ಗಣರಾಜ್ಯೋತ್ಸವದಂದು ನಡೆದಿದ್ದ ಜೋಡಿ ಕೊಲೆ ಆರೋಪಿಗಳಿಗೆ ಜಾಮೀನು
ಉಡುಪಿ, ನವೆಂಬರ್ 5: ಗಣರಾಜ್ಯೋತ್ಸವ ದಿನದಂದು ಕೋಟದಲ್ಲಿ ಬರ್ಬರವಾಗಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಐದು ಮಂದಿ ಆರೋಪಿಗಳಿಗೆ ಕುಂದಾಪುರ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಅಯ್ಯಪ್ಪ ದೊರೆ ಹತ್ಯೆ; 9 ಕೋಟಿ ವ್ಯವಹಾರ ಕೊಲೆಯಲ್ಲಿ ಅಂತ್ಯ!
ಜನವರಿ 26ರಂದು ಕೋಟದ ನಿವಾಸಿಗಳಾದ ಯತೀಶ್ ಮತ್ತು ಭರತ್ ಎನ್ನುವವರನ್ನು ರಾತ್ರಿ ವೇಳೆ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೋಟ ಸಮೀಪದ ಮಣೂರಿನಲ್ಲಿ ಈ ಘಟನೆ ನಡೆದಿದ್ದು, ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 18 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಈವರೆಗೆ ಈ ಐವರು ಆರೋಪಿಗಳ ಸಹಿತ ಒಟ್ಟು 7 ಮಂದಿಗೆ ಜಾಮೀನು ಸಿಕ್ಕಂತಾಗಿದೆ.
ಆರೋಪಿಗಳಾದ ರಾಘವೇಂದ್ರ ಕಾಂಚನ್ ಹಾಗೂ ರತೀಶ್ ಕರ್ಕೆರ ಅವರಿಗೆ ಹೈಕೋರ್ಟ್ ಜುಲೈನಲ್ಲಿ ಜಾಮೀನು ನೀಡಿತ್ತು. ಈಗ ಆರೋಪಿಗಳಾದ ಪೊಲೀಸ್ ಸಿಬ್ಬಂದಿ ವೀರೇಂದ್ರ ಆಚಾರ್ಯ, ಪವನ್ ಅಮೀನ್, ಕಾಲೇಜು ವಿದ್ಯಾರ್ಥಿ ಪ್ರಣವ್ ರಾವ್, ಇತರೆ ಆರೋಪಿಗಳಾದ ಸಂತೋಷ್, ಮಹಮ್ಮದ್ ತೌಫಿಕ್ ಅವರಿಗೆ ಜಾಮೀನು ದೊರೆತಿದೆ. ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ನರಹರಿ ಮರಾಠೆ ಈ ಜಾಮೀನು ಆದೇಶ ಹೊರಡಿಸಿದ್ದಾರೆ.