ಮಗನಿಗೆ ಯತಿ ದೀಕ್ಷೆಯಿಂದ ಮಾಲ್ ನಿರ್ಮಾಣ ತನಕ ಶೀರೂರು ಶ್ರೀ ವಿವಾದಗಳು
ವೈರುಧ್ಯ-ವೈರತ್ವ, ಅಚ್ಚರಿಯ ವ್ಯಕ್ತಿತ್ವದ ಒಟ್ಟು ಮೊತ್ತದಂತಿದ್ದ ಶೀರೂರು ಮಠದ ಲಕ್ಷ್ಮೀವರ ತೀರ್ಥರು ಇನ್ನಿಲ್ಲ ಎಂಬ ಸುದ್ದಿಯೇ ಆಘಾತಕಾರಿ. ತಮ್ಮ ಸಾವಿನಲ್ಲೂ ಹಲವು ಪ್ರಶ್ನೆಗಳನ್ನು ಹಾಗೂ ಅನುಮಾನಗಳನ್ನು ಉಳಿಸಿ, ತೆರಳಿದ ಲಕ್ಷ್ಮೀವರ ತೀರ್ಥರು ಪುತ್ತಿಗೆ ಮಠಾಧೀಶರೊಬ್ಬರನ್ನು ಹೊರತುಪಡಿಸಿ ಅಷ್ಟಮಠದ ಇತರ ಸ್ವಾಮೀಜಿಗಳ ಜತೆ ಭಿನ್ನಾಭಿಪ್ರಾಯ ಹೊಂದಿದ್ದರು.
ಶೀರೂರು ಮಠದ ಪಟ್ಟದ ದೇವರನ್ನು ಏಕೆ ಹಿಂತಿರುಗಿಸಲ್ಲ ನಾನೂ ನೋಡ್ತೀನಿ ಎಂದು ಕಾನೂನು ಹೋರಾಟಕ್ಕೆ ತೋಳೇರಿಸಿ ನಿಂತಿದ್ದ ಸ್ವಾಮೀಜಿ ಸಾವಿನ ಬಗ್ಗೆಯೇ ಹಲವು ಬಗೆಯ ಮಾತು, ಅನುಮಾನ, ವ್ಯಾಖ್ಯಾನಗಳು ಕೇಳಿಬರುತ್ತಿವೆ. ಆದರೆ ಎಲ್ಲಕ್ಕೂ ಮುಖ್ಯವಾದ ಪ್ರಶ್ನೆ ಏನೆಂದರೆ ಶೀರೂರು ಶ್ರೀಗಳಿಗೂ - ಅಷ್ಟ ಮಠಕ್ಕೂ ಏಕಿಷ್ಟು ವೈಮನಸ್ಯ?
ಶೀರೂರು ಸ್ವಾಮೀಜಿ ಸಾವಿಗೂ ಮುನ್ನ ಹಾಗೂ ನಂತರದ 10 ಘಟನಾವಳಿ
ಲಕ್ಷ್ಮೀವರ ತೀರ್ಥರ ಬಗ್ಗೆ ಉಳಿದ ಮಠಾಧೀಶರಿಗೆ ಇದ್ದ ಅಸಮಾಧಾನ ಏನು? ಹಾಗೂ ಸ್ವತಃ ಶೀರೂರು ಶ್ರೀಗಳಿಗೆ ಉಳಿದ ಮಠಗಳ ಸ್ವಾಮಿಗಳ ಬಗ್ಗೆ ಇದ್ದ ತಕರಾರುಗಳೇನು? ಎರಡೂ ಇರಬಹುದು. ಏಕೆಂದರೆ ಅಷ್ಟ ಮಠಗಳ ಸ್ವಾಮಿಗಳ ಪೈಕಿ ರೆಬೆಲ್ ಸ್ಟಾರ್ ಗಳ ರೆಬೆಲ್ ಸ್ಟಾರ್ ಅಂದರೆ ಅದು ಲಕ್ಷ್ಮೀವರ ತೀರ್ಥರು. ಗುರುವಾರ ಸಂಜೆ ಹೊತ್ತಿನ ಬೆಳವಣಿಗೆಯನ್ನು ಅವಲೋಕಿಸಿ, ಅಸಮಾಧಾನದ ಕಾರಣಗಳನ್ನು ಸಹ ತೆರೆದಿಡುವ ವರದಿ ಇಲ್ಲಿದೆ.
