ಅಪಹರಣಗೊಂಡಿದ್ದ ಮಗುವಿನ ಮೃತದೇಹ ನದಿಯಲ್ಲಿ ಪತ್ತೆ; ಹೆಚ್ಚಿದೆ ಶಂಕೆ
ಉಡುಪಿ, ಜುಲೈ 12: ಕುಂದಾಪುರದ ಎಡಮೊಗ್ಗೆಯ ಕುಮ್ಟಿಬೇರು ಎಂಬಲ್ಲಿ ಅಪಹರಿಸಲಾದ ಮಗುವಿನ ಮೃತದೇಹ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ.
ನಿನ್ನೆ ಬೆಳಗ್ಗಿನ ಜಾವ ಮುಸುಕುಧಾರಿ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ 2 ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ್ದು ಭಾರೀ ಸುದ್ದಿಯಾಗಿತ್ತು. ಕುಮ್ಟಿಬೇರು ನಿವಾಸಿ ಸಂತೋಷ್ ನಾಯ್ಕ್ ಹಾಗೂ ರೇಖಾ ನಾಯ್ಕ್ ದಂಪತಿಯ 2 ವರ್ಷದ ಹೆಣ್ಣು ಮಗು ಸಾನ್ವಿಕಾ ಎಂಬಾಕೆಯನ್ನು ಅಪಹರಿಸಿರುವ ಬಗ್ಗೆ ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಡಮೊಗ್ಗೆ: ತಾಯಿ ಜೊತೆ ಮಲಗಿದ್ದ ಮಗುವಿನ ಅಪಹರಣ
ಸಂತೋಷ್ ನಾಯ್ಕ್ ಹೊಸಂಗಡಿಯಲ್ಲಿರುವ ಪವರ್ ಪ್ರಾಜೆಕ್ಟ್ ನಲ್ಲಿ ವಾಟರ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು, ಬುಧವಾರ ಅವರಿಗೆ ರಾತ್ರಿ ಪಾಳಿಯಿದ್ದರಿಂದ ಮನೆಯಲ್ಲಿರಲಿಲ್ಲ.
ತಾನು, ಮಗ ಹಾಗೂ ಹೆಣ್ಣು ಮಗು ಮಲಗಿರುವ ಸಂದರ್ಭ ಮನೆಯ ಹಿಂಬದಿಯ ಬಾಗಿಲಿನ ಮೂಲಕ ಒಳನುಗ್ಗಿದ ಮುಸುಕುಧಾರಿ ವ್ಯಕ್ತಿ ಮಗುವನ್ನು ಎತ್ತಿಕೊಂಡಿದ್ದಾನೆ. ಮಗು ಅಳುವುದನ್ನು ಕೇಳಿಸಿಕೊಂಡು, ಎಚ್ಚರಗೊಂಡು ನಿದ್ದೆಯ ಮಂಪರಿನಲ್ಲಿ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಆ ವ್ಯಕ್ತಿ ಮಗುವನ್ನು ಎತ್ತಿಕೊಂಡು ಮನೆ ಸಮೀಪದ ಕುಬ್ಜಾ ನದಿಯನ್ನು ದಾಟಿ ಪರಾರಿಯಾದ ಎಂದು ರೇಖಾ ತಿಳಿಸಿದ್ದರು.
ಉಡುಪಿಯಲ್ಲಿ ಖಾಸಗಿ ಬಸ್ ನೌಕರನ ಬರ್ಬರ ಹತ್ಯೆ
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದರು. ಇದೀಗ ಮಗುವಿನ ಮೃತದೇಹ ನದಿಯಲ್ಲಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸರು ಮಗುವಿನ ಅಪಹರಣ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. ಮಗುವಿನ ಸಾವಿಗೆ ನಿಖರ ಕಾರಣ ಹುಡುಕುತ್ತಿದ್ದು, ಇಬ್ಬರು ಮಕ್ಕಳ ಜೊತೆ ತಾಯಿ ನದಿಗೆ ಹಾರಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.