ಉಡುಪಿ: ಆನ್ಲೈನ್ ಕ್ಲಾಸ್ ನಡುವೆ ಆಟಿಡೊಂಜಿ ದಿನ ಮಾಡಿ ಖುಷಿಪಟ್ಟ ಉಪನ್ಯಾಸಕರು
ಉಡುಪಿ, ಜುಲೈ 22: ಆಷಾಢ ತಿಂಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರದ್ದೇ ಆದ ಮಹತ್ವವಿದೆ. ಹಿಂದಿನ ಕಾಲದಲ್ಲಿ ವಿಪರೀತವಾಗಿ ಸುರಿಯುತ್ತಿರುವ ಮಳೆಯ ಸಂದರ್ಭದಲ್ಲಿ ಕೃಷಿ ಮಾಡಲಾಗದೇ ಜನರು ನೈಸರ್ಗಿಕವಾಗಿ ಸಿಗುವ ಆಹಾರವನ್ನೇ ಬಳಸುತ್ತಿದ್ದರು.
ಆಟಿ ಕಳೆಂಜ ಎಂಬ ಶಕ್ತಿ ಊರೂರಿಗೆ ತೆರಳಿ ಊರಿಗೆ ಬಂದ ದುಷ್ಟ ಗುಣಗಳನ್ನು ದೂರ ಮಾಡುತ್ತದೆ ಎಂಬ ನಂಬಿಕೆ ಕೂಡಾ ಇತ್ತು. ಆದರೆ ಕಾಲ ಬದಲಾದಂತೆ ಜನರ ಜೀವನವೂ ಬದಲಾಗಿದೆ. ಆಷಾಢ ಮಾಸದಲ್ಲಿ ಹಿಂದಿನ ಜನ ಮಾಡುತ್ತಿದ್ದ ತಿಂಡಿ-ತಿನಸು, ಸಂಸ್ಕೃತಿಯನ್ನು ಮತ್ತೆ ನೆನಪಿಸುವಂತಹ ಕೆಲಸ ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುತ್ತದೆ. ಆದರೆ ಈ ಬಾರಿ ಅಂತಹ ವಿಶೇಷ ಕ್ಷಣಕ್ಕೆ ಸಾಕ್ಷಿಯಾದವರು ಶಿಕ್ಷಕರು.
ಕೊರೊನಾ ಕಾರಣದಿಂದ ಆನ್ಲೈನ್ ಕ್ಲಾಸ್ ಎಂದು ಒತ್ತಡದಲ್ಲೇ ಕಾಲ ಕಳೆದಿದ್ದ ಉಡುಪಿಯ ಎಂಜಿಎಂ ಕಾಲೇಜಿನ ಉಪನ್ಯಾಸಕರು ಇಂದು ಕೊಂಚ ರಿಲಾಕ್ಸ್ ಆಗಿದ್ದರು.
ತುಳುನಾಡಿನ ಪ್ರಸಿದ್ಧ ಖಾದ್ಯಗಳಾದ ಉಪ್ಪಡ್ ಪಚ್ಚಿರ್, ತೆವುದಂಟು ಗಸಿ, ಗುಜ್ಜೆ ಹಪ್ಪಳ, ಗುಜ್ಜೆ ಹಲ್ವಾ, ಪತ್ರೋಡೆ, ಉಪ್ಪಿನಕಾಯಿ... ಆಹಾ! ಬಾಯಲ್ಲಿ ನೀರು ತರಿಸೋ ಬಗೆಯ ಬಗೆಯ ಕರಾವಳಿ ಖಾದ್ಯಗಳೆಲ್ಲವೂ ಅಲ್ಲಿ ತಯಾರಾಗಿತ್ತು. ಅಂದ ಹಾಗೆ ಇದು ಯಾವುದೋ ಹೋಟೆಲ್ನಿಂದ ತಂದಿರುವುದಲ್ಲ. ಕಾಲೇಜು ಉಪನ್ಯಾಸಕರು ಮನೆಯಲ್ಲೇ ತಯಾರಿಸಿ ತಂದ ಶುಚಿ ರುಚಿಯಾದ ಆಹಾರಗಳು.