ಉಡುಪಿಯಲ್ಲಿದ್ದರೂ ಅವರ್ಯಾರೂ ಬಂದಿಲ್ಲ
ಪೇಜಾವರ ಶ್ರೀಗಳು ಪ್ರವಾಸದಲ್ಲಿದ್ದಾರೆ. ಪುತ್ತಿಗೆಯ ಸುಗುಣೇಂದ್ರ ಶ್ರೀಗಳು ಅಮೆರಿಕಾದಲ್ಲಿದ್ದಾರೆ. ಆದ್ದರಿಂದ ಅಂತಿಮ ದರ್ಶನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನುಳಿದ ಐವರು ಅಂದರೆ, ಪಲಿಮಾರು ಮಠದ ಪೀಠಾಧಿಪತಿ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಸೋದೆ ಮಠದ ಪೀಠಾಧಿಪತಿ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಮಠದ ಪೀಠಾಧಿಪತಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಪೀಠಾಧಿಪತಿ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹಾಗೂ ಕಾಣಿಯೂರು ಮಠದ ಪೀಠಾಧಿಪತಿ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉಡುಪಿಯಲ್ಲಿದ್ದರೂ ಅಂತಿಮ ದರ್ಶನಕ್ಕೆ ಹಾಜರಾಗಿಲ್ಲ.
ವೃಂದಾವನಸ್ಥರಾಗುವ ಕೊನೆ ಕ್ಷಣದಲ್ಲೂ ಚರ್ಚೆಗೆ ಕಾರಣರಾದ ಶೀರೂರು ಶ್ರೀ
ಯತಿ ಧರ್ಮ ಪಾಲನೆ ಮಾಡಿಲ್ಲ ಎಂಬ ಅಸಮಾಧಾನ
ಮಾಧ್ವ ಸಂಪ್ರದಾಯದ ಯತಿ ಪರಂಪರೆಯಲ್ಲಿ ಹಲವು ಕಟ್ಟುಪಾಡುಗಳಿವೆ. ಘಟ್ಟದ ಮೇಲಿನ ಅಷ್ಟಮಠಗಳ ಯತಿಗಳು ಬಾಲ ಸನ್ಯಾಸಿಗಳಾಗಿ, ತಂದೆ - ತಾಯಿ ಬದುಕಿರುವಾಗಲೇ ಸನ್ಯಾಸವನ್ನು ಸ್ವೀಕರಿಸಬೇಕು. ಪೋಷಕರಲ್ಲಿ ಒಬ್ಬರು ಇಲ್ಲದಿದ್ದರೂ ಅಂಥವರು ಸನ್ಯಾಸಿಗಳಾಗಲೂ ಸಾಧ್ಯವಿಲ್ಲ. ಯತಿ ಪರಂಪರೆಗೆ ಬಂದ ಕೂಡಲೇ ಸನ್ಯಾಸ ನಿಯಮಗಳನ್ನು ಶಿರಸಾ ವಹಿಸಿ ಪಾಲಿಸಲೇಬೇಕು. ಆದರೆ ಶೀರೂರು ಶ್ರೀಗಳು ಮಾಧ್ವ ಮಠದ ಪರಂಪರೆಯ ಹಲವು ಕಟ್ಟುಪಾಡುಗಳನ್ನು ಮುರಿದಿದ್ದರು. ಇದೇ ಶ್ರೀಗಳು ಹಾಗೂ ಅಷ್ಟಮಠದ ಮಧ್ಯೆ ವೈಷಮ್ಯಕ್ಕೆ ಮೂಲ ಕಾರಣ.
