ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸಲು ಅತೀ ಎತ್ತರದ ಪೋಸ್ಟ್ ಆಫೀಸ್ನಿಂದ ಪ್ರಧಾನಿಗೆ ಪತ್ರ
ಉಡುಪಿ, ಏಪ್ರಿಲ್ 19: ಕರಾವಳಿಯ ನಾಲ್ವರು ಬೈಕ್ ರೈಡರ್ಸ್ಗಳು ಸಿಕ್ಕಿಂನ ಕಟಾವ್ನಲ್ಲಿರುವ ಚೀನಾ ಬಾರ್ಡರ್ನಲ್ಲಿ ತುಳುನಾಡ ಧ್ವಜವನ್ನು ಹಾರಿಸಿದ್ದಾರೆ. ಅಲ್ಲದೆ ಹಿಮಾಚಲ ಪ್ರದೇಶದ ಹಿಕ್ಕಿಂನಲ್ಲಿರುವ ವಿಶ್ವದ ಅತೀ ಎತ್ತರದ ಪೋಸ್ಟ್ ಆಫೀಸ್ನಿಂದ ಪ್ರಧಾನಿ ಮೋದಿಯವರಿಗೆ "ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ' ಮಾಡಬೇಕೆಂದು ಪತ್ರ ಬರೆದು ತಮ್ಮ ತುಳು ಭಾಷಾ ಪ್ರೇಮ ಮೆರೆದಿದ್ದಾರೆ.
ಖ್ಯಾತ ಯೂಟ್ಯೂಬರ್ ಸಚಿನ್ ಶೆಟ್ಟಿ, 'ಅನ್ನಿ' ಅರುಣ್, ಅರ್ಜುನ್ ಪೈ, ಸಾಯಿಕಿರಣ್ ಶೆಟ್ಟಿ ಹಾಗೂ ಅನ್ನಿ ಅರುಣ್ ಪತ್ನಿ ಭಾಗ್ಯಲಕ್ಷ್ಮಿಯವರ ತಂಡ ಬೈಕ್ ರೈಡಿಂಗ್ ತಂಡದಲ್ಲಿತ್ತು. ಈ ತಂಡವು ಸರಿ ಸುಮಾರು 9000 ಕಿ.ಮೀ. ದೂರ ಬೈಕ್ ರೈಡಿಂಗ್ ಮಾಡಿ ಈ ಸಾಧನೆ ಮಾಡಿದೆ. ಸಚಿನ್ ಶೆಟ್ಟಿ ಹಾಗೂ ಅರ್ಜುನ್ ಪೈ ದೆಹಲಿಯಿಂದ ತಮ್ಮ ಬೈಕ್ ಸವಾರಿ ಆರಂಭಿಸಿದ್ದರು. ಇವರೊಂದಿಗೆ ಸಾಯಿಕಿರಣ್ ಶೆಟ್ಟಿ, ಅನ್ನಿ ಅರುಣ್, ಭಾಗ್ಯಲಕ್ಷ್ಮಿಯವರ ತಂಡ ಹಿಮಾಚಲ ಪ್ರದೇಶದಲ್ಲಿ ಜೊತೆಯಾಗಿದೆ.
ಇದೇ ಮೊದಲ ಬಾರಿಗೆ ವಿಶ್ವದ ಹನ್ನೊಂದು ರಾಷ್ಟ್ರದಲ್ಲಿ ತೆರೆ ಕಾಣಲಿದೆ ತುಳು ಸಿನಿಮಾ!
ಫೆ.26ರಂದು ದೆಹಲಿಯಿಂದ ಬೈಕ್ ರೈಡಿಂಗ್ ಆರಂಭಿಸಿ ಉತ್ತರಪ್ರದೇಶ, ಬಿಹಾರ್, ಸಿಕ್ಕಿಂ, ಕಟಾವ್(ಚೀನಾ ಬಾರ್ಡರ್), ಹಿಮಾಚಲ ಪ್ರದೇಶ, ಉತ್ತರಾಖಂಡ, ನೇಪಾಳ ಸಂಚರಿಸಿದ ತಂಡ, ಆ ಬಳಿಕ ಉತ್ತರ ಪ್ರದೇಶ, ಬಿಹಾರ್ ಮಾರ್ಗವಾಗಿ ಮರಳಿ ಬಂದಿದೆ. ಈಗ ಅತ್ಯಂತ ಚಳಿ ಇರುವ ಕಾಲವಾದ್ದರಿಂದ ಇದು ಬೈಕ್ ರೈಡಿಂಗ್ಗೆ ಪ್ರಶಸ್ತವಲ್ಲದ ಕಾಲ. ಆದರೂ ಗಟ್ಟಿ ಧೈರ್ಯದೊಂದಿಗೆ -12°C ಚಳಿಯಲ್ಲೂ ಹಿಮಪಾತಗಳ ಮಧ್ಯೆಯೂ ತಂಡ ಬೈಕ್ ರೈಡಿಂಗ್ ತಮ್ಮ ಗುರಿ ಮುಟ್ಟಿದೆ.
