ಚುನಾವಣೆ ಫಲಿತಾಂಶ 2019: ವಿರೋಧಗಳ ನಡುವೆಯೂ ಶೋಭಾ ಜಯಭೇರಿ
ಉಡುಪಿ, ಮೇ 23: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳು ವಿಫಲರಾಗಿದ್ದಾರೆ. ಸ್ವಪಕ್ಷೀಯ ಮುಖಂಡರು, ಕಾರ್ಯಕರ್ತರ ತೀವ್ರ ವಿರೋಧದ ಮಧ್ಯೆಯೂ ಟಿಕೆಟ್ ಪಡೆದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ ಜಯಭೇರಿ ಬಾರಿಸಿದ್ದಾರೆ.
ವಿರೋಧ ಮೆಟ್ಟಿ ನಿಂತು ಧರಿಸಿದ ವಿಜಯಮಾಲೆ
ಬಿಜೆಪಿ ಕಾರ್ಯಕರ್ತರ ತೀವ್ರ ವಿರೋಧ ಹಾಗೂ ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಆಂದೋಲನದ ನಡುವೆಯೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶದ ಕೂಗು ಕೇಳಿಬಂದಿತ್ತು. ಆದರೆ ಪಕ್ಷದಲ್ಲಿದ್ದ ಎಲ್ಲಾ ವಿರೋಧಗಳನ್ನು ಮೆಟ್ಟಿನಿಂತ ಅವರು ಮತ್ತೊಮ್ಮೆ ವಿಜಯದ ಮಾಲೆ ಧರಿಸಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಭಾರಿ ಮುಖಭಂಗವಾಗಿದೆ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಪ್ರಮೋದ್ ಮದ್ವರಾಜ್ ಗೆ ಮುಖಭಂಗ
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 3,49,599 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ . ಶೋಭಾ ಕರಂದ್ಲಾಜೆ 718916 ಮತಗಳನ್ನು ಪಡೆದರೆ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 369317ಮತಗಳನ್ನು ಮಾತ್ರ ಪಡೆಯುವಲ್ಲಿ ಸಫಲರಾದರು .
'ನಮೋ' ಹೆಸರಿನಲ್ಲಿ ಬಿರುಸಿನ ಪ್ರಚಾರ
ಈ ಬಾರಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಗೆಲುವು ಅಷ್ಟೊಂದು ಸಲೀಸಾಗಿರಲಿಲ್ಲ. ಕ್ಷೇತ್ರದ ಕದನ ಕಣ ಸಾಕಷ್ಚು ಜಿದ್ದಾಜಿದ್ದಿನಿಂದ ಕೂಡಿತ್ತು. ಬಿಜೆಪಿ ಭದ್ರಕೋಟೆ ಕೈ ಜಾರಿ ಹೋಗದಂತೆ ತಡೆಯಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಪರ ನಿಂತಿದ್ದರು. ಯಾರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಶೋಭಾ ಮಾತ್ರ ಮೋದಿಗೆ ವೋಟು ಕೊಡಿ, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ಅಂತ 'ನಮೋ' ಹೆಸರಿನಲ್ಲಿ ಬಿರುಸಿನ ಪ್ರಚಾರ ಮಾಡಿದ್ದರು.
ನೆಲೆಯೇ ಇಲ್ಲದ ಜೆಡಿಎಸ್ ನಿಂದ ಸ್ಪರ್ಧಿಸಿ ಈ ಪಾಟಿ ಸೋಲುವುದು ಬೇಕಿತ್ತಾ, ಪ್ರಮೋದ್ ಮಧ್ವರಾಜ್?
ಮುನ್ನಡೆಯ ಮತ್ತೊಂದು ಮಜಲು
ಯುವ ಜನತೆ ಕೂಡ ಶೋಭಾ ಗೋ ಬ್ಯಾಕ್ ಅಭಿಯಾನವನ್ನು ಮರೆತು ಮೋದಿಯನ್ನು ಗೆಲ್ಲಿಸಬೇಕೆಂಬ ಹಠದಲ್ಲಿ ಈ ಬಾರಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವೆಯಾಗಿದ್ದ ಶೋಭಾ, ನಂತರ 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಂಸದೆಯಾಗಿದ್ದರು. ಇದೀಗ ಮತ್ತೊಮ್ಮೆ ಗೆಲುವು ಪಡೆದಿದ್ದಾರೆ. ಇನ್ನಾದರೂ ಕ್ಷೇತ್ರದ ಜನರ ಸಮಸ್ಯೆಗಳಿಗೆ ಶೋಭಾ ಕರಂದ್ಲಾಜೆ ಕಿವಿಯಾಗಬೇಕು ಅನ್ನೋದು ಜನಸಾಮಾನ್ಯರ ಅಭಿಪ್ರಾಯವಾಗಿದೆ.