ವಿಶ್ವ ಭ್ರಾತೃತ್ವವನ್ನು ಪ್ರಪಂಚಕ್ಕೆ ಸಾರುವ ಬಕ್ರೀದ್ ಹಿನ್ನೆಲೆ ನಿಮಗೆಷ್ಟು ಗೊತ್ತು?
ಉಡುಪಿ, ಆಗಸ್ಟ್.21: ಕರ್ನಾಟಕ ಮತ್ತು ಕೇರಳದಲ್ಲಿ ಪ್ರಾಕೃತಿಕ ವಿಕೋಪಗಳ ಸರಮಾಲೆಯ ನಡುವೆಯೇ ಈ ಬಾರಿ ಮುಸಲ್ಮಾನ ಬಾಂಧವರ ಬಕ್ರೀದ್ ಹಬ್ಬ ಬಂದಿದೆ. ಹೀಗಾಗಿ ಈ ಹಬ್ಬವನ್ನು ಸರಳವಾಗಿ ಆಚರಿಸಲು ಮುಸಲ್ಮಾನ ಬಾಂಧವರು ತೀರ್ಮಾನಿಸಿದ್ದಾರೆ. ಇಷ್ಟಕ್ಕೂ ಈ ಹಬ್ಬದ ಹಿನ್ನೆಲೆ ಏನು ? ಮಹತ್ವ ಏನು ಗೊತ್ತಾ?
ಮುಸ್ಲಿಮರಿಗೆ ವರ್ಷಕ್ಕೆ ಬರುವ ದೊಡ್ಡ ಎರಡು ಹಬ್ಬಗಳಲ್ಲಿ ಬಕ್ರೀದ್ ಕೂಡ ಒಂದು. ಇನ್ನೊಂದು ಹಬ್ಬ ರಂಜಾನ್ ಉಪವಾಸದ ಬಳಿಕ ಬರುವಂಥದ್ದು. ರಂಜಾನ್ ಹಬ್ಬಕ್ಕೆ ಹೋಲಿಸಿದರೆ , ಬಕ್ರೀದ್ ತ್ಯಾಗ ಬಲಿದಾನದ ಹಿನ್ನೆಲೆಯನ್ನು ಹೊಂದಿದೆ. ಮಾತ್ರವಲ್ಲ, ವಿಶ್ವ ಭ್ರಾತೃತ್ವವನ್ನು ಪ್ರಪಂಚಕ್ಕೇ ಸಾರುವ ಹಬ್ಬ ಇದು.
ಕಾಣಿಸಿಕೊಂಡ ಚಂದ್ರ, ಆಗಸ್ಟ್ 22ರಂದೇ ಬಕ್ರೀದ್ ಆಚರಣೆ
ಬಕ್ರೀದ್ ಹಬ್ಬಕ್ಕೆ ಮಾನವ ಬಲಿಯೊಂದರ ಹಿನ್ನೆಲೆಯಿದೆ. ಪ್ರವಾದಿಗಳನ್ನು ಅಲ್ಲಾಹು ನೂರಾರು ಪರೀಕ್ಷೆಗೆ ಒಡ್ಡುತ್ತಾನೆ. ಪ್ರವಾದಿಯಾಗಿದ್ದ ಇಬ್ರಾಹಿಂ ನಬಿಯವರಿಗೆ ಒಂದು ದಿನ ಕನಸಿನಲ್ಲಿ 'ನಿನ್ನ ಮಗ ಇಸ್ಮಾಯಿಲ್ ನನ್ನು ನನಗೆ ಬಲಿ ಕೊಡಬೇಕು ಎಂದು ಅಲ್ಲಾಹ ಆಜ್ಞಾಪಿಸುತ್ತಾನೆ.
ಇಬ್ರಾಹೀಂ ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆ. ಅಲ್ಲಾಹನ ಆಜ್ಞೆಯನ್ನು ಪತ್ನಿ ಹಾಜಿರಾಗೆ ತಿಳಿಸಿ ಆಕೆಯ ಅನುಮತಿ ಮೇರೆಗೆ ಮಗನನ್ನು ಕೋಹ್ ಪರ್ವತದ ಬಳಿಗೆ ಕರೆದೊಯ್ಯುತ್ತಾರೆ. ಪ್ರವಾದಿ ಇಬ್ರಾಹಿಂ ತಮ್ಮ ಮಗ ಇಸ್ಮಾಯಿಲ್ ನನ್ನು ಬಲಿಕೊಡಲು ಸನ್ನದ್ದರಾದ ಕೂಡಲೇ ಅಶರೀರವಾಣಿಯೊಂದು ಮೊಳಗುತ್ತದೆ.