ಕರಾವಳಿಯಲ್ಲಿ ಆಷಾಢ ಮಾಸ ಅಂದರೆ ಆಟಿ ತಿಂಗಳು. ಆಟಿಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯೋದಿಲ್ಲ. ಎಡೆ ಬಿಡದೆ ಮಳೆ ಸುರಿಯುವುದರಿಂದ ವಾತಾವರಣ ಕೂಡಾ ಕೂಲ್ ಕೂಲ್ ಆಗಿರುತ್ತದೆ. ಹಿಂದಿನ ಕಾಲದಲ್ಲಿ ಊಟಕ್ಕೂ ಕಷ್ಟಪಡುವ ತಿಂಗಳು ಅಂದರೆ ಇದೇ ಆಟಿ ತಿಂಗಳು.
ಹೀಗಾಗಿ ಪ್ರಕೃತಿಯಲ್ಲೇ ಸಿಗುವ ಕಾಯಿ ಪಲ್ಲೆಗಳು, ವಿವಿಧ ಹಣ್ಣುಗಳಿಂದ ಬಗೆ ಬಗೆಯ ಆರೋಗ್ಯಕರ ತಿಂಡಿ ತಿನಿಸುಗಳನ್ನು ಹಿಂದಿನ ಜನ ತಯಾರಿಸಿ ತಿನ್ನುತ್ತಿದ್ದರು. ಆದರೆ ಇಂದಿನ ಆಧುನಿಕ ಜೀವನದ ಭರಾಟೆಯಲ್ಲಿ ಮರೆಯಾದ ಆಟಿ ತಿಂಗಳ ಗಮ್ಮತ್ತನ್ನು ಮತ್ತೆ ನೆನಪಿಸಿ, ಕರಾವಳಿಯ ಸಾಂಪ್ರದಾಯಿಕ ಖಾದ್ಯಗಳನ್ನು ಯುವ ಪೀಳಿಗೆಗಳಿಗೂ ಪರಿಚಯಿಸುವ ದೃಷ್ಟಿಯಿಂದ ಇಂತಹ ವಿಶೇಷ ಕಾರ್ಯಕ್ರಮವನ್ನು ಉಪನ್ಯಾಸಕರೆಲ್ಲಾ ಒಂದುಗೂಡಿ ಆಯೋಜನೆ ಮಾಡಿದ್ದಾರೆ.
ಉಪನ್ಯಾಸಕಿಯರು ತಮ್ಮ ತಮ್ಮ ಮನೆಯಲ್ಲಿ ವಿವಿಧ ಬಗ್ಗೆಯ ಖಾದ್ಯಗಳನ್ನು ತಯಾರಿಸಿ ತಂದಿದ್ದರು. ಎಲ್ಲ ಬಗೆಯ ತಿಂಡಿ ಪದಾರ್ಥಗಳನ್ನು ಜೋಡಿಸಿಟ್ಟು, ಖಾದ್ಯಗಳನ್ನು ತಟ್ಟೆ ತುಂಬಾ ಹಾಕಿಸಿಕೊಂಡು, ಒಂದೊಂದಾಗಿ ಸವಿಯುತ್ತಾ ವ್ಹಾವ್, ಸೂಪರ್ ಎನ್ನುವ ಉದ್ಘಾರ ಮಾಡಿದರು. ಅಷ್ಟೇ ಅಲ್ಲದೇ ಆಟಿ ಕಲೆಂಜ ವೇಷ, ತೆಂಗಿನ ಗರಿಯಿಂದ ಸ್ಟೇಜ್ ಸಿಂಗಾರ ಮಾಡಿದ್ದು ಆಕರ್ಷಣೀಯವಾಗಿತ್ತು.
Recommended Video
ಒಟ್ಟಿನಲ್ಲಿ ಕೊರೊನಾದಿಂದ ಮನೆಯಲ್ಲಿ ಕೂತು ಆನ್ಲೈನ್ ಕ್ಲಾಸ್ ಅಂತ ಬ್ಯುಸಿಯಾಗಿದ್ದ ಉಪನ್ಯಾಸಕರು ಒಂದೆಡೆ ಸೇರಿ ಖುಷಿಪಟ್ಟರು. ಸಾಂಪ್ರದಾಯಿಕ ತಿಂಡಿಗಳನ್ನು ತಿಂದು ಒಂದೊಳ್ಳೆ ಸಮಯವನ್ನು ಎಂಜಾಯ್ ಮಾಡಿದರು.