ತಾಯಿಯನ್ನು ಭೇಟಿ ಮಾಡಲು ಉಡುಪಿಗೆ ಬಂದ ಬನ್ನಂಜೆ ರಾಜ
ಉಡುಪಿ, ಜುಲೈ.09: ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜನನ್ನು ಒಂದು ದಿನದ ಮಟ್ಟಿಗೆ ಪೊಲೀಸರು ಉಡುಪಿಗೆ ಕರೆತಂದಿದ್ದಾರೆ. ತಾಯಿಗೆ ಆನಾರೋಗ್ಯ ಹಿನ್ನೆಲೆಯಲ್ಲಿ ಪಾತಕಿಯನ್ನು ಉಡುಪಿಗೆ ಕರೆತರಲಾಗಿದೆ. ಸದ್ಯ ಬನ್ನಂಜೆ ರಾಜಾ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಉಡುಪಿಯಲ್ಲಿರುವ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಮಾನವೀಯ ನೆಲೆಯಲ್ಲಿ ಮನೆ ಭೇಟಿಗೆ ಅವಕಾಶ ನ್ಯಾಯಾಲಯ ಅನುಮತಿ ನೀಡಿದೆ, 2005 ರಲ್ಲಿ ಮೊರೆಕ್ಕೋದಲ್ಲಿ ಬನ್ನಂಜೆ ರಾಜನ ಬಂಧನವಾಗಿತ್ತು. ಕಳೆದ ಮೂರು ವರ್ಷಗಳಿಂದ ವಿಚಾರಣಾಧೀನ ಖೈದಿಯಾಗಿ ಹಿಂಡಲಗಾ ಜೈಲಿನಲ್ಲಿದ್ದ.
ಒಂದು ದಿನದ ಮಟ್ಟಿಗೆ ಜೈಲಿನಿಂದ ಹೊರಬರುತ್ತಿರುವ ಬನ್ನಂಜೆ ರಾಜ
ಹದಿನೈದು ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ಭೂಗತ ಪಾತಕಿಗೆ ಸೋಮವಾರ ತಾಯಿಯ ಭೇಟಿಗೆ ಅವಕಾಶವನ್ನು ನ್ಯಾಯಾಲಯ ಕಲ್ಪಿಸಿದೆ. ಮಲ್ಪೆ ಸಮೀಪ ಬನ್ನಂಜೆ ರಾಜನ ಮನೆಯಿದೆ.
ಭಾನುವಾರ ರಾತ್ರಿ ಉಡುಪಿಗೆ ಆಗಮಿಸಿರುವ ಪಾತಕಿಯನ್ನು ನಗರ ಠಾಣೆಯಲ್ಲೇ ಉಳಿಸಿ, ಇವತ್ತು ಬಿಗಿ ಭದ್ರತೆಯಲ್ಲಿ ಮನೆಗೆ ಕರೆದೊಯ್ಯಲಾಯಿತು.
ಉಡುಪಿ ಜಿಲ್ಲೆಯ ಬನ್ನಂಜೆ ಗ್ರಾಮದ ಸುಂದರ್ ಶೆಟ್ಟಿಗಾರ್ ಮತ್ತು ವಿಲಾಸಿನಿ ದಂಪತಿಯ ಪುತ್ರನಾದ ಬನ್ನಂಜೆ ರಾಜಾ ಬಿಎ ಪದವೀಧರ. 1990ರಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಿಯುಸಿ ಓದುವಾಗ ತನ್ನ ವಿರೋಧಿ ಬಣದ ಸಹಪಾಠಿಯನ್ನು ಮೊದಲ ಮಹಡಿಯಿಂದ ಕೆಳಗೆ ತಳ್ಳುವ ಮೂಲಕ ಅಪರಾಧ ಕೃತ್ಯಕ್ಕೆ ರಾಜಾ ಕಾಲಿಟ್ಟಿದ್ದ.
ಮೊದಲಿಗೆ ಛೋಟಾರಾಜನ್ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದ. ಮುಂಬೈನ ಭೂಗತ ಪಾತಕಿಗಳಿಂದ ಪಳಗಿದ ಈತ ಈಗ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಡಾನ್. ಬನ್ನಂಜೆ ರಾಜನ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆ ಸೇರಿದಂತೆ ರಾಜ್ಯದಲ್ಲಿ 44ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.