ಮರವಂತೆಯಲ್ಲಿ ಬೋರ್ ವೆಲ್ ಕೊರೆಯುವ ವೇಳೆ ಭೂ ಕುಸಿತ: ಯುವಕನ ರಕ್ಷಣೆ
ಉಡುಪಿ, ಫೆಬ್ರವರಿ 16: ಬೋರ್ ವೆಲ್ ಕೊರೆಯುವ ವೇಳೆ ಮಣ್ಣು ಕುಸಿತ ಸಂಭವಿಸಿದ್ದರಿಂದ, ಬೋರ್ ವೆಲ್ ತೋಡುವ ಸ್ಥಳದಲ್ಲಿದ್ದ ರೋಹಿತ್ ಖಾರ್ವಿ ಎಂಬುವವರು 15 ಅಡಿ ಮಣ್ಣಿನೊಳಗಡೆ ಸಿಲುಕಿದ್ದರು. ಹಲವು ಗಂಟೆಗಳ ನಿರಂತರ ಪ್ರಯತ್ನದಿಂದ ರಕ್ಷಣೆ ಮಾಡಲಾಯಿತು.
ಉಡುಪಿಯ ಮರವಂತೆಯಲ್ಲಿ ಈ ಘಟನೆ ನಡೆದಿದ್ದು, ಬೋರ್ ವೆಲ್ ಕೊರೆಯುವ ವೇಳೆ ಪೈಪ್ ಸುತ್ತ ಭೂಮಿ ಒಮ್ಮಿಂದೊಮ್ಮೆಲೇ ಕುಸಿದಿದ್ದರಿಂದ ಅಲ್ಲೇ ನಿಂತಿದ್ದ ರೋಹಿತ್ ಎಂಬುವವರು ಮಣ್ಣಿನ ಜೊತೆಗೆ ಕುಸಿದಿದ್ದರು. ರೋಹಿತ್ ಖಾರ್ವಿ ಮೇಲೆತ್ತಲು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವೈದ್ಯರು ಸ್ಥಳಕ್ಕೆ ಆಗಮಿಸಿದ್ದರು. ಇವರಿಗೆ ಸ್ಥಳೀಯರು ಅಗತ್ಯ ಸಹಾಯ ಮಾಡಿ ಯುವಕ ರೋಹಿತ್ ನನ್ನು ಮೇಲೆತ್ತಿದ್ದಾರೆ.
ಜೆಸಿಬಿಯ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಹೊಂಡದ ಸುತ್ತ ಮಣ್ಣು ಕುಸಿಯದಂತೆ ಡ್ರಮ್ ಅಳವಡಿಕೆ ಮಾಡಿ, ಸುರಕ್ಷಿತವಾಗಿ ಹೊರ ಬಂದಿದ್ದಾರೆ. ರೋಹಿತ್ ಖಾರ್ವಿ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳದಲ್ಲಿರುವವರ ಜೊತೆ ಮಾತನಾಡುತ್ತಿದ್ದಾನೆ.
ಬೋರ್ ವೆಲ್ ಕೊರೆಯುವ ಜಾಗದಲ್ಲಿ ಭೂಮಿಯ ಮಣ್ಣು ಸಡಿಲವಾಗಿರುವ ಕಾರಣ ಕುಸಿದಿರಬಹುದು ಎಂದು ಹೇಳಲಾಗಿದೆ. ಮಣ್ಣಿನಡಿ ಸಿಲುಕಿರುವ ರೋಹಿತ್ ನನ್ನು ಪಾರು ಮಾಡಲು ಹಲವು ಗಂಟೆಗಳ ಪ್ರಯತ್ನ ಸಫಲವಾಗಿದೆ.