ಭಾಸ್ಕರ್ ಶೆಟ್ಟಿ ಕೊಲೆ: ಆರೋಪಿ ರಾಜೇಶ್ವರಿ ಶೆಟ್ಟಿ ಜಾಮೀನು ಆದೇಶ ಡಿ.28ಕ್ಕೆ
ಉಡುಪಿ, ಡಿಸೆಂಬರ್. 27 : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಥಮ ಆರೋಪಿ ಪತ್ನಿ ರಾಜೇಶ್ವರಿ ಶೆಟ್ಟಿ ಜಾಮೀನು ಆದೇಶ ಇದೇ ಡಿಸೆಂಬರ್ 28ಕ್ಕೆ ಪ್ರಕಟವಾಗಲಿದೆ.
ಈಗಾಗಲೇ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದೆ. ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆರೋಪಿ ರಾಜೇಶ್ವರಿ ಪರ ವಕೀಲ ಅರುಣ್ ಕುಮಾರ್ ವಾದ ಮಂಡಿಸಿದ ಬಳಿಕ ವಿಚಾರಣೆ ಮುಂದೂಡಲಾಗಿತ್ತು. ನಿನ್ನೆ ಸರಕಾರಿ ವಿಶೇಷ ಅಭಿಯೋಜಕ ಶಾಂತರಾಮ್ ಶೆಟ್ಟಿ ಪ್ರತಿವಾದವನ್ನು ಮಂಡಿಸಿದ್ದರು.[ಭಾಸ್ಕರ್ ಶೆಟ್ಟಿ ಕೊಲೆ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ]
ಈ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಧೀಶ ಟಿ. ವೆಂಕಟೇಶ್ ನಾಯ್ಕ್ ಈ ಕುರಿತ ಆದೇಶವನ್ನು ಡಿಸೆಂಬರ್ 28ಕ್ಕೆ ಕಾಯ್ದಿರಿಸಿದ್ದಾರೆ.
ಘಟನೆ : ಗಲ್ಫ್ ರಾಷ್ಟ್ರಗಳಲ್ಲಿ ಹಾಗೂ ಉಡುಪಿಯಲ್ಲಿ ಬಹುಕೋಟಿ ಉದ್ಯಮದ ಪಾಲುದಾರರಾಗಿದ್ದ ಭಾಸ್ಕರ ಶೆಟ್ಟಿ ಉಡುಪಿಯ ಇಂದ್ರಾಳಿಯಲ್ಲಿರುವ ತಮ್ಮ ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು.[ಭಾಸ್ಕರ್ ಶೆಟ್ಟಿ ಕೊಲೆ : ಡಿವೈಎಸ್ ಪಿ ಜತೆ ಹಲವು ಬಾರಿ ಮಾತಾಡಿದ್ದ ರಾಜೇಶ್ವರಿ]
ಸುಮಾರು ಎಂಟು ದಿನಗಳ ಬಳಿಕ ಅವರ ಪತ್ನಿ ಮತ್ತು ಮಗನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಭಾಸ್ಕರ ಶೆಟ್ಟಿಯನ್ನು ತಾವೇ ಕೊಲೆ ಮಾಡಿರುವುದಾಗಿ ಪತ್ನಿ ಮತ್ತು ಮಗ ತಪ್ಪೊಪ್ಪಿಕೊಂಡಿದ್ದುರು.
ಮಾತ್ರವಲ್ಲದೇ ನಂದಳಿಕೆಯ ಸ್ವಯಂಘೋಷಿತ ಜ್ಯೋತಿಷಿ ನಿರಂಜನ ಭಟ್ಟ ಎಂಬಾತನ ಸಹಾಯದಿಂದ ಆತನ ಮನೆಯ ಹೋಮಕುಂಡದಲ್ಲಿ ಶೆಟ್ಟಿಯವರ ಶವವನ್ನು ದಹಿಸಿ ಪಳೆಯುಳಿಕೆಗಳನ್ನು ಸಮೀಪದ ನದಿಯಲ್ಲಿ ಎಸೆದಿರುವುದಾಗಿ ಹೇಳಿಕೆ ನೀಡಿದ್ದರು.