ಈ ಬೈಕ್ ರೈಡಿಂಗ್ನಲ್ಲಿ ವಿಶೇಷವಾಗಿ ಸಿಕ್ಕಿಂ ರಾಜ್ಯದ ಕಟಾವ್ ಎಂಬ ಪ್ರದೇಶದಲ್ಲಿನ ಚೀನಾ ಬಾರ್ಡರ್ನಲ್ಲಿ ತುಳುಧ್ವಜದ ಹಾರಾಟ ಮಾಡಿ ತಂಡ ಸೈ ಎನಿಸಿಕೊಂಡಿದೆ. ಅಲ್ಲದೆ ಹಿಮಾಚಲ ಪ್ರದೇಶದಲ್ಲಿನ ಹಿಕ್ಕಿಂ ಎಂಬಲ್ಲಿನ ವಿಶ್ವದ ಅತೀ ಎತ್ತರದ ಪೋಸ್ಟ್ ಆಫೀಸ್ ಅನ್ನು ತಂಡ ತಲುಪಿದೆ. ಅದೇ ಪೋಸ್ಟ್ ಆಫೀಸ್ನಿಂದ 'ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು' ಎಂಬ ಮನವಿ ಪತ್ರವನ್ನು ಪ್ರಧಾನಿ ಮೋದಿಯವರಿಗೆ ತಂಡ ಕಳುಹಿಸಿದೆ.
ಈ ಪೋಸ್ಟ್ ಆಫೀಸ್ ಸಮುದ್ರ ಮಟ್ಟದಿಂದ ಹದಿನೈದು ಸಾವಿರ ಅಡಿ ಎತ್ತರದಲ್ಲಿದೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಕೂಗು ಬಹಳಷ್ಟು ಕಾಲದಿಂದ ಕೇಳಿ ಬರುತ್ತಿದೆ. ಆದರೆ ಇದೀಗ ಈ ಬೈಕ್ ರೈಡರ್ಸ್ಗಳ ತಂಡ ಈ ವಿಚಾರದಲ್ಲಿ ವಿಶೇಷ ಪ್ರಯತ್ನವನ್ನು ಮಾಡಿದೆ.
ಸುಮಾರು 52 ದಿನಗಳ ಈ ಪ್ರಯಾಣದ ವಿಡಿಯೋವನ್ನು ಎಲ್ಲಾ ವಿವರಗಳ ಸಹಿತ ದಿನವೂ ತಮ್ಮ ಯೂಟ್ಯೂಬ್ನಲ್ಲಿ ಸಚಿನ್ ಶೆಟ್ಟಿ ದಾಖಲಿಸಿದ್ದಾರೆ. ಇದೀಗ ಈ ತಂಡ ತಮ್ಮ ಗುರಿಯನ್ನು ತಲುಪಿ ಮತ್ತೆ ತಾಯ್ನಾಡಿಗೆ ಮರಳಿದೆ. ಈ ತಂಡವನ್ನು ತುಳುನಾಡ ರಕ್ಷಣಾ ವೇದಿಕೆ ಸೇರಿದಂತೆ ಅನೇಕ ಅಭಿಮಾನಿಗಳು ಆದರ ಪೂರ್ವಕವಾಗಿ ಸ್ವಾಗತಿಸಿದೆ.
ಸಚಿನ್ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು ನಿವಾಸಿಯಾಗಿದ್ದಾರೆ. ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಸಚಿನ್ ಶೆಟ್ಟಿ, ಹಲವು ಶಾರ್ಟ್ ಫಿಲ್ಮ್ ಮತ್ತು ತುಳು ಚಲನಚಿತ್ರಗಳಿಗೆ ಛಾಯಾಗ್ರಾಹಣ ಮಾಡಿದ್ದಾರೆ. ಕರಾವಳಿಯಾದ್ಯಾಂತ ಜನಾನುರಾಗಿಯಾಗಿರುವ ಸಚಿನ್ ಒಂದೂವರೆ ಲಕ್ಷಕ್ಕೂ ಅಧಿಕ ಜನ ಸಬ್ಸ್ಕ್ರೈಬರ್ಗಳನ್ನು ಹೊಂದಿದ್ದಾರೆ. ಆನಿ ಅರುಣ್ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದು, ದಂಪತಿ ಸಮೇತ ದೇಶ ಪರ್ಯಟನೆ ಮಾಡಿದ್ದಾರೆ.
Recommended Video