ಕಾರ್ಕಳದ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ಭಜರಂಗದಳ ದಾಳಿ
ಉಡುಪಿ, ಸೆಪ್ಟೆಂಬರ್ 10; ಹಲವು ವರ್ಷಗಳಿಂದ ಮತಾಂತರ ವಿಚಾರದಲ್ಲಿ ಶಾಂತವಾಗಿದ್ದ ಕರಾವಳಿ ಈಗ ಮತ್ತೆ ಕಾದ ಕೆಂಡವಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪದಡಿಯಲ್ಲಿ ಪ್ರಾರ್ಥನಾ ಕೇಂದ್ರದ ಮೇಲೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ.
ಶುಕ್ರವಾರ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಆನಂದಿ ಮೈದಾನದ ಪ್ರಗತಿ ಪ್ರಾರ್ಥನಾಲಯದ ಮೇಲೆ ಭಜರಂಗದಳದ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಈ ಪ್ರಾರ್ಥನಾಲಯದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಅಂತಾ ಆರೋಪಿಸಿದ್ದಾರೆ.
ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ
ಪ್ರಾರ್ಥನಾಲಯದ ಮುಖ್ಯಸ್ಥ ಬೆನಡಿಕ್ಟ್ ಎಂಬಾತನ ನೇತೃತ್ವದಲ್ಲಿ60ಕ್ಕೂ ಅಧಿಕ ಮಹಿಳೆಯರು, ಹತ್ತಕ್ಕೂ ಹೆಚ್ಚು ಮಕ್ಕಳನ್ನು ಕೂಡಿ ಹಾಕಿಕೊಂಡು ಬಲವಂತವಾಗಿ ಪ್ರಾರ್ಥನೆ ಮಾಡಲಾಗುತ್ತಿದೆ ಅಂತಾ ಆರೋಪಿಸಲಾಗಿದೆ. ದಾಳಿ ವೇಳೆ ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದ್ದು, ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿದೆ.
ಎಲ್ಲರ 'ಡಿಎನ್ಎ' ಒಂದೇ ಆದರೆ ಮತಾಂತರ ವಿರೋಧಿ ಕಾನೂನು ಏಕೆ?: ದಿಗ್ವಿಜಯ್ ಸಿಂಗ್
ಅಕ್ರಮವಾಗಿ ಜನರನ್ನು ಕೂಡಿಟ್ಟು ಮತಾಂತರ ಮಾಡಲಾಗುತ್ತಿದೆ ಅಂತಾ ಆರೋಪಿಸಿ, ಮಧ್ಯಾಹ್ನದ ವೇಳೆಗೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಪ್ರಾರ್ಥನಾ ಕೇಂದ್ರದಲ್ಲಿದ್ದವರನ್ನು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತವನ್ನು ತಲುಪಿದೆ. ಈ ವೇಳೆ ಆಗಮಿಸಿದ ಕಾರ್ಕಳ ಠಾಣಾ ಪೊಲೀಸರು, ಪ್ರಗತಿ ಪ್ರಾರ್ಥನಾಲಯದಲ್ಲಿದ್ದವರನ್ನು ಮನೆಗೆ ಕಳುಹಿಸಿದ್ದಾರೆ. ಭಜರಂಗದಳ ಕಾರ್ಯಕರ್ತರನ್ನು ಚದುರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ, "ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ನೂರಾರು ಹಿಂದೂಗಳನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿವೆ. ಆರಂಭದಿಂದಲೂ ಹಿಂದೂ ಜಾಗರಣ ವೇದಿಕೆ ಈ ಬಗ್ಗೆ ಹೋರಾಟ ನಡೆಸುತ್ತಲೇ ಇದೆ. ಸೂಕ್ತ ಮಾಹಿತಿಗಳು ಇದ್ದ ಹಿನ್ನೆಲೆಯಲ್ಲಿ ನಾವು ದಾಳಿ ಮಾಡಿದ್ದೇವೆ" ಎಂದರು.
