ಭಾಸ್ಕರ್ ಶೆಟ್ಟಿ ಕೊಲೆ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ಉಡುಪಿ, ಅಕ್ಟೋಬರ್ 5: ಉದ್ಯಮಿ ಕೆ.ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಉಡುಪಿಯ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ಅ.17ರ ತನಕ ವಿಸ್ತರಿಸಿದೆ.
ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ಜ್ಯೋತಿಷಿ ನಿರಂಜನ್ ಭಟ್ ಅವರನ್ನು ಮಂಗಳೂರಿನ ಜೈಲಿನಿಂದ ಪೊಲೀಸ್ ವಾಹನದಲ್ಲಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸಾಕ್ಷ್ಯ ನಾಶ ಆರೋಪದಲ್ಲಿ ಬಂಧಿತರಾದ ಶ್ರೀನಿವಾಸ ಭಟ್ , ರಾಘವೇಂದ್ರ ಭಟ್ ಅವರಿಗೆ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಶನಿವಾರ ಜಾಮೀನು ನೀಡಿದ್ದರೂ ಹಿರಿಯಡ್ಕ ಜೈಲಿನಿಂದ ಇನ್ನೂ ಬಿಡುಗಡೆಯಾಗಿಲ್ಲ.[ಉಡುಪಿಯ ಭಾಸ್ಕರ್ ಶೆಟ್ಟಿಯನ್ನು ಗುಂಡಿಟ್ಟು ಕೊಲ್ಲುವ ಪ್ಲಾನ್ ಇತ್ತಾ!]
ಆರೋಪಿಗಳಾದ ನಿರಂಜನ್ ಭಟ್ , ನವನೀತ್ ಶೆಟ್ಟಿ ಮತ್ತು ರಾಜೇಶ್ವರಿ ಶೆಟ್ಟಿಯನ್ನು ಸಿಐಡಿ ಕಸ್ಟಡಿಗೆ ಪಡೆಯಲು ಉದ್ದೇಶಿಸಿದ್ದರೂ ಹೈಕೋರ್ಟ್ನಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ. ಈ ಮೂವರು ಆರೋಪಿಗಳ ಪರ ಯಾರೂ ಈ ತನಕ ಜಾಮೀನು ಅರ್ಜಿ ಸಲ್ಲಿಸಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದಿಂದ ಡಿಎನ್ಎ ಪರೀಕ್ಷೆ ಕುರಿತ ವರದಿಯೂ ಬಂದಿಲ್ಲ.[ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆಗೆ ಬಳಸಿದ್ದ ರಾಡ್ ಪತ್ತೆ]
ಭಾಸ್ಕರ್ ಶೆಟ್ಟಿ ಅವರನ್ನು ಮೊದಲಿಗೆ ಗುಂಡಿಟ್ಟು ಕೊಲ್ಲಲು ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ನಿರಂಜನ ಭಟ್ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತರ ಬಳಿ ಪಿಸ್ತೂಲ್ ಕೇಳಿದ್ದ ಮಾಹಿತಿ ಸಿಐಡಿ ಪೊಲೀಸರಿಗೆ ಸಿಕ್ಕಿದೆ. ಮೊಬೈಲ್ ಕರೆಗಳ ಆಧಾರದಲ್ಲಿ ಈ ಸಾಕ್ಷ್ಯ ಸಿಕ್ಕಿದ್ದು, ಪ್ರಕರಣ ಭೇದಿಸುವಲ್ಲಿ ನೆರವಾಗಿದೆ.