ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್ದಾಸ್ ಕುರಿತು ಕೃತಿ ಬಿಡುಗಡೆ
ಉಡುಪಿ, ಏಪ್ರಿಲ್ 12 : ದುಬೈನಲ್ಲಿ ಕರ್ನಾಟಕ ಸಂಘವನ್ನು ಕಟ್ಟಿ, ಹಲವಾರು ದಶಕಗಳಿಂದ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಗಲ್ಫ್ ಕನ್ನಡಿಗ ಬಿಜಿ ಮೋಹನ್ ದಾಸ್ ಅವರ ಕುರಿತ 'ನಾಡಿಗೆ ನಮಸ್ಕಾರ' ಕೃತಿ ಉಡುಪಿಯಲ್ಲಿ ಏಪ್ರಿಲ್ 15ರಂದು ಶನಿವಾರ ಬಿಡುಗಡೆಯಾಗಲಿದೆ.
'ನಾಡಿಗೆ ನಮಸ್ಕಾರ' ಎನ್ನುವ ಕಾಂತಾವರ ಕನ್ನಡ ಸಂಘದ ಗ್ರಂಥಮಾಲೆ ವಿಶೇಷವಾಗಿ ಕನ್ನಡ ಭಾಷೆ ಮತ್ತು ಕಲೆಗೆ ನೀಡಿದ ವ್ಯಕ್ತಿಗಳ ಸೇವೆಯನ್ನು ಗುರುತಿಸಿ, ಅವರ ಬಗ್ಗೆ ಕೃತಿ ರಚಿಸಿ ಬಿಡುಗಡೆಗೊಳಿಸುವ ಕೆಲಸ ಸುಮಾರು ಮೂವತ್ತು ವರ್ಷಗಳಿಂದ ಮಾಡುತ್ತಿದೆ. ಈ ಬಾರಿಯ ವ್ಯಕ್ತಿ ಆಯ್ಕೆ ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್ರವರು. ಅವರ ಬಗ್ಗೆ ಕೃತಿಯನ್ನು ರಚಿಸಿದವರು ಸಾಹಿತಿ ಅಂಶುಮಾಲಿ.
ಕೃತಿ ಅನಾವರಣ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉಡುಪಿಯ ಸುಹಾಸಂರವರು ತಾ. 15.04.2017 ಶನಿವಾರದಂದು ಬೆಳಿಗ್ಗೆ 11-00 ಗಂಟೆಗೆ ಕಿದಿಯೂರು ಹೋಟೆಲ್ನ ಮಹಾಜನ ಸಭಾಭವನದಲ್ಲಿ ಸಾದರಪಡಿಸುತ್ತಿದ್ದಾರೆ.
ಮಾಜಿ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡಿಸ್ರವರು ಕೃತಿ ಅನಾವರಣ ಮಾಡಿ ಅಭಿನಂದಿಸಲಿದ್ದಾರೆ. ಕಾರ್ಯಕ್ರಮದ ಅತಿಥಿಗಳಾಗಿ ತಾವರ ಕರ್ನಾಟಕ ಸಂಘದ ಅಧ್ಯಕ್ಷರಾದ ಸಾಹಿತಿ ಡಾ| ನಾ. ಮೊಗಸಾಲೆ, ಉದಯವಾಣಿಯ ನಿವೃತ್ತ ಸಂಪಾದಕ ಎನ್. ಗುರುರಾಜ್, ಸಾಹಿತಿ ಅಂಶುಮಾಲಿ, ಸುಹಾಸಂನ ಅಧ್ಯಕ್ಷರಾದ ಎಚ್. ಶಾಂತರಾಜ್ ಐತಾಳ್ ಹಾಗೂ ಕಾರ್ಯದರ್ಶಿ ಎಚ್. ಗೋಪಾಲ ಭಟ್ಟ (ಕು.ಗೋ.) ಉಪಸ್ಥಿತರಿರುವರು.
ಮೋಹನದಾಸ್ ಅವರು ಸಂಕ್ಷಿಪ್ತ ಪರಿಚಯ : 80ರ ದಶಕದ ಆದಿಯಲ್ಲಿ ಮಣಿಪಾಲದಿಂದ ಗಲ್ಪ್ ಸೇರಿದ ಬಿ.ಜಿ. ಮೋಹನ್ದಾಸ್ರವರು ಯು.ಎ.ಇ.ಯ ದುಬೈಯಲ್ಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘವನ್ನು ಕಟ್ಟಿದವರಲ್ಲೊಬ್ಬರು.
ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಕನ್ನಡದ ಹಲವಾರು ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಗೆ ಸೇವೆ ಸಲ್ಲಿಸಿದವರು. ಸುಮಾರು 40 ವರ್ಷಗಳ ನಿರಂತರ ಸಾಹಿತ್ಯ ಸಂಸ್ಕೃತಿ ಸಮಾಜ ಸೇವೆಯ ಮೂಲಕ ಜನಮನ ಗೆದ್ದವರು. ಅವರು ಹುಟ್ಟುಹಾಕಿದ ಗಲ್ಫ್ ಕನ್ನಡಿಗ.ಕಾಮ್ ವೆಬ್ಸೈಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ.