ಉಡುಪಿಯ ಬೈಂದೂರಿನಲ್ಲಿ ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ ರಕ್ಷಣೆ
ಉಡುಪಿ, ನವೆಂಬರ್ 29: ಕಾಡುಗಳು ನಾಶವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿನತ್ತ ಲಗ್ಗೆ ಇಡುತ್ತಿವೆ. ಹೀಗೆ ಆಹಾರ ಅರಸುತ್ತಾ ಜನವಸತಿಯತ್ತ ಬಂದ ಅಪರೂಪದ ಕರಿ ಚಿರತೆಯೊಂದು 40 ಅಡಿ ಆಳದ ಬಾವಿಗೆ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಈ ಘಟನೆ ನಡೆದಿದೆ. ರಾತ್ರಿ ಆಹಾರ ಅರಸುತ್ತಾ ಕರಿ ಚಿರತೆ ಬಂದಿತ್ತು. ಬೈಂದೂರು ತಾಲೂಕು ವ್ಯಾಪ್ತಿಯ ಕೆರಾಡಿ ಹೊಸೂರು ಗ್ರಾಮದ ಯಕ್ಕನಕಟ್ಟೆ ಸಂತೋಷ ಶೆಟ್ಟಿ ಅವರ ಮನೆಯ ಬಾವಿಗೆ ಕರಿ ಚಿರತೆ ಬಿದ್ದಿತ್ತು.
ನಂಜನಗೂಡು ಬಳಿ ಚಿರತೆಯ ಅಟ್ಟಹಾಸ, ಕರುವನ್ನು ತಿಂದುತೇಗಿದ ವನ್ಯಮೃಗ!
ಮುಂಜಾನೆ ಬಾವಿಯಲ್ಲಿ ಕರಿ ಚಿರತೆ ನೋಡಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕುಂದಾಪುರ, ಬೈಂದೂರು ಅರಣ್ಯ ಇಲಾಖೆಯ ಸಿಬ್ಬಂದಿಯು ಡಿಎಫ್ ಓ ಪ್ರಭಾಕರನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಬಾವಿಯೊಳಗೆ ಬೋನು ಇಳಿ ಬಿಟ್ಟು, ಚಿರತೆಯನ್ನು ಹಿಡಿದು ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸೆರೆಯಾದ ಕರಿ ಚರತೆ ಸುಮಾರು 6 ವರ್ಷ ಪ್ರಾಯದ್ದಾಗಿದ್ದು, ಆ ಬಳಿಕ ಮೂಕಾಂಬಿಕಾ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.