ವೃಂದಾವನಸ್ಥರಾಗುವ ಕೊನೆ ಕ್ಷಣದಲ್ಲೂ ಚರ್ಚೆಗೆ ಕಾರಣರಾದ ಶೀರೂರು ಶ್ರೀ
Recommended Video
ಉಡುಪಿ, ಜುಲೈ 19: ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಿದ್ದ ಶೀರೂರು ಮಠ ಲಕ್ಷ್ಮೀವರ ತೀರ್ಥರು ಸಾವಿನಲ್ಲೂ ಚರ್ಚೆಗೆ ಗ್ರಾಸವಾಗಿದ್ದಾರೆ. ಗುರುವಾರ ಸಂಜೆ ಹೊತ್ತಿಗೆ ಶೀರೂರು ಮೂಲ ಮಠದಲ್ಲಿ ವೃಂದಾವನಕ್ಕೆ ಮಣ್ಣು ಅಗೆಯುವ ಹೊತ್ತಿನಲ್ಲೂ ಅಷ್ಟಮಠಗಳ ಪೈಕಿ ವಯಸಿನಲ್ಲಿ ಹಿರಿಯರಾದ ಪೇಜಾವರ ಮಠದ ವಿಶ್ವೇಶ ತೀರ್ಥರು ಇಷ್ಟು ಕಾಲದ ಮನಸಿನ ಕಹಿ ಹೊರಹಾಕಿದ್ದಾರೆ.
ಸನ್ಯಾಸ ಧರ್ಮದಿಂದ ಭ್ರಷ್ಟರಾಗಿದ್ದ ಲಕ್ಷ್ಮೀವರತೀರ್ಥರು ಮಠಾಧೀಶರೇ ಅಲ್ಲ. ಆ ಕಾರಣಕ್ಕೆ ನಾವ್ಯಾರೂ ಸಹ ಅವರ ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಶೀರೂರು ಮಠದ ಪಟ್ಟದ ದೇವರನ್ನು ವಾಪಸ್ ಮಾಡದಿರುವುದಕ್ಕೂ ಇದೇ ಕಾರಣ ಎಂದು ಶಿರಸಿಯಲ್ಲಿ ಹೇಳಿದ್ದಾರೆ.
ಶೀರೂರು ಶ್ರೀಗಳ ಅಂತಿಮ ಕ್ರಿಯೆಗೆ ಹೋಗುವುದಿಲ್ಲವೆಂದ ಪೇಜಾವರ ಶ್ರೀ
ಇನ್ನು ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ತಮಗೆ ಮಕ್ಕಳಿದ್ದಾರೆ ಎಂದು ಲಕ್ಷ್ಮೀವರ ತೀರ್ಥರು ಒಪ್ಪಿಕೊಂಡಿದ್ದರು ಎಂದಿದ್ದಾರೆ. ಅತ್ತ ಶೀರೂರು ಮಠದಲ್ಲಿ ಯತಿ ಧರ್ಮ ಹಾಗೂ ಮಧ್ವ ಪರಂಪರೆಯ ಪ್ರಕಾರ ವೃಂದಾವನ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ನಡೆದಿದೆ. ವೃಂದಾವನದಲ್ಲಿ ಕುಳಿತ ಸ್ಥಿತಿಯಲ್ಲೇ ಲಕ್ಷ್ಮೀವರ ತೀರ್ಥರ ಅಂತಿಮ ಸಂಸ್ಕಾರಗಳು ಆಗುತ್ತವೆ.
ಶೀರೂರು ಸ್ವಾಮೀಜಿ ಸಾವಿಗೂ ಮುನ್ನ ಹಾಗೂ ನಂತರದ 10 ಘಟನಾವಳಿ
ಉಪ್ಪು, ಕಾಳು ಮೆಣಸು, ಕರ್ಪೂರ್, ಹತ್ತಿಯ ಜತೆಗೆ ಪೂಜಾ ಸಾಮಗ್ರಿಗಳನ್ನು ಇಟ್ಟು ಅಂತಿಮ ವಿಧಿವಿಧಾನ ಪೂರ್ತಿ ಮಾಡಲಾಗುತ್ತದೆ. ಮಠದ ಹಾಗೂ ಲಕ್ಷ್ಮೀವರ ತೀರ್ಥರ ಭಕ್ತರು ದುಃಖದಲ್ಲಿದ್ದು, ಗೋವಿಂದ ನಾಮ ಸ್ಮರಣೆಯನ್ನು ಮಾಡುತ್ತಿದ್ದಾರೆ. ಸರಿ ಸುಮಾರು ನಲವತ್ತೇಳು ವರ್ಷಗಳ ಕಾಲ ಶೀರೂರು ಮಠದ ಪೀಠದ ಮೇಲೆ ಕುಳಿತಿದ್ದ ಅವರು, ಶಿಷ್ಯ ಸ್ವೀಕಾರ ಮಾಡಿರಲಿಲ್ಲ.