ಖಾಸಗಿ ವಾಹಿನಿಯ ಸುದ್ದಿ ಮುಳುವಾಯಿತೇ?
ಶೀರೂರು ಶ್ರೀಗಳು 3 - 4 ತಿಂಗಳ ಕೆಳಗಷ್ಟೇ ಖಾಸಗಿ ವಾಹಿನಿಯ ಸ್ಟಿಂಗ್ ಆಪರೇಷನ್ ವೇಳೆ ಕೆಲವು ವಿಚಾರಗಳನ್ನು ಹೊರಹಾಕಿದ್ದರು. ಅಷ್ಟಮಠದ ಕೆಲವು ಯತಿಗಳು ಕೊಲೆ ಮಾಡಿದ್ದಾರೆ. ನನಗೆ ಮಕ್ಕಳಿದ್ದಾರೆ. ಅಷ್ಟ ಮಠದ ಇತರ ಯತಿಗಳಿಗೂ ಮಕ್ಕಳಿದ್ದಾರೆ. ನಮಗೆ ಅರಿವು ಬರುವ ಮುನ್ನವೇ ಸನ್ಯಾಸತ್ವ ನೀಡುತ್ತಾರೆ. ನಮಗೇನೂ ಆಸೆ ಇರುವುದಿಲ್ಲವೇ ಎಂದಿದ್ದರು. ಇದೇ ವಿಚಾರ ಅವರನ್ನು ಮಿಕ್ಕೆಲ್ಲಾ ಯತಿಗಳಿಂದ ದೂರ ಉಳಿಯುವಂತೆ ಮಾಡಿತು.
ಮಗನನ್ನು ಉತ್ತರಾಧಿಕಾರಿ ಮಾಡಬೇಕೆಂದಿದ್ದರೆ?
ಮಠದ ಮೂಲಗಳ ಪ್ರಕಾರ, ಶೀರೂರು ಮಠದ ಶ್ರೀಗಳೇ ಖಾಸಗಿ ವಾಹಿನಿ ಸ್ಟಿಂಗ್ ಆಪರೇಷನ್ ನಲ್ಲಿ ತಮಗೆ ಒಬ್ಬ ಮಗನಿದ್ದಾನೆ ಎಂದು, ಆ ಮಗನನ್ನು ಶಿಷ್ಯನನ್ನಾಗಿ ಮಾಡಿಕೊಂಡು, ಶೀರೂರು ಮಠದ ಪೀಠಾಧಿಪತಿಯಾಗಿ ಮಾಡಬೇಕೆಂಬ ಆಶಯ ಇತ್ತು. ಆದರೆ ಇದು ಮಠದ ಹಿರಿಯರಿಗೂ ಹಾಗೂ ಅಷ್ಟ ಮಠದ ಯತಿಗಳಿಗೂ ಸಮಂಜಸ ಎನಿಸಿರಲಿಲ್ಲ. ಆಗಿನಿಂದಲೂ ಉತ್ತರಾಧಿಕಾರಿ ವಿಚಾರವಾಗಿ ಲಕ್ಷ್ಮೀವರರಿಗೂ ಹಾಗೂ ಅಷ್ಟ ಮಠಕ್ಕೂ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು ಎಂಬ ಮಾತಿದೆ.
