀಗಳಿಗೆ ಪಟ್ಟದ ದೇವರು ನೀಡಬೇಕಾದ್ರೆ ಉತ್ತರಾಧಿಕಾರಿ ನೇಮಿಸಿ ಎಂದು ಯೂಟರ್ನ್ ಹೊಡೆದಿದ್ದಾರೆ.
ಹೀಗಾಗಿ ಅದಮಾರು ಶ್ರೀಗಳು ಪರ್ಯಾಯ ಶ್ರೀಗಳೊಂದಿಗೆ ಸೇರಿಕೊಂಡು ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.