"ಪೊಲೀಸರು ಮತಾಂತರ ಕೇಂದ್ರಕ್ಕೆ ಹೋಗಿ ವಿಚಾರಿಸಿದ್ದಾರೆ. ಸರ್ಕಾರ ಅದ್ಧೂರಿ ಗಣೇಶೋತ್ಸವಕ್ಕೆ ಅನುಮತಿ ಕೊಟ್ಟಿಲ್ಲ. ಆದರೆ ಪ್ರಾರ್ಥನೆಯ ಹೆಸರಿನಲ್ಲಿ ಮತಾಂತರಕ್ಕೆ ಅವಕಾಶ ಇದೆ. ಮತಾಂತರಿಗಳಿಗೆ ಕೋವಿಡ್ ನಿಯಮ ಪಾಲನೆ ಇಲ್ಲವೇ?. ಕರಾವಳಿ ಜಿಲ್ಲೆಗಳಲ್ಲಿ ಹಲವಾರು ಮತಾಂತರ ಕೇಂದ್ರಗಳಿವೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾವು ದಾಳಿ ಮುಂದುವರಿಸುತ್ತೇವೆ. ಪರಿಸ್ಥಿತಿ ಹದಗೆಡಲು ಅವಕಾಶ ಕೊಡಬೇಡಿ" ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಎಚ್ಚರಿಕೆ ನೀಡಿದರು.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶತಮಾನದ ಕ್ರಿಶ್ಚಿಯನ್ ಸ್ಮಶಾನ ಧ್ವಂಸ
ಆದರೆ ಮತಾಂತರದ ಆರೋಪವನ್ನು ಪ್ರಗತಿ ಪ್ರಾರ್ಥನಾಲಯದ ಮುಖಂಡ, ಬೆನೆಡಿಕ್ಟ್ ನಿರಾಕರಿಸಿದ್ದಾರೆ. "ಪ್ರಗತಿ ಪ್ರಾರ್ಥನಾಲಯದಲ್ಲಿ ಕೇವಲ ಪ್ರಾರ್ಥನೆ ಮಾತ್ರ ನಡೆಯುತ್ತಿದೆ. ಯಾರನ್ನೂ ಬಲವಂತವಾಗಿ ಇಲ್ಲಿ ಕೂಡಿ ಹಾಕೋದಿಲ್ಲ. ಎಲ್ಲರೂ ಅವರ ಇಚ್ಛೆಯಂತೆ ಬಂದು ಪ್ರಾರ್ಥನೆ ಮಾಡುತ್ತಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಈ ಪ್ರಾರ್ಥನಾ ಕೇಂದ್ರವನ್ನು ಮಂಗಳೂರು ಮೂಲದ ಕ್ರೈಸ್ತ ಸಂಸ್ಥೆ ನಡೆಸುತ್ತಿದ್ದು, ಕೇವಲ ಪ್ರಾರ್ಥನೆಯನ್ನು ಮಾತ್ತ ಮಾಡಲಾಗುತ್ತಿದೆ ಅಂತಾ ಹೇಳಿದ್ದಾರೆ. ಇನ್ನು ಪ್ರಾರ್ಥನಾ ಕೇಂದ್ರಕ್ಕೆ ಆಗಮಿಸಿದ್ದ ಹಿಂದೂ ಮಹಿಳೆ ಕವಿತಾ ಎಂಬುವವರು ಭಜರಂಗದಳದ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಯಾರನ್ನೂ ಬಲವಂತವಾಗಿ ಕೂರಿಸಿಲ್ಲ. ನಾನು ಸ್ವ ಇಚ್ಛೆಯಿಂದ ಬಂದಿದ್ದೇನೆ. ಕಳೆದ ಹಲವು ವರ್ಷಗಳಿಂದ ನನಗೆ ಆರೋಗ್ಯ ಸಮಸ್ಯೆಯಿತ್ತು. ಮೈ ಮೇಲೆ ಪ್ರೇತಾಹ್ವಾನ ಆಗುತಿತ್ತು. ಇದಕ್ಕೆ ಪರಿಹಾರಕ್ಕಾಗಿ ಹಲವು ಹೋಮ ಹವನ ಮಾಡಿದ್ದೇನೆ. ತಲೆಗೆ ಚಿಕಿತ್ಸೆ ಕೂಡಾ ಪಡೆದಿದ್ದೇನೆ. ಆದರೆ ಗುಣಮುಖವಾಗಿರಲಿಲ್ಲ. ಆದರೆ ಈ ಪ್ರಾರ್ಥನಾ ಕೇಂದ್ರಕ್ಕೆ ಕಳೆದೊಂದು ವಾರದಿಂದ ಬರುತ್ತಿದ್ದು, ಈಗ ಸಂಪೂರ್ಣ ಗುಣಮುಖ ಆಗಿದ್ದೇನೆ. ಇಲ್ಲಿ ಏಸುವನ್ನು ಪ್ರೀತಿಸಲು ಹೇಳುತ್ತಾರೆ ಅಷ್ಟೇ ಅಂತಾ ಹೇಳಿದ್ದಾರೆ.
Recommended Video
ಒಟ್ಟಿನಲ್ಲಿ ಉಡುಪಿಯಲ್ಲಿ ಮತಾಂತರದ ವಿಚಾರ ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದೆ. ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಸಂಘರ್ಷ ತಪ್ಪಿಸಬೇಕಿದೆ.