ಸಿಎಎ ವಿರೋಧಿ ಸಭೆ: ಇಂದು ಉಡುಪಿಗೆ ಭೀಮ್ ಆರ್ಮಿಯ ಚಂದ್ರಶೇಖರ್ ಅಜಾದ್
ಉಡುಪಿ, ಜನವರಿ 30: ಸಹಬಾಳ್ವೆ ಉಡುಪಿ ವತಿಯಿಂದ ಇಂದು ಸಂಜೆ ಉಡುಪಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.
ಈ ಸಭೆಯಲ್ಲಿ ದೇಶದಾದ್ಯಂತ ಹೋರಾಟಗಳ ಮೂಲಕ ಚಿರಪರಿಚಿತರಾಗಿರುವ ಉತ್ತರಪ್ರದೇಶ ಮೂಲದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ದಿಕ್ಸೂಚಿ ಭಾಷಣ ಮಾಡಲಿದ್ದು, ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಇದಕ್ಕಾಗಿ ಸಜ್ಜಾಗಿದೆ. ಇವರಲ್ಲದೆ ವಿಧಾನಸಭೆಯ ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪೌರತ್ವ ಕಾಯ್ದೆ ವಿರುದ್ದ ಇನ್ನೂ ನಿಲ್ಲದ ಪ್ರತಿಭಟನೆ
ಉಡುಪಿ ಮಿಷನ್ ಆಸ್ಪತ್ರೆ ಬಳಿಯ ಕ್ರಿಶ್ಚಿಯನ್ ಪಿಯು ಕಾಲೇಜ್ ಕ್ರೀಡಾಂಗಣದಲ್ಲಿ ಈ ಬೃಹತ್ ಪ್ರತಿಭಟನಾ ಸಭೆ ನಡೆಯುತ್ತಿದ್ದು, ಜಿಲ್ಲೆಯಿಂದ 20 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಸೇರುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
ಅದೇ ರೀತಿ ಮಂಗಳೂರಿನ ಮಾಜಿ ಜಿಲ್ಲಾಧಿಕಾರಿ, ಚಿಂತಕ, ಸಾಮಾಜಿಕ ಹೋರಾಟಗಾರ ಸಸಿಕಾಂತ್ ಸೆಂಥಿಲ್, ಮಹೇಂದ್ರ ಕುಮಾರ್, ಕವಿತಾರೆಡ್ಡಿ ಮುಂತಾದವರು ಕಾರ್ಯಕ್ರಮದಲ್ಲಿ ಮಾತಾಡಲಿದ್ದಾರೆ.
ಈ ಪ್ರತಿಭಟನೆಯ ಅಂಗವಾಗಿ ಪಾದಯಾತ್ರೆಯನ್ನೂ ಹಮ್ಮಿಕೊಳ್ಳಲಾಗಿತ್ತು, ಆದರೆ ಭದ್ರತೆಯ ಕಾರಣ ಮುಂದಿಟ್ಟು ಪೊಲೀಸರು ಪಾದಯಾತ್ರೆಗೆ ಅನುಮತಿ ನೀಡಿಲ್ಲ. ಪ್ರತಿಭಟನೆ ಹಿನ್ನೆಲೆಯಲ್ಲಿ ಖಾಕಿಪಡೆ ನಗರದಾದ್ಯಂತ ಭಾರೀ ಬಂದೋಬಸ್ತ್ ಮಾಡಿದೆ. ಸಂಜೆ ನಾಲ್ಕು ಗಂಟೆಗೆ ಪ್ರತಿಭಟನಾ ಸಭೆ ಪ್ರಾರಂಭವಾಗಲಿದೆ.