ಬಕ್ರೀದ್ ಆಚರಣೆ, ಬನ್ನೂರು ಕುರಿಗೆ ಬೇಡಿಕೆ ಹೆಚ್ಚು
ಪವಾಡ ಸದೃಶವೆಂಬಂತೆ ಇಸ್ಮಾಯಿಲ್ ಬದುಕುಳಿಯುತ್ತಾನೆ. ಮಗನ ಬದಲಾಗಿ ದುಂಬ ಎನ್ನುವ ಕುರಿ ಹತವಾಗಿ ಬಿದ್ದಿರುತ್ತದೆ. ಹೀಗೆ ಮಾನವ ಬಲಿ ಆಚರಣೆ ಪದ್ಧತಿ ತಪ್ಪಿಸಿದ ಕೀರ್ತಿ ಪ್ರವಾದಿ ಇಬ್ರಾಹಿಂ ಅವರಿಗೆ ಸಲ್ಲುತ್ತದೆ. ಬದಲಾಗಿ ಕುರಿ, ಮೇಕೆ, ಒಂಟೆ ಬಲಿ ನೀಡುವ ಆಚರಣೆ ಬಂದದ್ದು ಈ ಕಾರಣದಿಂದ.
ಸಂಕಷ್ಟ ನಿವಾರಣೆ
ಬಕ್ರೀದ್ ದಿನದಂದು ಪ್ರಾಣಿಗಳನ್ನು ಬಂಧುಬಳಗಕ್ಕೆ ದಾನ ನೀಡುವ ಪದ್ಧತಿ ಆವತ್ತಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ಕುರ್ಬಾನಿ ಎನ್ನುತ್ತಾರೆ. ಹಬ್ಬಕ್ಕೆ ಮುಸ್ಲಿಮರ ಪವಿತ್ರ ತೀರ್ಥಯಾತ್ರೆ ಹಜ್ ಮೆರಗು ನೀಡುತ್ತದೆ.
ಕಾಬಾ ಮತ್ತು ಪ್ರವಾದಿ ಮಹಮ್ಮದ್ ಅವರ ಸಮಾಧಿ ಸ್ಥಳವಾದ ಮದೀನಾವನ್ನು ಸಂದರ್ಶಿಸುವುದು ಹಜ್ ಮಾಡುವ ಕ್ರಿಯೆಗಳಲ್ಲಿ ಪ್ರಮುಖ. ಹಜ್ ಮಾಡುವುದರಿಂದ ಸಂಕಷ್ಟ ನಿವಾರಣೆಯಾಗುತ್ತದೆ. ಪಾಪಕಾರ್ಯ ಕಳೆದು ಹೋಗುತ್ತದೆ. ಹಜ್ ಮಾಡುತ್ತ ಹಾದಿಯಲ್ಲಿ ಸತ್ತರೂ ಅಂತಹ ಯಾತ್ರಾರ್ಥಿಗಳಿಗೆ ಪುಣ್ಯ ಲಭಿಸುತ್ತದೆ ಎಂಬುದು ಮುಸಲ್ಮಾನರ ಪ್ರಶ್ನಾತೀತ ನಂಬಿಕೆ.
ಮುಸ್ಲಿಂ ಬಾಂಧವರು ಪ್ರತಿದಿನ ಅಲ್ಲಾಹನನ್ನು ಸ್ಮರಿಸಬೇಕು. ಆ ಮೂಲಕ ಅವನ ಸನ್ನಿಧಿ ಪ್ರತಿಯೊಬ್ಬರಿಗೂ ಪ್ರಾಪ್ತವಾಗಬೇಕು ಎಂಬ ಉದ್ದೇಶದಿಂದ ಪ್ರವಾದಿ ಇಬ್ರಾಹಿಂ ಅವರು ಅನೇಕ ವಿಧಾನ ಮತ್ತು ಇಸ್ಲಾಂ ತತ್ವಗಳನ್ನು ಬೋಧಿಸಿದ್ದಾರೆ. ಹಜರುಲ್ ಅಸ್ಪದ್ ಎಂಬ ಶ್ರೇಷ್ಠ ಕಲ್ಲನ್ನು ಸ್ವರ್ಗನಿಂದ ತರಿಸುತ್ತಾರೆ.
