ಕರಾವಳಿಯಲ್ಲಿಂದು ಬಕ್ರೀದ್: ನಿರ್ಬಂಧಗಳೊಂದಿಗೆ ಧಾರ್ಮಿಕ ಆಚರಣೆ
ಉಡುಪಿ, ಜುಲೈ 31: ಕರಾವಳಿಯಲ್ಲಿಂದು ಬಕ್ರೀದ್ ಸಂಭ್ರಮ. ಎರಡು ತಿಂಗಳ ಹಿಂದೆ ಕೊರೊನಾ ಕಾಲದಲ್ಲಿ ಬಂದಿದ್ದ ರಮ್ಝಾನ್ ಹಬ್ಬದಂತೆಯೇ ಈ ಬಾರಿಯ ಬಕ್ರೀದ್ ಹಬ್ಬವನ್ನೂ ಸರಳವಾಗಿ ಆಚರಿಸಲಾಗುತ್ತಿದೆ.
ಕೊರೊನಾ ನಿರ್ಬಂಧಗಳೊಂದಿಗೆ ಇಂದು ಕೆಲವು ಮಸೀದಿಗಳಲ್ಲಿ ನಮಾಜ್ ಮತ್ತು ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗಿತ್ತು. ಅದರಂತೆ ಮುಸಲ್ಮಾನರು ಮಸೀದಿಗಳಿಗೆ ಕಡಿಮೆ ಸಂಖ್ಯೆಗಳಲ್ಲಿ ತೆರಳಿ ನಮಾಜ್ ನಿರ್ವಹಿಸಿದರೆ, ಹೆಚ್ಚಿನ ಜನ ತಮ್ಮ ತಮ್ಮ ಮನೆಗಳಲ್ಲೇ ಬಕ್ರೀದ್ ನಮಾಝ್ ಮತ್ತು ಪ್ರಾರ್ಥನೆ ಮಾಡಿದರು. ಮಸೀದಿಗಳಲ್ಲಿ ಒಮ್ಮೆಗೆ ಐವತ್ತು ಮಂದಿಗೆ ಮಾತ್ರ ನಮಾಜಿಗೆ ಅವಕಾಶ ಇತ್ತು. ಹಿರಿಯರಿಗೆ ಮತ್ತು ಮಕ್ಕಳಿಗೆ ಮಸೀದಿಗೆ ಬಾರದೆ ಮನೆಯಲ್ಲೇ ನಮಾಜ್ ಮಾಡುವಂತೆ ಮನವಿ ಮಾಡಲಾಗಿತ್ತು.
ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಿ: ಆಡು ಕುರಿಗಳಿಗೆ ಕುಸಿದ ಡಿಮ್ಯಾಂಡ್!
ನಮಾಜ್ ನಂತರ ಆಲಿಂಗನಕ್ಕೆ ಅವಕಾಶ ಇರಲಿಲ್ಲ. ಐವತ್ತಕ್ಕಿಂತ ಹೆಚ್ಚು ಜನ ಮಸೀದಿಗೆ ಆಗಮಿಸಿದರೆ ಎರಡು ಬ್ಯಾಚ್ ಗಳಲ್ಲಿ ನಮಾಜ್ ಗೆ ವ್ಯವಸ್ಥೆ ಮಾಡಲಾಗಿತ್ತು. ಮಸೀದಿಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡಿ, ಕಡ್ಡಾಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಉಪಯೋಗಿಸಿ ನಮಾಜ್ ಗೆ ಅವಕಾಶ ಕಲ್ಪಿಸಲಾಗಿತ್ತು. ಇನ್ನು ಹೊಸ ಬಟ್ಟೆ ಖರೀದಿಯ ಅಬ್ಬರ ಇರಲಿಲ್ಲ. ಮುಖ್ಯವಾಗಿ ಕುರಿ ಆಡುಗಳನ್ನು ಕುರ್ಬಾನಿ ನೀಡುವುದೂ ಈ ಬಾರಿ ಕಡಿಮೆಯಾಗಿತ್ತು.
ಬಕ್ರೀದ್ ಹಬ್ಬದ ಸಂದರ್ಭ ಹಜ್ ಯಾತ್ರೆಯೂ ಸಂಪನ್ನಗೊಳ್ಳುವುದು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ. ಈ ಬಾರಿ ಹಜ್ ಯಾತ್ರೆ ರದ್ದಾಗಿರುವುದರಿಂದ ಹಬ್ಬದ ಸಂಭ್ರಮವನ್ನು ಕಡಿಮೆ ಮಾಡಿದೆ.