ಮಣಿಪಾಲ ಉದ್ಯಮಿ ಕೊಲೆ:ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಿದ ಪೊಲೀಸರು
ಉಡುಪಿ, ಜುಲೈ.30: ರಿಕ್ರಿಯೇಷನ್ ಕ್ಲಬ್ ನಡೆಸುತ್ತಿದ್ದ ಉದ್ಯಮಿ ಗುರುಪ್ರಸಾದ್ ಭಟ್ (44) ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ಕೊಡಂಕೂರು ನ್ಯೂ ಕಾಲನಿಯ ಪ್ರದೀಪ್ ಪೂಜಾರಿ (36), ಕಲ್ಯಾಣಪುರದ ಸುಜಿತ್ ಪಿಂಟೋ (35) ಹಾಗೂ ಕುಂಜಿಬೆಟ್ಟು ಕಕ್ಕುಂಜೆಯ ರಾಜೇಶ್ ಪೂಜಾರಿ (30) ಎಂದು ಗುರುತಿಸಲಾಗಿದೆ.
ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಉದ್ಯಮಿಯನ್ನು ದುಷ್ಕರ್ಮಿಗಳ ತಂಡ ಭಾನುವಾರ ಮಧ್ಯಾಹ್ನ ಕೊಲೆ ಮಾಡಿತ್ತು.
ಹಾಡಹಗಲೇ ಮಣಿಪಾಲದಲ್ಲಿ ಇಸ್ಪೀಟ್ ಕ್ಲಬ್ ಮಾಲೀಕನ ಹತ್ಯೆ
ಪ್ರಕರಣ ದಾಖಲಿಸಿಕೊಂಡ ಮಣಿಪಾಲ ಪೊಲೀಸರು, ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಮಾರ್ಗದರ್ಶನದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕುಂದಾಪುರದ ಕಂಡ್ಲೂರು ಚೆಕ್ಪೋಸ್ಟ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟೂರಿಸ್ಟ್ ಬಿಳಿ ಬಣ್ಣದ ಒಮ್ನಿ ಕಾರಿನಲ್ಲಿ ಬಂದ ನಾಲ್ವರು ಕ್ಲಬ್ಗೆ ನುಗ್ಗಿ ಗುರುಪ್ರಸಾದ್ ಭಟ್ ಮೇಲೆ ಹಲ್ಲೆ ನಡೆಸಿ ಕುತ್ತಿಗೆಯ ಹಿಂಭಾಗಕ್ಕೆ ಚೂರಿಯಿಂದ ಇರಿದು ಅದೇ ಕಾರಿನಲ್ಲಿ ಪರಾರಿಯಾಗಿದ್ದರು. ಈ ಕಟ್ಟಡದಲ್ಲಿ ಸೆವೆನ್ ಹೆವೆನ್ ಬಾರ್, ಹೊಟೇಲು, ಪಬ್, ಲಾಡ್ಜಿಂಗ್, ಕ್ಲಬ್ಗಳಿದ್ದು, ಪ್ರತಿಯೊಂದು ಕಡೆಗಳಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಅಲ್ಲದೇ, ಕೊಲೆ ನಡೆದ ಕ್ಲಬ್ನಲ್ಲಿಯೂ ಸುಮಾರು ಐದು ಸಿಸಿ ಕ್ಯಾಮೆರಾಗಳಿವೆ. ದುಷ್ಕರ್ಮಿಗಳು ಬಂದ ಬಿಳಿಬಣ್ಣ ಓಮ್ನಿ ಕಾರು, ಅದರ ನಂಬರ್ ಲಾಡ್ಜ್ ಹೊರಭಾಗದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದರೆ, ಕ್ಲಬ್ ಒಳಗಿನ ಸಿಸಿ ಕ್ಯಾಮೆರಾದಲ್ಲಿ ನಾಲ್ವರು ದುಷ್ಕರ್ಮಿಗಳು ಗುರುಪ್ರಸಾದ್ ಭಟ್ಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿಯುವ ಹಾಗೂ ಮೂವರು ಗುರು ಪ್ರಸಾದ್ ಭಟ್ರನ್ನು ಮೊಣಕಾಲಿನಲ್ಲಿ ಕುಳ್ಳಿರಿಸಿ, ಕುತ್ತಿಗೆಯನ್ನು ಬಗ್ಗಿಸಿ, ಓರ್ವ ಚೂರಿಯಿಂದ ಅವರ ಕುತ್ತಿಗೆಯ ಹಿಂಭಾಗಕ್ಕೆ ಬಲವಾಗಿ ಇರಿಯುವ ದೃಶ್ಯ ಕೂಡ ದಾಖಲಾಗಿದೆ.
ಮುಂಬೈ: ಗುಂಡು ಹಾರಿಸಿ ಉದ್ಯಮಿಯನ್ನು ಕೊಂದ ದುಷ್ಕರ್ಮಿಗಳು
ಕಟ್ಟಡ ಹಾಗೂ ಕ್ಲಬ್ನ ಸಿಸಿ ಕ್ಯಾಮೆರಾಗಳ ಫೂಟೇಜ್ ಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚಿದರು. ಅಲ್ಲದೇ, ನಿನ್ನೆ ರಾತ್ರಿ ಬೆದರಿಕೆ ಕರೆ ಬಂದಿರುವ ಗುರುಪ್ರಸಾದ್ ಭಟ್ ಮೊಬೈಲ್ನ್ನು ಕೂಡ ಪೊಲೀಸರು ವಶಪಡಿಸಿಕೊಂಡು, ಅದರಲ್ಲಿನ ಕಾಲ್ ರೆಕಾರ್ಡ್ಗಳನ್ನು ಕೂಡ ಆಲಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರೆಂದು ತಿಳಿದು ಬಂದಿದೆ.
ಗುರುಪ್ರಸಾದ್ ಹಲವು ಮಂದಿಯ ಜೊತೆ ಹಣಕಾಸು ವ್ಯವಹಾರ ಹೊಂದಿದ್ದು, ಇದೇ ಕಾರಣಕ್ಕೆ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿದ್ದಾರೆಂಬುದು ತಿಳಿದುಬಂದಿದೆ. ಬಹಳಷ್ಟು ದುಂದು ವೆಚ್ಚ ಮಾಡುತ್ತಿದ್ದ ಗುರುಪ್ರಸಾದ್, ಹಲವು ಮಂದಿಯಿಂದ ಹಣ ಪಡೆದು ಹಿಂತಿರುಗಿಸದೆ ದ್ವೇಷ ಕಟ್ಟಿಕೊಂಡಿದ್ದರು ಎಂದು ಹೇಳಲಾಗಿದೆ.