ಪ್ರಸ್ತುತ ಮುಕಾಮ್ ಎ-ಇಬ್ರಾಹಿಮ್ ಎಂದು ಹೇಳಲಾಗುವ ಕಲ್ಲಿನ ಮೇಲೆ ನಿಂತು ಪವಿತ್ರ ಮಕ್ಕಾ ನಗರದಲ್ಲಿ ಕಾಬಾ(ದೇವರ ಸನ್ನಿಧಿ)ನಿರ್ಮಿಸಿದರು ಎಂಬುದು ಐತಿಹ್ಯ.
ಮಸೀದಿಗಳಲ್ಲಿ ಜನಜಂಗುಳಿ
ಹಜ್ ಯಾತ್ರೆಗೆ ಹೋಗುವ ಯಾತ್ರಾರ್ಥಿಗಳು ಈಗಲೂ ಕಾಬಾದ ಸುತ್ತಲೂ ತವಾಫ್(ಪ್ರದಕ್ಷಿಣೆ)ಮಾಡಿ ಬರುತ್ತಾರೆ. ಮುಕಾಮ್-ಎ ಇಬ್ರಾಹಿಂ ಹಾಗೂ ಹಜರುಲ್ ಅಸ್ಪದ್ ಕಲ್ಲುಗಳ ವಿಶೇಷವೆಂದರೆ ಇವು ಸ್ವರ್ಗದಲ್ಲಿ ಅಲ್ಲಾಹ್ ಬಳಿ ಮುಸ್ಲಿಂ ಬಾಂಧವರು ಹಜ್ ಮಾಡಿದ್ದಾರೋ ಇಲ್ಲವೋ ಎಂದು ಸಾಕ್ಷಿ ನುಡಿಯುತ್ತವೆ ಎಂಬುದು ನಂಬಿಕೆ.
ಹಬ್ಬದ ದಿನ ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ನಮಾಝ್ ನಿರ್ವಹಿಸ್ತಾರೆ. ನಮಾಝ್ ಬಳಿಕ ಸಾಮೂಹಿಕ ಪ್ರಾರ್ಥನೆಯೂ ಸಂಪನ್ನಗೊಳ್ಳುತ್ತದೆ. ಹೀಗಾಗಿ ಈ ದಿವಸ ಬಹುತೇಕ ಎಲ್ಲ ಮಸೀದಿಗಳಲ್ಲೂ ಜನಜಂಗುಳಿ ಇರುತ್ತದೆ.
ಪರಸ್ಪರ ಶುಭಾಶಯ ವಿನಿಮಯ
ಶಾಂತಿ ಸಂದೇಶ ಸಾರುವ ವಿಶ್ವ ಭ್ರಾತೃತ್ವದ ಸಂಕೇತವಾದ ಈ ಹಬ್ಬದ ಸಂದರ್ಭ ಮುಸ್ಲಿಂ ಬಾಂಧವರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸ್ತಾರೆ. ಬಕ್ರೀದ್ ಹಬ್ಬ ಬಂತು ಅಂದ್ರೆ ಮಕ್ಕಳು ವಿಶೇಷ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಇದಕ್ಕೆ ಕಾರಣ ನಗದು ರೂಪದಲ್ಲಿ ಮಕ್ಕಳಿಗೆ ಸಿಗುವ ದಾನ.
ಹೌದು. ಪೆರ್ನಾಳ್ ಎಂದು ಕರೆಸಿಕೊಳ್ಳುವ ಈ ಹಬ್ಬದಂದು ಹಿರಿಯರು ಕಿರಿಯರಿಗೆ ಹಣ ನೀಡುವ ಸಂಪ್ರದಾಯವೂ ಇದೆ. ಹಾಗಂತ ಕಿರಿಯರು ಹಿರಿಯರಿಗೆ ಕೊಡಬಾರದೆಂದೇನಿಲ್ಲ. ಇದಕ್ಕೆ ವಯಸ್ಸಿನ ಭೇದ ಇಲ್ಲ. ಆದ್ರೆ ಸಾಮಾನ್ಯವಾಗಿ ಮಕ್ಕಳಿಗೆ ದೊಡ್ಡವರು ಹಣ ನೀಡುವ ಪದ್ಧತಿ ಇದೆ. ಹೀಗಾಗಿ ಈದುಲ್ ಫಿತರ್ ದಿನ ಮಕ್ಕಳು ಗರಿಗರಿ ನೋಟು ಹಿಡಿದು ಕುಣಿಯುತ್ತಾರೆ.
