ತಾಯಿ ನಿಧನ ಹಿನ್ನೆಲೆ: ಉಡುಪಿಗೆ ಬಂದ ಬನ್ನಂಜೆ ರಾಜಾ
ಉಡುಪಿ, ಆಗಸ್ಟ್ 27: ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಭೂಗತ ಪಾತಕಿ ಬನ್ನಂಜೆ ರಾಜಾ ತಾಯಿ ಕಾಲು ಜಾರಿ ಬಿದ್ದು ಭಾನುವಾರ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬನ್ನಂಜೆ ರಾಜಾ ಇಂದು ಸೋಮವಾರ ಉಡುಪಿಗೆ ಆಗಮಿಸಿದ್ದಾನೆ.
ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜಾಗೆ ಮಾತೃ ವಿಯೋಗ
ತಾಯಿಯ ಅಂತ್ಯಸಂಸ್ಕಾರಕ್ಕೆ ಆಗಮಿಸಿರುವ ರಾಜನಿಗೆ ಪೊಲೀಸ್ ಸುಪರ್ದಿಯಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಉಡುಪಿಯ ಮಲ್ಪೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಉಡುಪಿ ಹಾಗೂ ಚಿಕ್ಕಮಗಳೂರು ಪೊಲೀಸರು ಬನ್ನಂಜೆ ರಾಜಾನನ್ನು ಬೆಳಗಾವಿ ಹಿಂಡೆಲಗ ಜೈಲಿಂದ ಉಡುಪಿಗೆ ಕರೆತಂದಿದ್ದಾರೆ.
ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ವಿಶೇಷ ಅನುಮತಿ ಪಡೆದ ಬನ್ನಂಜೆ ರಾಜಾ ಕಾರ್ಯದ ಬಳಿಕ ಮತ್ತೆ ಹಿಂಡೆಲಗ ಜೈಲಿಗೆ ಮರಳಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಪೆಯ ಕಲ್ಮಾಡಿಯಲ್ಲಿ ಬನ್ನಂಜೆ ರಾಜಾನ ತಾಯಿ ಮನೆ ಇದ್ದು, ಭಾನುವಾರ ಬೆಳಗ್ಗೆ ಮನೆಯಲ್ಲಿ ಕಾಲು ಜಾರಿ ಬಿದ್ದು ತಾಯಿ ವಿಲಾಸಿನಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಡರಲ್ಲೇ ಮೃತಪಟ್ಟರು.