ಉಡುಪಿಯಲ್ಲಿ ಬಿಲ್ಲವ- ಮುಸ್ಲಿಂ ಸಮಾವೇಶ ರದ್ದಾಗಿದ್ದು ಯಾಕೆ?
ಉಡುಪಿ, ಜನವರಿ 11: ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಬಿಲ್ಲವ ಮುಸ್ಲಿಂ ಸಮಾವೇಶ ರದ್ದಾಗಿದೆ. ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಎದ್ದಿರುವ ಕಿಡಿಯನ್ನು ತಣ್ಣಗಾಗಿಸುವ ಯತ್ನ ನಡೆದಿತ್ತು. ಆದರೆ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಸೌಹಾರ್ದ ಕಾರ್ಯಕ್ರಮ ರದ್ದಾಗಿದೆ. ಆದರೆ ಕಾರ್ಯಕ್ರಮ ರದ್ದಾದ ಬಳಿಕವೂ ಕರಾವಳಿಯಲ್ಲಿ ಚರ್ಚೆ ಮುಂದುವರೆದಿದೆ.
ಕರಾವಳಿಯಲ್ಲಿ ಸೌಹಾರ್ದ ಇಫ್ತಾರ್ ಕೂಟಗಳು, ದೇವಸ್ಥಾನದ ಜಾತ್ರೆಗಳು, ಕೆಲವೊಂದು ಆಚರಣೆಗಳು ಹಿಂದೂ ಮುಸ್ಲಿಂ ಐಕ್ಯಕ್ಕೆ ಸಾಕ್ಷಿಯಾಗುತ್ತಿದ್ದವು. ಆದರೆ ಇತ್ತೀಚಿನ ಬೆಳೆವಣಿಗೆಯಿಂದ ಹಿಂದೂ ಮುಸ್ಲಿಂ ಸೌಹಾರ್ದತೆಗೆ ಧಕ್ಕೆಯಾದಂತಿದೆ. ಮುಸ್ಲಿಂ ಮತ್ತು ಬಿಲ್ಲವರ ನಡುವೆ ಒಂದು ಸೌಹಾರ್ದ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾದ ಕಾರ್ಯಕ್ರಮ ಸೌಹಾರ್ದತೆ ಕದಡುವಷ್ಟರ ಮಟ್ಟಿಗೆ ಚರ್ಚೆಯಾಗಿತ್ತು.
ಬಿಲ್ಲವ -ಮುಸ್ಲಿಂ ಸಮ್ಮಿಲನಕ್ಕೆ ಬಿಲ್ಲವ ಮುಖಂಡರಿಂದಲೇ ವಿರೋಧ; ಸ್ನೇಹ ಸಾಧ್ಯವಿಲ್ಲ ಎಂದ ಮುಖಂಡರು
ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಮುಸ್ಲಿಂ ಬಿಲ್ಲವ ಸಮಾವೇಶದ ಕುರಿತ ಚರ್ಚೆಗಳು ಮುಂದುವರಿಯುತ್ತಲೇ ಇವೆ. ಉಡುಪಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ, ಬಿಲ್ಲವ ಮುಖಂಡ ವಿನಯಕುಮಾರ್ ಸೊರಕೆ, "ಸಮಾಜದಲ್ಲಿ ಶಾಂತಿ-ಸೌಹಾರ್ದ ಸ್ಥಾಪಿಸಲೆಂದು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸಮಾಜ ಮತ್ತು ಸಮುದಾಯದ ಒಳಿತನ್ನು ಬಲಿಕೊಟ್ಟು ಕುತಂತ್ರ ನಡೆಸುತ್ತಿದ್ದಾರೆ" ಎಂದಿದ್ದಾರೆ.