ಕಲ್ಲು ತೆಗೆಸುವ ವಿಚಾರ; ನಗರಸಭೆ ಸದಸ್ಯನಿಂದ ಆರೋಗ್ಯ ನಿರೀಕ್ಷಕನ ಮೇಲೆ ಹಲ್ಲೆ
ಉಡುಪಿ, ಜುಲೈ 16: ನಗರಸಭೆ ಸದಸ್ಯರೊಬ್ಬರು ಕಿರಿಯ ಆರೋಗ್ಯ ನಿರೀಕ್ಷಕರ ಮೇಲೆ ಹಲ್ಲೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ. ಪ್ರಸನ್ನ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ.
ಸಾವಿನಲ್ಲೂ ಮಾದರಿ, ವಾಯುಸೇನೆಯ ನಿವೃತ್ತ ಯೋಧ ಉಪೇಂದ್ರ ಪ್ರಭು
ಮಲ್ಪೆ ವಡಬಾಂಡೇಶ್ವರ ವಾರ್ಡ್ ಬಿಜೆಪಿ ಸದಸ್ಯ ಯೋಗೀಶ್ ಎಂಬುವರು ಪ್ರಸನ್ನ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಗರ ಸಭಾ ಸದಸ್ಯ ಯೋಗೀಶ್ ಇಂದು ಆರೋಗ್ಯ ನಿರೀಕ್ಷಕರ ಕಚೇರಿಗೆ ಆಗಮಿಸಿ ವಾರ್ಡ್ ನ ಕಲ್ಲುಗಳನ್ನು ತೆಗೆಸುವ ವಿಚಾರಕ್ಕೆ ಸಂಬಂಧಿಸಿ ಏಕವಚನದಲ್ಲಿ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿದ್ದಾರೆ ಎಂದು ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪ್ರಸನ್ನ ಕುಮಾರ್ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಉಡುಪಿ ನಗರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ. ಹಲ್ಲೆಯನ್ನು ಖಂಡಿಸಿ ನಗರಸಭೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ರತ್ನಾಕರ ಹೆಗ್ಡೆ, "ಕೌನ್ಸಿಲರ್ ತಪ್ಪು ಸಾಬೀತಾದರೆ ಅವರನ್ನು ಅಮಾನತು ಮಾಡಲಾಗುವುದು. ತಪ್ಪು ಮಾಡಿದವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದ್ದಾರೆ.