"ರಾಜಕೀಯ ಜಂಜಾಟ ಮರೆತು ಧಾರ್ಮಿಕ ಪ್ರವಾಸಕ್ಕೆ ಬಂದಿದ್ದೇನೆ''
ಉಡುಪಿ, ಜನವರಿ 19: ಎರಡು ದಿನಗಳ ಕಾಲ ಉಡುಪಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಎರಡನೇ ದಿನ ಮಂಗಳವಾರ ಕೂಡ ಟೆಂಪಲ್ ರನ್ ಮುಂದುವರಿಸಿದ್ದಾರೆ.
ಸೋಮವಾರದಂದು ಶ್ರೀಕೃಷ್ಣ ಮಠ ಮತ್ತು ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಪೂಜೆ ಮತ್ತು ಗೋಪೂಜೆ ನಡೆಸಿದ್ದ ಸಿಎಂ, ಮಂಗಳವಾರ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನ ಮತ್ತು ಕುಂಭಾಶಿಯ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಕುಂಬಾಶಿ ಮಹಾಗಣಪತಿ ದೇವಸ್ಥಾನದಲ್ಲಿ 1008 ಗಣಯಾಗ ಆರಂಭಗೊಂಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಈ ಯಾಗದಲ್ಲಿ ಭಾಗಿಯಾಗಲಿದ್ದಾರೆ. ಲೋಕ ಕಲ್ಯಾಣಾರ್ಥ ನಡಸಲಿರುವ 1008 ಗಣಯಾಗವನ್ನು ಹಾಸನದ ಜೆ.ಪಿ.ರಾಘವೇಂದ್ರ ರಾವ್ ಕುಟುಂಬದವರು ನಡೆಸುತ್ತಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಯಡಿಯೂರಪ್ಪ, ""ಯಾವಾಗಲೂ ನಾವು ರಾಜಕೀಯ ಗೊಂದಲದಲ್ಲಿ ಇರುತ್ತೇವೆ. ರಾಜಕೀಯ ಮರೆತು ಧಾರ್ಮಿಕ ಪ್ರವಾಸ ಮಾಡಲು ಬಂದಿದ್ದೇನೆ. ನಿನ್ನೆ ಶ್ರೀಕೃಷ್ಣಮಠ, ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ. ಇಂದು ಮಹಾಲಕ್ಷ್ಮಿ ದೇವಸ್ಥಾನ, ಗಣಪತಿ ದೇವಸ್ಥಾನಕ್ಕೆ ಭೇಟಿಯಾಗುತ್ತೇನೆ. ಕಾಪು, ಹೆಜಮಾಡಿ ಬಂದರು ಶಿಲಾನ್ಯಾಸವಿದ್ದು, ಮೀನುಗಾರರ ಸಮಸ್ಯೆಗಳು ಏನು ಎಂಬುದನ್ನು ತಿಳಿದುಕೊಳ್ಳುತ್ತೇನೆ, ಅಷ್ಟಮಠದ ಸ್ವಾಮೀಜಿಗಳನ್ನು ನಿನ್ನೆ ಭೇಟಿಯಾಗಿದ್ದೇನೆ'' ಎಂದರು.
ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದು ಎಲ್ಲರಿಗೂ ಸಮಾಧಾನ ತಂದಿದೆ ಎಂದ ಸಿಎಂ ಯಡಿಯೂರಪ್ಪ, ಸ್ವಾತಂತ್ರ್ಯ ಬಂದ ಕೂಡಲೇ ಗೋಹತ್ಯೆ ನಿಷೇಧ ಜಾರಿಗೆ ತರಬೇಕು ಎಂಬುದು ಮಹಾತ್ಮ ಗಾಂಧೀಜಿ ಕನಸಾಗಿತ್ತು. ಬೇರೆ ಬೇರೆ ಕಾರಣಕ್ಕೆ ಮುಂದೂಡುತ್ತಾ ಬಂದರು. ಕಾಯ್ದೆಯನ್ನು ನಾವು ತಕ್ಷಣಕ್ಕೆ ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
Recommended Video