ಅಷ್ಟಮಿ ಪ್ರಯುಕ್ತ ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಸಮರ್ಪಣೆ
Recommended Video
ಉಡುಪಿ, ಆಗಸ್ಟ್ 24: ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರ ಮುಂದುವರೆದಿದೆ. ಅಷ್ಟಮಿಯ ಬಹುಮುಖ್ಯ ಧಾರ್ಮಿಕ ವಿಧಿ ಕೃಷ್ಣನಿಗೆ ಅರ್ಘ್ಯ ಪ್ರದಾನ. ಶ್ರೀ ಕೃಷ್ಣನ ಜನ್ಮಾಷ್ಟಮಿಗೆ ನಿನ್ನೆ ದಿನವಿಡೀ ಉಪವಾಸದಲ್ಲಿದ್ದ ಪರ್ಯಾಯ ಶ್ರೀ ವಿದ್ಯಾದೀಶತೀರ್ಥ ಸ್ವಾಮೀಜಿ, ರಾತ್ರಿ 12:12ಕ್ಕೆ ಅರ್ಘ್ಯ ಸಲ್ಲಿಸಿದರು.
ಉಡುಪಿಯ ಕೃಷ್ಣನ ಕಂಡೀರಾ? ಅಷ್ಟಮಿಯ ಚಕ್ಕುಲಿ ತಿಂದೀರಾ?
ಕೃಷ್ಣ ಗುಡಿಯ ಪಕ್ಕದಲ್ಲಿದ್ದ ತುಳಸಿಗೆ ಶಂಖದ ಮೂಲಕ ನೀರು ಹಾಗೂ ಹಾಲು ಸಮರ್ಪಿಸುವ ಮೂಲಕ ಚಂದ್ರನಿಗೆ ಅರ್ಘ್ಯ ಸಮರ್ಪಿಸಿದರು. ಚಂದ್ರನಿಗೆ ಅರ್ಘ್ಯ ಸಮರ್ಪಿಸಿದ ಬಳಿಕ ಕೃಷ್ಣನ ಮೂರ್ತಿಗೆ ಹಾಲು, ನೀರಿನ ಮೂಲಕ ಅರ್ಘ್ಯ ಸಮರ್ಪಿಸಿ ಉಂಡೆ ಚಕ್ಕುಲಿ ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ಮಾಡುವ ಮೂಲಕ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಿದರು.
ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಯತಿ ಈಶಪ್ರಿಯ ಸ್ವಾಮೀಜಿ ಕೂಡ ಚಂದ್ರನಿಗೆ ಶಂಖದಿಂದ ಹಾಲು ಹಾಗೂ ನೀರಿನಿಂದ ಅರ್ಘ್ಯ ಸಮರ್ಪಿಸಿದರು. ಇದೇ ವೇಳೆ ಶ್ರೀಗಳ ಅರ್ಘ್ಯ ಸಮರ್ಪಣೆ ಬಳಿಕ ದಿನವಿಡೀ ಉಪವಾಸದಲ್ಲಿದ್ದ ಭಕ್ತ ಸಮೂಹ ಕೃಷ್ಣನ ಗುಡಿಯ ಎದುರು ಸಾಮೂಹಿಕವಾಗಿ ನೀರಿನಿಂದ ಅರ್ಘ್ಯ ಸಮರ್ಪಿಸಿ ಪುನೀತರಾದರು. ಇದರೊಂದಿಗೆ ಅಷ್ಠಮಿಯ ಬಹುಮುಖ್ಯ ಧಾರ್ಮಿಕ ವಿಧಿ ಮುಗಿದಂತಾಗಿದೆ.
ಇವತ್ತು ವಿಟ್ಲಪಿಂಡಿ ಉತ್ಸವಕ್ಕೆ ಕೃಷ್ಣಮಠ ಸಜ್ಜುಗೊಂಡಿದ್ದು, ಶ್ರೀಕೃಷ್ಣನ ವಿವಿಧ ಲೀಲೆಗಳು ರಥಬೀದಿಯಲ್ಲಿ ಅನಾವರಣಗೊಳ್ಳಲಿವೆ.