ಭಾಸ್ಕರ್ ಶೆಟ್ಟಿ ಹತ್ಯೆ : ಸಿಐಡಿಯಿಂದ ಹೆಚ್ಚುವರಿ ಚಾರ್ಜ್ ಶೀಟ್
ಉಡುಪಿ, ಜನವರಿ 28 : ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲಿಸರು 101 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಮೊದಲು 816 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು.
ಸಿಐಡಿ ಪೊಲೀಸರು ಉಡುಪಿಯ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್ ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ನ್ಯಾಯಾಧೀಶರು ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ವಿಚಾರಣೆ ನಡೆಸಿದರು.
ಸುಪ್ರೀಂನಲ್ಲೂ ರಾಜೇಶ್ವರಿ ಶೆಟ್ಟಿಗೆ ಗಿಟ್ಟಲಿಲ್ಲ ಜಾಮೀನು
ಭಾಸ್ಕರ ಶೆಟ್ಟಿ ಅವರ ಮನೆಯಲ್ಲಿ ದೊರೆತ ರಕ್ತದ ಕಲೆ, ಮೂಳೆಗಳ ಮಾದರಿಗಳ ವಿಧಿವಿಜ್ಞಾನ ಪ್ರಯೋಗಾಲದ ವರದಿಗಳ ಆಧಾರದ ಮೇಲೆ 101 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಿದ್ದಪಡಿಸಲಾಗಿದೆ. ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯೂ ತಿರಸ್ಕೃತವಾಗಿದ್ದು ಎಲ್ಲರೂ ಜೈಲಿನಲ್ಲಿದ್ದಾರೆ.
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ
2016ರ ಆಗಸ್ಟ್ 6ರಂದು ಭಾಸ್ಕರ್ ಶೆಟ್ಟಿ ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು. ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಈ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಜ್ಯೋತಿಷಿ ನಿರಂಜನ್ ಭಟ್ ಪ್ರಕರಣದಲ 3ನೇ ಆರೋಪಿಯಾಗಿದ್ದಾರೆ.
ಹೆಚ್ಚುವರಿ ಚಾರ್ಜ್ ಶೀಟ್
ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮೊದಲು 816 ಪುಟದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಆಗ ನ್ಯಾಯಾಲಯಕ್ಕೆ ಪೊಲೀಸರು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸುವುದಾಗಿ ಹೇಳಿದ್ದರು. ಅದರಂತೆ 101 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ
ಉಡುಪಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಾದ ನಿರಂಜನ್ ಭಟ್ ಮತ್ತು ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ವಿಚಾರಣೆ ನಡೆಸಿದರು.
ವಿಚಾರಣೆಗೆ ದಿನ ನಿಗದಿಗೆ ಮನವಿ
ಆರೋಪಿಗಳ ಪರ ವಕೀಲರಾದ ಅರುಣ್ ಬಂಗೇರ ಅವರು ಪ್ರಕರಣದ ವಿಚಾರಣೆಗೆ ದಿನ ನಿಗದಿ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಫೆ.9ಕ್ಕೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ದಿನಾಂಕ ನಿಗದಿ ಮಾಡಿದೆ.
ಸಿಐಡಿ ತನಿಖೆಗೆ ವಹಿಸಿದ್ದ ಸರ್ಕಾರ
ಉದ್ಯಮಿ ಭಾಸ್ಕರ್ ಶೆಟ್ಟಿ 2016ರ ಜುಲೈ 28ರಂದು ನಾಪತ್ತೆಯಾಗಿದ್ದರು. ಆಗಸ್ಟ್ 6ರಂದು ಅವರು ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಕುಟುಂಬ ಸದಸ್ಯರು ಭಾಗಿಯಾಗಿರುವ ಆರೋಪ ಇರುವ ಹಿನ್ನಲೆಯಲ್ಲಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.
ಪ್ರಮುಖ ಆರೋಪಿಗಳು
ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು. ಜ್ಯೋತಿಷಿ ನಿರಂಜನ್ ಶೆಟ್ಟಿ ಅವರು ಪ್ರಕರಣದ 3ನೇ ಆರೋಪಿಯಾಗಿದ್ದಾರೆ. ಹತ್ಯೆ ಮಾಡಿದ ಬಳಿಕ ಹೋಮಕುಂಡದಲ್ಲಿ ಹೆಣವನ್ನು ಸುಟ್ಟು, ಮೂಳೆಗಳನ್ನು ನದಿಗೆ ಎಸೆಯಲಾಗಿದೆ ಎಂಬುದು ಆರೋಪವಾಗಿದೆ.