ಉಡುಪಿ ಕ್ವಾರಂಟೈನ್ ಕೇಂದ್ರದಲ್ಲೇ ಬರ್ತ್ ಡೇ ಪಾರ್ಟಿ!
ಉಡುಪಿ, ಜೂನ್ 04: ಒಂದು ಕಡೆ ಉಡುಪಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕೇಸ್ ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೇ ವೇಳೆ ಇನ್ನೊಂದೆಡೆ ಕ್ವಾರಂಟೈನ್ ಕೇಂದ್ರದಲ್ಲೇ ಸ್ಥಳೀಯ ಜನಪ್ರತಿನಿಧಿಗಳು ಬರ್ತ್ ಡೇ ಪಾರ್ಟಿ ಮಾಡಿದ್ದಾರೆ.
ಮಹಾರಾಷ್ಟ್ರದಿಂದ ಬಂದ ಅನೇಕರಿಗೆ ಸೋಂಕು ತಗಲುತ್ತಿರುವ ಈ ಹೊತ್ತಿನಲ್ಲಿ, ಅವರು ಕ್ವಾರಂಟೈನ್ ಆಗಿರುವ ಕೇಂದ್ರದಲ್ಲಿ ಹುಟ್ಟು ಹಬ್ಬ ಆಚರಣೆ ನಡೆದಿದ್ದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.
ಉಡುಪಿಗೆ ಶಾಕಿಂಗ್ ಸುದ್ದಿ: ಇಂದು 210 ಕೊರೊನಾ ಸೋಂಕು ಪತ್ತೆ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಪ್ರಕೃತಿ ಆಂಗ್ಲಮಾದ್ಯಮ ಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಈ ಪಾರ್ಟಿ ಆಯೋಜನೆಗೊಂಡಿತ್ತು. ಸ್ಥಳೀಯ ಜನಪ್ರತಿನಿಧಿಗಳೇ ಇದರಲ್ಲಿ ಭಾಗಿಯಾಗಿದ್ದುದು ಗಮನಾರ್ಹ ಸಂಗತಿ. ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕರುಣಾಕರ ಕೋಟ್ಯಾನ್, ಕಾಂತಾವರ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಯುವ ಮೋರ್ಚಾ ಕಾರ್ಯದರ್ಶಿ ನವೀನ್ ಕಾಂತಾವರ ಕ್ವಾರಂಟೈನ್ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿ ಯೂತ್ ಕಾಂಗ್ರೆಸ್, ಈ ಘಟನೆ ಮತ್ತೆ ಮರುಕಳಿಸಬಾರದು. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಆಗ್ರಹಿಸಿದ್ದಾರೆ.