ಬೆಳಗ್ಗಿನ ಹೊತ್ತು ಸಾಮೂಹಿಕ ನಮಾಜಿನ ಬಳಿಕ ಮುಸ್ಲಿಂ ಬಾಂಧವರು ಬಂಧು ಮಿತ್ರರ ಮನೆಗಳಿಗೆ ತೆರಳಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ವಾಡಿಕೆ. ತಮ್ಮಿಂದ ತಪ್ಪಾಗಿದ್ದರೆ ಕ್ಷಮಿಸುವಂತೆ ಕೋರಿಕೊಳ್ಳುತ್ತಾರೆ. ಹಾಗಂತ ಇದು ಮುಸಲ್ಮಾನರಿಗೆ ಮೀಸಲಾದ ಹಬ್ಬ ಅಲ್ಲ.
ಹಿಂದೂ ,ಕ್ರಿಶ್ಚಿಯನ್ ರನ್ನು ಮನೆಗೆ ಕರೆಯಲಾಗುತ್ತದೆ. ನೆರೆಹೊರೆಯವರಿಗೂ ಬಿರಿಯಾನಿ ಹಂಚಿ ಸಿಹಿ ಕೊಟ್ಟು ಸತ್ಕರಿಸುವ ಪದ್ಧತಿ ಎಲ್ಲೆಡೆ ನಡೆದುಕೊಂಡು ಬಂದಿದೆ. ಒಟ್ಟಾರೆ ಶಾಂತಿ ಸೌಹಾರ್ದತೆ ಮತ್ತು ವಿಶ್ವ ಭ್ರಾತೃತ್ವವನ್ನು ಈದುಲ್ ಫಿತರ್ ಹಬ್ಬ ಜಗತ್ತಿಗೆ ಸಾರುತ್ತದೆ.
ಈ ಬಾರಿ ಸರಳ ಆಚರಣೆ
ಈ ಬಾರಿ ಕರ್ನಾಟಕದ ಕೆಲವು ಪ್ರದೇಶ ಮತ್ತು ಕೇರಳ ರಾಜ್ಯದಲ್ಲಿ ಮಹಾಮಳೆಯಿಂದ ಸಾವಿರಾರು ಜನ ಸಂಕಷ್ಟದಲ್ಲಿದ್ದಾರೆ. ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮನೆಮಠ ಕಳೆದುಕಂಡವರ ಲೆಕ್ಕ ಸಿಗುತ್ತಲೇ ಇಲ್ಲ. ಹೀಗಾಗಿ ಆಡಂಬರದ ಹಬ್ಬ ನಡೆಸದಿರಲು ಮುಸಲ್ಮಾನ ಬಾಂಧವರು ನಿರ್ಧರಿಸಿದ್ದಾರೆ.
"ನಿನ್ನ ನೆರೆಹೊರೆಯವರು ಸಂಕಷ್ಟದಲ್ಲಿರುವಾಗ ನೀನು ಸಂಭ್ರಮ ಪಡಬೇಡ ; ಅವರ ನೆರವಿಗೆ ಧಾವಿಸು" ಎನ್ನುತ್ತದೆ ಪ್ರವಾದಿ ಸಂದೇಶ. ಈ ಹಿನ್ನೆಲೆಯಲ್ಲಿ ಮುಸಲ್ಮಾನ ಬಾಂಧವರು ಸರಳವಾಗಿ ಹಬ್ಬ ಆಚರಿಸಲು ತೀರ್ಮಾನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಹಬ್ಬವನ್ನು ಸರಳವಾಗಿ ಆಚರಿಸಲು ಒತ್ತು ನೀಡುವಂತೆ ಸಂದೇಶಗಳು ಹರಿದಾಡುತ್ತಿವೆ.