ಗಂಗೊಳ್ಳಿಯ ಬಲೆಗೆ ಬಿದ್ದ ಭಾರೀ ಗಾತ್ರದ ಸ್ಟಿಂಗ್ ರೇ ಮೀನುಗಳು
ಉಡುಪಿ. ಜೂನ್ 7: ಕರಾವಳಿಯಲ್ಲಿ ಮುಂಗಾರು ಮಳೆ ಅರಂಭವಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಡಲ ತೀರ ಕಳೆದ ಒಂದು ವಾರದಿಂದ ಪ್ರಕ್ಷುಬ್ದಗೊಂಡಿದ್ದು ಸಮುದ್ರದ ನೀರಿನ ಬಣ್ಣ ಕಂದು ಬಣ್ಣಕ್ಕೆ ತಿರುಗಿದೆ.
ಭಾರೀ ಮಳೆಯಿಂದಾಗಿ ಬೆಟ್ಟದಿಂದ ಹರಿದುಬರುವ ಮಳೆ ನೀರು ಸಮುದ್ರವನ್ನು ಸೇರುತ್ತದೆ. ಕಡಲು ಪ್ರಕ್ಷುಬ್ದಗೊಳ್ಳುತ್ತಿದ್ದಂತೆ ಕಡಲಾಳದ ಮೀನುಗಳು ಆಹಾರ ಅರಸಿ ಸಮುದ್ರ ಕಿನಾರೆಯತ್ತ ಬರುತ್ತವೆ. ಈ ಸಂದರ್ಭ ಸಂಪ್ರದಾಯಿಕ ಮೀನುಗಾರರಿಗೆ ಅತ್ಯಂತ ಹೆಚ್ಚು ಲಾಭ ತರುವ ಸುಗ್ಗಿಕಾಲ.
ಮಂಗಳೂರು ರೈಲ್ವೆ ಸ್ಟೇಷನ್ ನಲ್ಲಿ ಕಳ್ಳರು, ಕಾಸ್ಟ್ಲಿ ಮೀನೇ ಕಣ್ಮರೆ
ಮಳೆಗಾಲ ಆರಂಭವಾಗುತ್ತಿದ್ದಂತೆ 2 ತಿಂಗಳು ಆಳ ಸಮುದ್ರ ಮೀನುಗಾರಿಕೆಗೆ ರಜೆ ಘೋಷಣೆ ಯಾಗಿರುವ ಹಿನ್ನೆಲೆಯಲ್ಲಿ ನಾಡ ದೋಣಿ ಮೀನುಗಾರಿಕೆ ಕರಾವಳಿ ಜಿಲ್ಲೆಗಳಲ್ಲಿಆರಂಭವಾಗಿದೆ. ಇದರ ನಡುವೆ ಕುಂದಾಪುರದ ನಾಡದೋಣಿ ಮೀನುಗಾರರಿಗೆ ಬಂಪರ್ ಲಾಟರಿ ಹೊಡೆದಂತಾಗಿದೆ.
ಕುಂದಾಪುರ ತಾಲೂಕಿನ ಗಂಗೊಳ್ಳಿಯ ಮಡಿಕಲ್ ಬೀಚ್ ನಲ್ಲಿ ನಾಡದೋಣಿ ಮೀನುಗಾರರ ಬಲೆಗೆ ಭಾರೀ ಗಾತ್ರದ ತೊರಕೆ ಮೀನುಗಳು ಬಿದ್ದಿವೆ. ಈ ಕುರಿತ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಂಗೊಳ್ಳಿಯ ಮಡಿಕಲ್ ಕಡಲ ತಡಿಯಲ್ಲಿ ಹಾಕಿದ ಮೀನುಗಾರರ ಬಲೆಗೆ ದೊಡ್ಡ ಗಾತ್ರದ ತೊರಕೆ ಅಥವಾ ಸ್ಟಿಂಗ್ ರೇ ಮೀನುಗಳು ಬಿದ್ದಿದ್ದು, ಒಂದೊಂದು ಮೀನುಗಳು 30-40 ಕಿಲೋ ಭಾರವಿದೆ. ಈ ಮೀನುಗಳನ್ನು ಕಬ್ಬಿಣದ ಸಲಾಕೆಗಳನ್ನು ಉಪಯೋಗಿಸಿ ದಡಕ್ಕೆ ಎಳೆದು ತರಲಾಗುತ್ತಿರುವ ದೃಶ್ಯಗಳ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಟಿಂಗ್ರೆ ಮೀನಿಗೆ ಸ್ಥಳೀಯವಾಗಿ ತೊರಕೆ ಎಂದು ಕರೆಯಲಾಗುತ್ತದೆ. ಚಪ್ಪಟೆಯಾಗಿರುವ ಈ ಮೀನುಗಳಿಗೆ ಬಾಲವಿರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಈ ಮೀನುಗಳು ಹೆಚ್ಚಾಗಿ ಮೊಟ್ಟೆಯಿಡಲು ದಡದ ಕಡೆ ಬರುತ್ತದೆ. ಬಾಲದಲ್ಲಿ ಚೂಪಾದ ಮುಳ್ಳುಗಳನ್ನು ಹೊಂದಿರುವ ಈ ಮೀನು ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತದೆ.
ಈ ಮೀನುಗಳು ಅಪಾಯದ ಮುನ್ಸೂಚನೆ ದೊರೆತರೆ ಮನುಷ್ಯನ ಮೇಲೂ ದಾಳಿ ಮಾಡುತ್ತವೆ. ಈ ಮೀನಿನ ಮುಳ್ಳು ಅತ್ಯಂತ ವಿಷಕಾರಿಯಾಗಿದ್ದು, ಈ ಮೀನಿನಲ್ಲಿ ನಂಜಿನ ಅಂಶ ಬಹಳ ಇರುತ್ತದೆ. ಒಂದೊಮ್ಮೆ ಮೀನಿನ ಮುಳ್ಳು ಚುಚ್ಚಿದರೆ ತೀವ್ರ ರಕ್ತಸ್ರಾವವಾಗಿ ಸಾಯುವ ಸಾಧ್ಯತೆಗಳಿರುತ್ತವೆ.