ಔರಾದ್ಕರ್ ವರದಿ ಜಾರಿ ಗ್ಯಾರಂಟಿ ಎಂದು ಭರವಸೆಯಿತ್ತ ಬೊಮ್ಮಾಯಿ
ಉಡುಪಿ, ಸೆಪ್ಟೆಂಬರ್ 27: ಉಡುಪಿ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿ ಉಡುಪಿಗೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು.
ಔರಾದ್ಕರ್ ವರದಿಗೆ ಸರ್ಕಾರ ತಡೆ: ಪೊಲೀಸರ ಆಸೆಗೆ ತಣ್ಣೀರು
Recommended Video
ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವರು, ಪೊಲೀಸರ ವೇತನ ಪರಿಷ್ಕರಣೆ ವಿಚಾರವಾಗಿ ಕೆಲ ವಿಷಯಗಳನ್ನು ಹಂಚಿಕೊಂಡರು. "ಖಂಡಿತವಾಗಿಯೂ ಔರಾದ್ಕರ್ ವರದಿ ಜಾರಿಯಾಗುತ್ತದೆ. ಔರಾದ್ಕರ್ ವರದಿಗೆ ಎರಡು ಹಂತದಲ್ಲಿ ಸಚಿವ ಸಂಪುಟ ಒಪ್ಪಿಗೆಯನ್ನೂ ಕೊಟ್ಟಿದೆ. ಆದರೆ ಜೈಲು ಸಿಬ್ಬಂದಿ ಮತ್ತು ಫೈಯರ್ ಫೋರ್ಸ್ ಬಿಟ್ಟು ಹೋಗಿತ್ತು. ನಮ್ಮ ಕ್ಯಾಬಿನೆಟ್ ನಲ್ಲಿ ಅವಕ್ಕೂ ಒಪ್ಪಿಗೆ ಕೊಟ್ಟಿದ್ದೇವೆ. ಆರ್ಥಿಕ ಇಲಾಖೆಯಿಂದ ಕೆಲವು ಸ್ಪಷ್ಟನೆ ಕೇಳಿದ್ದೇವೆ. ಇನ್ನೊಂದು ವಾರದೊಳಗೆ ಸ್ಪಷ್ಟವಾದ ಸುತ್ತೋಲೆ ಹೊರಡಿಸುತ್ತೇವೆ" ಎಂದು ಹೇಳಿದರು.
ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಎಲ್ಲಾ ಮಾಹಿತಿಗಳು ಸಿಬಿಐ ಬಳಿ ಇರುತ್ತವೆ. ಅಧಿಕೃತವಾಗಿ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಗೃಹ ಸಚಿವನಾಗಿ ಊಹಾಪೋಹಗಳಿಗೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಎಸ್ ಐಟಿ ಮಾಡಿರುವ ತನಿಖೆಯ ಸಂಪೂರ್ಣ ವಿವರ ಸಿಬಿಐಗೆ ನೀಡಿದ್ದೇವೆ. ಆದರೆ ಅನುಮತಿ ಇಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಮಾತುಕತೆಯ ಕದ್ದಾಲಿಕೆ ಮಾಡುವುದು ತಪ್ಪು" ಎಂದು ಹೇಳಿದರು.
ಝಿರೋ ಟ್ರಾಫಿಕ್ ಬೇಡ : ಗೃಹ ಸಚಿವರ ಜನ ಮೆಚ್ಚುಗೆಯ ನಡೆ
ಪ್ರಭಾವ ಬಳಸಿ ಉಪ ಚುನಾವಣೆ ಮುಂದೂಡಲಾಗಿದೆ ಎಂಬ ಕುಮಾರಸ್ವಾಮಿ ಆರೋಪದ ಕುರಿತು ಕೇಳಿದ್ದಕ್ಕೆ, "ಕುಮಾರಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ" ಎಂದಷ್ಟೇ ಚುಟುಕಾಗಿ ಪ್ರತಿಕ್ರಿಯೆ ನೀಡಿದರು.