ಒಂದೇ ಕೈಯಲ್ಲಿ ಮಾಸ್ಕ್ ತಯಾರಿಸುವ ಸಿಂಧೂರಿಗೆ ಸಿಎಂ ಮೆಚ್ಚುಗೆ
ಉಡುಪಿ, ಜೂನ್ 26: ಒಂದೇ ಕೈಯಲ್ಲಿ ಮಾಸ್ಕ್ ತಯಾರಿಸುತ್ತಾ ಪರೋಕ್ಷವಾಗಿ ಕೊರೊನಾ ವಾರಿಯರ್ಸ್ ಗೆ ನೆರವಾಗುತ್ತಿದ್ದಾಳೆ ಉಡುಪಿಯ ಈ ಪುಟ್ಟ ಹುಡುಗಿ. ಐದನೇ ತರಗತಿಯಲ್ಲಿ ಓದುತ್ತಿರುವ ಸಿಂಧೂರಿಯ ಈ ಕಾರ್ಯಕ್ಕೆ ಸಿಎಂ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಕಲ್ಯಾಣಪುರದ ಸುಧೀರ್ ಮತ್ತು ರೇಣುಕಾ ದಂಪತಿಯ ಮಗಳಾದ ಸಿಂಧೂರಿ ಮನೆಯಲ್ಲೇ ಕುಳಿತು ಮಾಸ್ಕ್ ಹೊಲಿಯುತ್ತಾ, ತನ್ನಿಂದಾದ ನೆರವನ್ನು ಚಾಚಿದ್ದಾಳೆ. ಸಿಂಧೂರಿ ಹುಟ್ಟುತ್ತಲೇ ತನ್ನ ಒಂದು ಕೈಯ ಬಲ ಕಳೆದುಕೊಂಡಿದ್ದಾಳೆ. ಇವಳ ಬಲಗೈ ಸದೃಢವಾಗಿದ್ದು, ಎಡಗೈ ಬಲಗುಂದಿದೆ. ಇದೀಗ ಒಂದೇ ಕೈಯಲ್ಲಿ ಮಾಸ್ಕ್ ತಯಾರಿ ಮಾಡುತ್ತಿದ್ದಾಳೆ.
ಉಡುಪಿ ಪುಟಾಣಿಯ ಈ ಮಾನವೀಯ ಕಳಕಳಿಗಿರಲಿ ಮೆಚ್ಚುಗೆ
ಉಡುಪಿಯ ಕಲ್ಯಾಣಪುರದ ಮೌಂಟ್ ರೋಸರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಿಂಧೂರಿ ಓದಿನಲ್ಲೂ ಮುಂದು. ಸದ್ಯಕ್ಕೆ ಶಾಲೆಗೆ ರಜೆ ಇರುವುದರಿಂದ ಕೊರೊನಾ ಸಮಯದಲ್ಲಿ ಅಗತ್ಯವಾಗಿ ಬೇಕಾಗುವ ಮಾಸ್ಕ್ ಹೊಲಿಯುವ ಮೂಲಕ ತನ್ನ ಕೈಲಾದ ಸೇವೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲೂ ಈಕೆಯ ಕಾರ್ಯ ಭಾರೀ ಸದ್ದು ಮಾಡಿದೆ. ಈಕೆಯ ಈ ಪುಟ್ಟ ಕಾರ್ಯ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೂ ಬಂದಿದ್ದು, ಅವರು ಟ್ವೀಟ್ ಮಾಡಿ ಸಿಂಧೂರಿ ಬೆನ್ನು ತಟ್ಟಿದ್ದಾರೆ.