ಮುಂಗಾರಿನ ಪ್ರಾರಂಭದಲ್ಲಿ ಮಾತ್ರ ಸಿಗುವ ಕಲ್ಲಣಬೆ ಬಗ್ಗೆ ನಿಮಗೆಷ್ಟು ಗೊತ್ತು?
ಉಡುಪಿ, ಜೂನ್.10 : ಕರಾವಳಿಯಲ್ಲಿ ಮಳೆಗಾಲ ಆರಂಭವಾಯಿತೆಂದರೆ ಸಾಕು ಮಳೆಗಾಲದ ಕೊನೆವರೆಗೂ ಪಕೃತಿ ದತ್ತವಾಗಿ ಸಿಗುವ ಆಹಾರ ಪದಾರ್ಥಗಳಿಂದ ವಿಶಿಷ್ಠ ಬಗೆಯ ಖಾದ್ಯಗಳು ರೆಡಿಯಾಗುತ್ತವೆ.
ಅದರಲ್ಲೂ ಮಳೆಗಾಲ ಆರಂಭದ 15 ದಿವಸದ ಒಳಗೆ ಮಳೆ ನೀರು ಭೂಮಿಯೊಳಗೆ ಬೀಳುತ್ತಿದ್ದಂತೆ ಒಂದು ವಿಶಿಷ್ಟವಾದ ಸಸ್ಯ ಸಂಕುಲದ ಆಹಾರ ಪದಾರ್ಥ ದೊರೆಯುತ್ತದೆ. ಅದರ ಹೆಸರು ಕಲ್ಲಣಬೆ.
ಬೊಚ್ಚುಬಾಯಲ್ಲೂ ಜೊಲ್ಲುಕ್ಕಿಸುವ ಆಳಂಬೆ ಮಸಾಲೆ ಸಾರು
ನೋಡಲು ಗೋಲಿಯಾಕಾರದಲ್ಲಿ ಇರುತ್ತದೆ. ಇದನ್ನು ತುಳುವಿನಲ್ಲಿ ಕಲ್ಲಾಲಾಂಬು ಎಂದು ಕರೆಯುತ್ತಾರೆ. ವಿಶೇಷವೆಂದರೆ ಮುಂಗಾರಿನ ಪ್ರಾರಂಭದಲ್ಲಿ ಮಾತ್ರ ಈ ಅಣಬೆ ಕಾಣಸಿಗುತ್ತದೆ. ಬಹುತೇಕರಿಗೆ ಈ ಅಣಬೆಯ ವಿಶೇಷತೆ ಬಗ್ಗೆ ಗೊತ್ತಿಲ್ಲ ಅಂತಾನೇ ಹೇಳಬಹುದು.
ಮೊದಲ ಮಳೆ ಭೂಮಿಗೆ ಬೀಳುವಾಗ ಗುಡುಗಿನ ಆರ್ಭಟ ಜೋರಾಗಿಯೇ ಇರುತ್ತದೆ. ಈ ಸಂದರ್ಭದಲ್ಲಿ ಜೌಗುಮಣ್ಣಿನ ಭೂಮಿಯ ಮೇಲೆ ಕತ್ತಿ ಅಥವಾ ಕೋಲಿನಿಂದ ಅಗೆದರೆ ಈ ವಿಶಿಷ್ಟವಾದ ಕಲ್ಲಣಬೆ ದೊರೆಯುತ್ತದೆ.
ಕಲ್ಲಣಬೆಯನ್ನು ಹುಡುಕಿಕೊಂಡು ಹೋಗಿ ಸಂಗ್ರಹ ಮಾಡುವುದು ಸುಲಭದ ಮಾತಲ್ಲ. ಏಕೆಂದರೆ ಇದರ ಇರುವಿಕೆಯೂ ಮೇಲ್ನೋಟಕ್ಕೆ ಅಷ್ಟು ಸುಲಭವಾಗಿ ಕಂಡುಬರುವುದಿಲ್ಲ. ಆದರೆ ಇದನ್ನು ತುಳುವರು ಕಂಡುಕೊಂಡಿದ್ದಾರೆ.