ಪುತ್ತಿಗೆ ಶ್ರೀಗಳು ಲಕ್ಷ್ಮೀವರರಿಗೂ ಸ್ನೇಹಸಂಬಂಧ
ಪಟ್ಟದ ದೇವರ ವಿಚಾರವಾಗಿ ಶೀರೂರು ಶ್ರೀಗಳು ಪುತ್ತಿಗೆ ಶ್ರೀಗಳನ್ನು ಹೊರತುಪಡಿಸಿ ಮಿಕ್ಕೆಲ್ಲರ ಮೇಲೆ ಕಾನೂನು ಸಮರಕ್ಕೆ ನಿಲ್ಲಲು ತಯಾರಿ ನಡೆಸಿದ್ದರು. ಇದಕ್ಕೆ ಮೂಲ ಕಾರಣವೇ ಪುತ್ತಿಗೆ ಶ್ರೀಗಳು ಲಕ್ಷ್ಮೀವರರಿಗೆ ನೀಡಿದ ಆಫರ್ ಎನ್ನುವವರಿದ್ದಾರೆ. ಈಗಾಗಲೇ ಪುತ್ತಿಗೆ ಮಠ ವಿದೇಶದಲ್ಲಿ ಸಾಕಷ್ಟು ಹೆಸರು ಮಾಡಿದೆ. ಅದೇ ನಿಟ್ಟಿನಲ್ಲಿ ಶೀರೂರು ಮಠವು ಮುಂದುವರಿಯುವಂತೆ ಲಕ್ಷ್ಮೀವರರಿಗೆ ಉತ್ತೇಜನ ನೀಡುತ್ತಿದ್ದರು. ಹಾಗೆಯೇ ನೈತಿಕ ಹಾಗೂ ಆರ್ಥಿಕ ಬೆಂಬಲವನ್ನು ಶೀರೂರು ಮಠಕ್ಕೆ ನೀಡುತ್ತಿದ್ದದ್ದು ಪುತ್ತಿಗೆ ಶ್ರೀಗಳು ಮಾತ್ರ. ಆ ಕಾರಣಕ್ಕೆ ಸ್ನೇಹತ್ವ ಬೆಳೆದಿತ್ತು.
ಆಸ್ತಿ ವಿವಾದ ಸುತ್ತಿಕೊಂಡಿದ್ದವು
ಅಕ್ರಮ ಪಾರ್ಕಿಂಗ್, ಅಂಗಡಿಗಳ ನೆಲಸಮ ಹೀಗೆ ನಾನಾ ವಿಚಾರಕ್ಕೆ ಪೇಜಾವರ ಶ್ರೀಗಳೊಂದಿಗೆ ಮಾತಿನ ಚಾಟಿಗೆ ಎಳೆದಿದ್ದರು ಲಕ್ಷ್ಮೀವರರು. ಮತ್ತೊಂದೆಡೆ ಸ್ವತಃ ಲಕ್ಷ್ಮೀವರ ಅವರನ್ನೇ ಆಸ್ತಿ ಹಣಕಾಸಿನ ವಿವಾದಗಳು ಸುತ್ತಿಕೊಂಡಿದ್ದವು. ಉಡುಪಿಯ ಸಮೀಪ ಮಾಲ್ ಒಂದರ ನಿರ್ಮಾಣದ ಹೆಸರಿನಲ್ಲಿ ಹಲವರಿಂದ ಸ್ವಾಮೀಜಿ ಮುಂಗಡ ಹಣ ಸ್ವೀಕರಿಸಿದ್ದರು. ಆದರೆ ಕಟ್ಟಡವನ್ನು ನಿರ್ಮಿಸದೆ, ಹಣ ವಾಪಸ್ ಮಾಡದೆ ವಂಚಿಸಿದರು ಎಂಬ ಮಾತು ಸಹ ಇದೆ. ಮಣಿಪಾಲದಲ್ಲಿ ಅವರ ಒಡೆತನದ ಕಟ್ಟಡವನ್ನು ರಸ್ತೆ ಅತಿಕ್ರಮಿಸಿ ಕಟ್ಟಲಾಗಿದ್ದು, ಈ ಸಂಬಂಧವೂ ವಿವಾದವಿದೆ. ಅಲ್ಲಿಂದ ಮಠದ ಖಜಾನೆ ಖಾಲಿಯಾಗಿತ್ತು ಎಂದು ಸಹ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಬೇಕು ಎಂಬ ಮಾತುಗಳು ಸಹ ಹೆಸರು ಹೇಳಲು ಇಚ್ಛಿಸದ ಮಠದ ಹಿರಿಯರು ತಿಳಿಸುತ್ತಾರೆ.