ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಗೂಂಡಾಗಿರಿ, ಯುವಕರಿಬ್ಬರ ಮೇಲೆ ಹಲ್ಲೆ
ಉಡುಪಿ, ಫೆಬ್ರವರಿ 19: ಬೆಂಗಳೂರಿನ ಶಾಂತಿನಗರದ ಶಾಸಕ ಎನ್.ಎ. ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರಕರಣ ರಾಜ್ಯದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಶಾಸಕನ ಪುತ್ರನ ಗೂಂಡಾಗಿರಿ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತಪಡಿಸಲಾಗುತ್ತಿದೆ. ಇಂತಹುದೇ ಇನ್ನೊಂದು ಕಾಂಗ್ರೆಸ್ ಮುಖಂಡನ ಗೂಂಡಾಗಿರಿ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿಯ ನಗರಸಭೆಯ ಸದಸ್ಯ ಕಾಂಗ್ರೆಸ್ ನ ರಮೇಶ್ ಪೂಜಾರಿ ಎಂಬವರು ನಡೆಸಿರುವ ಗೂಂಡಾಗಿರಿ ವ್ಯಾಪಕ ಚರ್ಚೆಗೆ ಗುರಿಯಾಗಿದ್ದು ಭಾರೀ ಖಂಡನೆ ವ್ಯಕ್ತವಾಗಿದೆ.
ಜಾಗದ ವಿಚಾರವಾಗ ಪ್ರಶ್ನಿಸಲು ಬಂದ ಇಬ್ಬರು ಯುವಕರ ಮೇಲೆ ರಮೇಶ್ ಪೂಜಾರಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಣೇಶ್ ಆಚಾರ್ಯ ಹಾಗು ಪ್ರಾಣೇಶ್ ಎಂಬವರ ಮೇಲೆ ರಮೇಶ್ ಹಾಗೂ ಅವರ ಸಹಚರರು ಹಲ್ಲೆ ನಡೆಸಿದ್ದಾರೆ.
ಹಲ್ಲೆಯಲ್ಲಿ ಗಾಯಗೊಂಡಿರುವ ಗಣೇಶ್ ಆಚಾರ್ಯ, ಪ್ರಾಣೇಶ್ ಅವರನ್ನು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯಲ್ಲಿ ರಮೇಶ್ ಪೂಜಾರಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ರಮೇಶ್ ಪೂಜಾರಿ ಹಾಗೂ ಅವರ ಸಹಚರರನ್ನು ಬಂಧಿಸಬೇಕೆಂದು ಒತ್ತಾಯ ಕೇಳಿ ಬಂದಿದೆ. ಈ ಹಿಂದೆ ಕೂಡ ನಗರಸಭೆಯಲ್ಲಿ ರಮೇಶ್ ಪೂಜಾರಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.