ಕರಾವಳಿಯಲ್ಲಿ ಸಂಭ್ರಮದ ತೆನೆ ಹಬ್ಬ, ಕಬ್ಬು ತಿಂದು ಖುಷಿಪಟ್ಟ ಕ್ರೈಸ್ತರು
ಉಡುಪಿ, ಸೆಪ್ಟೆಂಬರ್.08: ಕರಾವಳಿಯಾದ್ಯಂತ ಇಂದು ಶನಿವಾರ ಕ್ರೈಸ್ತರು ಭಕ್ತಿ, ಶ್ರದ್ಧೆಯಿಂದ ತೆನೆ ಹಬ್ಬ ಆಚರಿಸಿದರು. ಮಾತೆ ಮೇರಿ ಹುಟ್ಟುಹಬ್ಬ ದಿನವನ್ನು ಈ ದಿನ ಕ್ರೈಸ್ತರು ತೆನೆ ಹಬ್ಬವನ್ನಾಗಿ ಆಚರಿಸುವುದು ಪದ್ಧತಿ.
ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಗೆ ಬೆಳಗಿನಿಂದಲೇ ಆಗಮಿಸಿದ ಭಕ್ತರು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಲಿ ಪೂಜೆ ನಡೆಸಿದರು. ನಂತರ ಶುಭಾಷಯಗಳನ್ನು ಹಂಚಿಕೊಂಡರು.
ಕರಾವಳಿ ಕ್ರೈಸ್ತರ ವಿಶೇಷ ಹಬ್ಬ 'ಮೊಂತಿ ಫೆಸ್ತ್': ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?
ಮುಖ್ಯವಾಗಿ ಭತ್ತದ ತೆನೆ, ಧವಸ ಧಾನ್ಯಗಳನ್ನು ಮೇರಿಯಮ್ಮನಿಗೆ ಸಮರ್ಪಿಸುವ ಮೂಲಕ ಹೊಸ ಫಲಗಳನ್ನು ಸ್ವಾಗತಿಸುವುದೂ ಈ ದಿನದ ಮಹತ್ವ. ತೆನೆ ಹಬ್ಬದಂದು ಹೂವಿಗೆ ವಿಶೇಷ ಮಹತ್ವ. ಈ ಹಿನ್ನೆಲೆಯಲ್ಲಿ ಕ್ರೈಸ್ತ ಬಾಂಧವರು ಇಂದು ಬೆಳಗ್ಗೆಯೇ ಹೂಗಳನ್ನು ಹಿಡಿದುಕೊಂಡು ಚರ್ಚ್ ಗಳಿಗೆ ಬಂದರು.
ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೂಗಳನ್ನು ತಂದು ಬಲಿಪೀಠಕ್ಕೆ ಅರ್ಪಿಸಿ ಕೃತಾರ್ಥರಾದರು. ದೂರದೂರುಗಳಲ್ಲಿರುವ ಬಂಧುಗಳು ಈ ದಿನ ಒಂದೇ ಕಡೆ ಸೇರುವುದು ವಾಡಿಕೆ. ತೆನೆ ಹಬ್ಬದಂದು ಬಂಧುಗಳು ಯಾವುದೇ ಊರಿನಲ್ಲಿರಲಿ, ಒಂದೆಡೆ ಸೇರಿ ಹೊಸ ಫಲಗಳ ಅಡುಗೆ ಸೇವಿಸಿ ಖುಷಿಪಡುತ್ತಾರೆ.
ಚಿತ್ರಗಳು : ಕೊಡಗಿನಲ್ಲಿ ಸರಳವಾಗಿ ಕೈಲ್ ಮೂರ್ತ ಹಬ್ಬ ಆಚರಣೆ
ಈ ವರ್ಷ ಹೊಸದಾಗಿ ಬೆಳೆದ ಧವಸ ಧಾನ್ಯ, ತರಕಾರಿಗಳನ್ನು ಎಲ್ಲೇ ಇದ್ದರೂ ತಂದು ಅದನ್ನು ಸೇವಿಸುವ ಮೂಲಕ ಸಸ್ಯಾಹಾರ ವ್ರತ ಕೈಗೊಳ್ಳುತ್ತಾರೆ. ಕ್ರೈಸ್ತರಿಗೆ ಕಬ್ಬು ಈ ದಿನದ ಸಿಹಿ ತಿನಿಸು. ಬಂದವರಿಗೆ ಚರ್ಚ್ ಗಳಲ್ಲಿ ಹೇರಳವಾಗಿ ಕಬ್ಬು ಹಂಚುವುದು ದಿನದ ವಿಶೇಷ.
ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಮೊಸರು ಕುಡಿಕೆ ಉತ್ಸವ
ಕ್ರೈಸ್ತರ ಪ್ರಾಬಲ್ಯ ಹೆಚ್ಚಿರುವ ಉಡುಪಿ ನಗರ, ಕಲ್ಯಾಣಪುರ, ಹೂಡೆ, ಸಂತೆಕಟ್ಟೆ , ಶಂಕರಪುರ, ಕಟಪಾಡಿ, ಉದ್ಯಾವರ ಮುಂತಾದೆಡೆಗಳಲ್ಲಿ ಮೇರಿ ಹುಟ್ಟುಹಬ್ಬದ ಸಂಭ್ರಮ ಜೋರಾಗಿತ್ತು.