'ಮೋದಿ ಹವಾ, ಅಮಿತ್ ಶಾ ತಂತ್ರ ಬಿಜೆಪಿ ಗೆಲುವಿಗೆ ಕಾರಣ'
ಉಡುಪಿ, ಮೇ 17 : ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ಪ್ರಮುಖ ಕಾರಣ ಕರಾವಳಿಯ ಬಿಜೆಪಿ ಹವಾ. ಈ ಬಾರಿ ಬಿಜೆಪಿ ಕರಾವಳಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
2013ರ ಚುನಾವಣೆಯಲ್ಲಿ ಉಡುಪಿಯಲ್ಲಿ ನಂ 1 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ಐದನ್ನೂ ತನ್ನದಾಗಿಸಿಕೊಂಡಿದೆ ಎಂದು ರಾಜಕೀಯ ವಿಶ್ಲೇಷಕ ಸುರೇಂದ್ರನಾಥ್ ಶೆಟ್ಟಿ ಹೇಳಿದರು.
ಅತೀ ಹೆಚ್ಚು ಅಂತರಗಳಿಂದ ಗೆದ್ದಿರುವ ಬಿಜೆಪಿ ಹೊಸ ಇತಿಹಾಸಕ್ಕೆ ಮರುಜೀವ ನೀಡಿದೆ. ಮೋದಿ ಹವಾ, ಅಮಿತ್ ಶಾ ತಂತ್ರ ಹಾಗೂ ಯಡಿಯೂರಪ್ಪನ ನಾಯಕತ್ವ ಈ ಗೆಲುವಿಗೆ ಕಾರಣವಾಗಿದೆ.
ಬಿಜೆಪಿ ಕೊನೆಯ ಹಂತದಲ್ಲಿ ತನ್ನ ಅಭ್ಯರ್ಥಿಗಳ ಘೋಷಣೆ ಮಾಡಿದರೂ ಗೆಲವು ಸಾಧಿಸುವಲ್ಲಿ ಸಫಲರಾಗಿದ್ದಾರೆ ಎಂದು ಪ್ರಶಂಸಿಸಿದರು.
ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಕೇವಲ ನಾಯಕರ ಜೊತೆ ಸೇರಿ ಅಭಿವೃದ್ಧಿಯ ಹೆಸರಲ್ಲಿ ಮತಯಾಚನೆ ಮಾಡಿದರೆ ಬಿಜೆಪಿ ಕಾರ್ಯಕರ್ತರ ಮೂಲಕ ಸಾಧನೆ ಮಾಡುವಲ್ಲಿ ದಾಪುಗಾಲಿಟ್ಟಿದೆ.
ಕಾಂಗ್ರೆಸ್ ಕಾರ್ಯಕರ್ತರನ್ನು ಸೇರಿಸುವಲ್ಲಿ ವಿಫಲವಾಗಿದ್ದು ಕಾಂಗ್ರೆಸ್ ಸೋಲಿಗೆ ಮುಖ್ಯ ಕಾರಣ ಎಂದರು.
ದಾವಣಗೆರೆ ಫಲಿತಾಂಶ: ಮತ್ತೆ ಅರಳಿದ ಕಮಲ, ಎರಡು ಅಚ್ಚರಿ ಸೋಲು
ಕಾರ್ಯಕರ್ತರ ಸಂಭ್ರಮಾಚರಣೆ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಉಡುಪಿಯಲ್ಲೂ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಜಿಲ್ಲೆಯಲ್ಲಿ ಈ ಬಾರಿ ಹೊಸ ಇತಿಹಾಸಕ್ಕೆ ದಾಪುಗಾಲಿಟ್ಟ ಬಿಜೆಪಿ, 5 ಕ್ಷೇತ್ರಗಳಲ್ಲೂ ಕಮಲ ಪತಾಕೆಯನ್ನು ಹಾರಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ಕೇವಲ ಒಂದು ಕ್ಷೇತ್ರದಲ್ಲಿ ಅಧಿಕಾರ ಗಿಟ್ಟಿಸಿದ್ದ ಬಿಜೆಪಿ, ಕರಾವಳಿಯನ್ನು ಕೇಸರಿಮಯ ಮಾಡಿಬಿಟ್ಟಿದೆ.
ಜಿಲ್ಲೆಯ 5 ನಾಯಕರುಗಳು ಗೆಲ್ಲುವುದರ ಜೊತೆಗೆ ಯಡಿಯೂರಪ್ಪ ಸಿಎಂ ಆಗಿದ್ದಕ್ಕೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತರು, ಮೋದಿಗೆ ಜೈಕಾರ ಹಾಕಿ ಸಂಭ್ರಮಿಸಿದರು.
ಉಡುಪಿ ನಗರದ ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿ ಮುಂಭಾಗ ಸೇರಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಮೋದಿ ಹಾಗೂ ಯಡಿಯೂರಪ್ಪನವರಿಗೆ ಜೈಕಾರ ಕೂಗಿ, ನೂತನ ಸರ್ಕಾರವನ್ನು ಸ್ವಾಗತಿಸಿದರು.
ಜಿಲ್ಲಾದ್ಯಂತ ಗುರುವಾರ ಸಂಭ್ರಮಾಚರಣೆಯಲ್ಲಿ ತೊಡಗಲಿರುವ ಬಿಜೆಪಿ ಕಾರ್ಯಕರ್ತರು ಬೈಕ್ ರಾಲಿಗಳನ್ನೂ ಆಯೋಜಿಸಿದ್ದಾರೆ.