ಈ ಸಂಗ್ರಹ ಮಾಡಿದ ಕಲ್ಲಾಲಾಂಬುವನ್ನು ನೀರಿನಲ್ಲಿ ತೊಳೆದು, ಇದರ ಮೇಲಿನ ಸಿಪ್ಪೆಯನ್ನು ತೆಗೆದು ಇದಕ್ಕೆ ಬೇಕಾದ ಸಾಂಬಾರ ಪದಾರ್ಥಗಳನ್ನು ಹಾಕಿ, ಕರಾವಳಿಯ ನೀರು ದೋಸೆ ಅಥವಾ ಅನ್ನದ ಜೊತೆ ಸವಿಯುತ್ತಿದ್ದರೆ ತಟ್ಟೆಯಲ್ಲಿ ತಿಂಡಿ ಖಾಲಿಯಾಗುವುದೇ ಗೊತ್ತಾಗುವುದಿಲ್ಲ.
ಇದನ್ನು ಸಂಗ್ರಹಿಸಿ ಮಾರುಕಟ್ಟೆಗೆ ಕೊಡುವವರು ಇದ್ದಾರೆ. ಇದಕ್ಕೆ ಮಾರುಕಟ್ಟೆಯಲ್ಲಿ ಸೇರಿಗೆ 250ರಿಂದ 300ರೂವರೆಗೂ ಇದ್ದು, ಗ್ರಾಹಕರ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುತ್ತದೆ.
ಆದರೆ ಇದರ ತಾಜಾತನ ಇರುವುದು ಒಂದೇ ದಿವಸ. ಆದ ಕಾರಣ ಅವತ್ತಿನ ಕಲ್ಲಣಬೆ ಅಂದೇ ಖಾಲಿಯಾಗಬೇಕು. ಮರುದಿನ ಬಳಕೆ ಮಾಡಲು ಆಗುವುದಿಲ್ಲ. ಇದನ್ನು ಸಂಗ್ರಹಿಸುವಾಗ ಮತ್ತೊಂದು ಜಾಗ್ರತೆ ವಹಿಸಬೇಕಾದ ಸಂಗತಿಯೆಂದರೆ ಇದರಲ್ಲಿ ಕಪ್ಪು ಬಣ್ಣಕ್ಕೆ ತಿರುಗಿದ ಕಲ್ಲಣಬೆ ವಿಷಪೂರಿತವಾಗಿರುತ್ತದೆ.
ಯಾವುದು ವಿಷಪೂರಿತ, ಯಾವುದು ಆಹಾರಕ್ಕೆ ಬಳಸಬಹುದಾದದ್ದು ಎಂಬುದನ್ನು ಇದನ್ನು ಸಂಗ್ರಹಿಸುವುದರಲ್ಲಿ ಪರಿಣತಿ ಹೊಂದಿದವರಿಗೆ ಬಹುಬೇಗನೆ ತಿಳಿಯುತ್ತದೆ.
ಒಟ್ಟಿನಲ್ಲಿ ಇಂದು ರಾಸಯಾನಿಕಗಳಿಂದಲೇ ತುಂಬಿರುವ ಆಹಾರ ಪದಾರ್ಥಗಳಿಗಿಂತ ಪಕೃತಿ ದತ್ತವಾಗಿ ಸಿಗುವ ಇಂತಹ ಆಹಾರ ಪದಾರ್ಥಗಳೇ ಉತ್ತಮವಾಗಿರುತ್ತದೆ. ಹಾಗಾಗಿಯೇ ಹಳ್ಳಿಗರು ಇಂತಹ ಆಹಾರ ಕ್ರಮವನ್ನು ಇಂದಿಗೂ ಸಹ ಮುಂದುವರಿಸಿದ್ದಾರೆ. ಇದು ರುಚಿಕರವಾಗಿಯೂ ಸ್ವಾದಿಷ್ಟವಾಗಿಯೂ ಇರುತ್ತದೆ.