"ವಿಧಾನ ಪರಿಷತ್ ಸಭಾಪತಿ ಮೇಲೆ ಕಾಂಗ್ರೆಸ್ ರಾಜಕೀಯ ಒತ್ತಡ''
ಉಡುಪಿ, ಡಿಸೆಂಬರ್ 17: ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಕಾಂಗ್ರೆಸ್ ನಿಯಂತ್ರಣ ಮಾಡುವುದು ಬಿಟ್ಟಿದ್ದರೆ ಮೊನ್ನೆಯ ಗೊಂದಲ ಇರುತ್ತಿರಲಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಸಭಾಪತಿ ಮೇಲೆ ಕಾಂಗ್ರೆಸ್ ರಾಜಕೀಯ ಒತ್ತಡ ತರುತ್ತಿದ್ದು, ಕಾಂಗ್ರೆಸ್ ಮುಖಂಡರು ಸಭಾಪತಿ ಸ್ಥಾನವನ್ನು ಕಾಂಗ್ರೆಸ್ಸೀಕರಣ ಮಾಡಿದ್ದಾರೆ ಎಂದು ಸಚಿವ ಶ್ರೀನಿವಾಸ್ ಪೂಜಾರಿ ಕಿಡಿಕಾರಿದರು.
"ಶಕ್ತಿ ತುಂಬಿದ ಸಮುದಾಯಗಳನ್ನೇ ಮರೆತ ಸಿದ್ದರಾಮಯ್ಯ''
ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವರು, ಸಭಾಪತಿ ತಾನು ಹೇಳಿದಂತೆ ಕೇಳಬೇಕು ಎಂದು ಸಿದ್ದರಾಮಯ್ಯ ಸಹಿತ ಎಲ್ಲರೂ ಕಾಂಗ್ರೆಸ್ಸೀಕರಣ ಮಾಡುತ್ತಿದ್ದಾರೆ. ಕಾಂಗ್ರೆಸ್ಸೀಕರಣ ಮಾಡಿದ್ದರ ಫಲವೇ ವಿಧಾನಪರಿಷತ್ ಗದ್ದಲಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಈ ಗೊಂದಲ ನಿವಾರಣೆ ಆದ ಬಳಿಕ ಸಭಾಪತಿ ಯಾರಾಗಬೇಕೆಂಬ ನಿರ್ಣಯ ಆಗುತ್ತದೆ. ಸಭಾಪತಿ ಅನುಪಸ್ಥಿತಿಯಲ್ಲಿ ಉಪ ಸಭಾಪತಿ ಪೀಠಕ್ಕೆ ಹೋದ ವೇಳೆ ಗದ್ದಲ ನಡೆದಿದೆ. ಉಪ ಸಭಾಪತಿ ಮೇಲೆ ಕಾಂಗ್ರೆಸ್ ಹಲ್ಲೆ ಮಾಡಿದೆ. ನಮ್ಮ ನಾರಾಯಣಸ್ವಾಮಿ ಹೀರೋ ಆಗಿದ್ದಾರೆ ಎಂದು ಕಾಂಗ್ರೆಸ್ ಶಹಬ್ಬಾಸ್ ಗಿರಿ ಕೊಟ್ಟಿದೆ ಎಂದರು.
ಯಾರು ತಪ್ಪು ಮಾಡಿದ್ದಾರೆ ಇದು ಲೋಕ ಕಂಡ ಸತ್ಯ ಎಂದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಎಲ್ಲ ಗೊಂದಲಕ್ಕೆ ಕಾಂಗ್ರೆಸ್ ನೇರ ಕಾರಣ. ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸಭಾಪತಿ ಮೇಲೆ ಒತ್ತಡ ತಂದು ಗೊಂದಲ ನಿರ್ಮಾಣ ಮಾಡುತ್ತಿದೆ. ರಾಜ ಧರ್ಮ ಪಾಲನೆ ಮಾಡಬೇಕಾದ ಕಾಂಗ್ರೆಸ್ ನವರು ಸಭಾಪತಿ ಕೈ ಕಟ್ಟಿಹಾಕಿದ್ದಾರೆ, ಈ ಮೂಲಕ ಅವಿಶ್ವಾಸ ಗೊತ್ತುವಳಿ ಆಗದಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Recommended Video
ನಾವು ರಾಜ್ಯಪಾಲರ ಮೊರೆ ಹೋಗಿದ್ದೇವೆ. ಅವಿಶ್ವಾಸ ಗೊತ್ತುವಳಿ ಚರ್ಚೆ ಹಾಗೂ ಮತದಾನಕ್ಕೆ ಕೇಳಲಾಗಿದೆ. ಬಿಜೆಪಿ ವರಿಷ್ಠರು ಸಭಾಪತಿ ಯಾರಾಗಬೇಕೆಂದು ತೀರ್ಮಾನಿಸುತ್ತಾರೆ. ಸಭಾಪತಿಗೆ ನೀಡಲಾಗಿರುವ ಬೆಂಬಲ ಹಿಂಪಡೆದಿರುವ ಬಗ್ಗೆ ರಾಜ್ಯಪಾಲರಿಗೆ ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ. ಸಭಾಪತಿ ವಿಶ್ವಾಸಮತ ಕಳೆದುಕೊಂಡಿದ್ದಾರೆ ಎಂದು ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.