ಇಬ್ಬರು ಅಭ್ಯರ್ಥಿಗಳು ಗೆಲುವಿಗಾಗಿ ಒಂದೇ ದೈವದ ಆಶೀರ್ವಾದ ಪಡೆದ್ರು!
ಉಡುಪಿ, ಏಪ್ರಿಲ್ 22 : ಚುನಾವಣೆ ಬಂದ್ರೆ ರಾಜಕಾರಣಿಗಳು ಗೆಲುವಿಗಾಗಿ ಮತದಾರ ಮನೆ ಮನೆ ಬಾಗಿಲಿಗೆ ಅಲೆದಾಡುವುದು ಸಹಜ. ತನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನ , ಮಸೀದಿ ಚರ್ಚ್ ಗಳ ಭೇಟಿ ಮಾಡುವುದು ಈ ಕಾಲದ ರಾಜಕಾರಣದಲ್ಲಿ ಹೊಸತೇನೂ ಅಲ್ಲ ಬಿಡಿ. ಆದ್ರೆ ಕಾಪು ಕ್ಷೇತ್ರದಲ್ಲಿ ಸ್ಫರ್ಧೆಗೆ ಇಳಿದ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೋರಕೆ ಇಬ್ಬರು ಗೆಲುವಿಗಾಗಿ ಒಂದೇ ದೈವದ ಮೊರೆ ಹೋಗಿರುವುದು ವಿಶೇಷ.
ಕಳೆದ ಬಾರಿ ಚುನಾವಣೆಯಲ್ಲಿ ಮಾಜಿ ಶಾಸಕ , ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಅವರನ್ನು ವಿನಯ್ ಕುಮಾರ್ ಸೊರಕೆ ಸೋಲಿಸಿದ್ರು. ಈ ಬಾರಿಯೂ ಆ ಎರಡು ಅಭ್ಯರ್ಥಿಗಳೇ ಕಣದಲ್ಲಿ ಇದ್ದಾರೆ. ಚುನಾವಣೆ ಘೋಷಣೆಯಾದ ಕೂಡಲೇ ಅಭ್ಯರ್ಥಿಗಳು ನಾಯಕರು ಪ್ರಚಾರ ಶುರು ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ಈ ಸಾರಿ ಉಡುಪಿ ಜಿಲ್ಲೆಯ ಪೈಕಿ ಜಿದ್ದಿನ ಕಣ. ಕಾಂಗ್ರೆಸ್ ನಿಂದ ವಿನಯಕುಮಾರ್ ಸೊರಕೆ, ಬಿಜೆಪಿಯಿಂದ ಲಾಲಾಜಿ ಮೆಂಡನ್ ಕಣದಲ್ಲಿದ್ದಾರೆ.
ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್
ಈ ಬಾರಿ ಇಬ್ಬರಿಗೂ ನೆಕ್ ಟೂ ನೆಕ್ ಫೈಟ್ ಇದೆ. ಇಬ್ಬರೂ ನಾಯಕರು ಒಂದೇ ದೈವದ ಮೊರೆ ಹೋಗಿದ್ದು, ಆಶೀರ್ವಾದ ಮಾಡಿ ಅಂತ ಶಿರ್ವ ಗ್ರಾಮದ ಸೊರ್ಪು ಶ್ರೀ ಬ್ರಹ್ಮ ಮುಗೇರ್ಕಳ ದೈವಸ್ಥಾನದಲ್ಲಿ ಬೇಡಿಕೊಂಡಿದ್ದಾರೆ. ಅಲೇರ ಪಂಜುರ್ಲಿ ದೈವ ಸೊರಕೆ ಮತ್ತು ಲಾಲಾಜಿ ಇಬ್ಬರಿಗೂ ಒಳ್ಳೆಯದಾಗುತ್ತದೆ. ನಿಮ್ಮ ಬೆನ್ನ ಹಿಂದೆ ನಾನಿದ್ದೇನೆ. ಸತ್ಯ, ಧರ್ಮ ನ್ಯಾಯವಿದ್ದಲ್ಲಿ ಗೆಲುವು ಇದೆ ಎಂದು ನುಡಿ ಕೊಟ್ಟಿದೆ.
ಹೀಗಾಗಿ ಇಬ್ಬರೂ ನಾಯಕರೂ ಪ್ರಸಾದ ಸ್ವೀಕರಿಸಿ, ಅಲ್ಲಿಂದ ತೆರಳಿದ್ದಾರೆ. ದೇವರ ಬಳಿ ಹೋದ ಎಲ್ಲರಿಗೂ ಒಳ್ಳೆದಾಗಲಿ ಎಂಬ ಆಶೀರ್ವಾದ ಸಿಗುತ್ತದೆ. ಆದ್ರೆ ಮೇ 12 ರಂದು ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದರ ಮೇಲೆ ಇಬ್ಬರು ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ ಅಲ್ಲವೇ?