ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮೇ 18ರಂದು ಬ್ರಹ್ಮಕಲಶೋತ್ಸವ
ಉಡುಪಿ, ಮೇ 01 : ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಮೇ 18ರಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು ಮೇ 14ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಸುತ್ತುಪೌಳಿಯನ್ನು ನವೀಕರಿಸಿದ ಹಿನ್ನೆಲೆಯಲ್ಲಿ ಸುತ್ತುಪೌಳಿಯ ಸಮರ್ಪಣೆ ಮತ್ತು 1,008 ರಜತಕಲಶ ಸಹಿತ ಬ್ರಹ್ಮಕಲಶೋತ್ಸವ ನಡೆಯುತ್ತಿದೆ ಎಂದು ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.[ಉಡುಪಿ ಶ್ರೀಕೃಷ್ಣ ದೇವಾಲಯ ನವೀಕರಣಕ್ಕೆ ಜಿಲ್ಲಾಡಳಿತ ತಡೆ]
ಸುತ್ತುಪೌಳಿಯ ಮರ, ಕಂಬಗಳು ಶಿಥಿಲಗೊಂಡಿದ್ದವು. ಹೀಗಾಗಿ ನವೀಕರಣ ಮಾಡಿದ್ದೇವೆ. ಸುತ್ತುಪೌಳಿಯನ್ನು ಗಾಳಿ, ಬೆಳಕು ಬರುವಂತೆ ಮತ್ತು ದಾರುಶಿಲ್ಪದೊಂದಿಗೆ ನವೀಕರಿಸಲಾಗಿದ್ದು ಪಾರ್ಕಿಂಗ್ ಪ್ರದೇಶದ ಪಕ್ಕ ಈಗಾಗಲೇ 2 ಕೋಟಿ ರು. ವೆಚ್ಚದಲ್ಲಿ ಶ್ರೀ ವಿಶ್ವಮಾನ್ಯ ಮಂದಿರ ಛತ್ರವನ್ನು ನಿರ್ಮಿಸಲಾಗಿದೆ ಎಂದರು.
ಈಗಾಗಲೇ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದು, ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳಿಗೆ ಆಹ್ವಾನ ನೀಡಿದ್ದೇವೆ. ಮೇ 14ರಿಂದಲೇ ಕೃಷ್ಣ ಮಠದಲ್ಲಿ ವಿವಿಧ ಧಾರ್ಮಿಕ ಪೂಜೆ ಪುನಸ್ಕಾರಗಳು, ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹಾಗೆಯೇ ಮೇ 18ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಹೇಳಿದರು.