12 ವರ್ಷದ ಬಳಿಕ ಅಸ್ಸಾಂನ ಕುಟುಂಬ ಸೇರಿದ ಉಡುಪಿಯಲ್ಲಿದ್ದ ಮಹಿಳೆ
ಉಡುಪಿ, ಸೆಪ್ಟೆಂಬರ್ 21; ಆ ತಾಯಿ ಮನೆ ಬಿಟ್ಟು ಬಂದು 12 ವರ್ಷ ಕಳೆದಿತ್ತು. ಗಂಡನ ಸಾವಿನ ಬಳಿಕ ಮಾನಸಿಕ ಸ್ಥಿಮಿತ ಕಳೆದುಕೊಂಡು ಉತ್ತರ ಭಾರತದಿಂದ ದಕ್ಷಿಣದ ಕರಾವಳಿಗೆ ಬಂದು ಸೇರಿದ್ದಳು.
ಕಾಲ ಕಳೆಯುತ್ತಿದ್ದಂತೆಯೇ ಆ ತಾಯಿಗೆ ಹಿಂದಿನ ನೆನಪೆಲ್ಲವೂ ಮರುಕಳಿಸಿದರೂ ಮತ್ತೆ ಮನೆ ಸೇರುವುದಕ್ಕೆ ಭಾಷೆಯೇ ಸಮಸ್ಯೆಯಾಗಿತ್ತು. ಬೇರೆಯವರ ಮಾತು ತಾಯಿಗೆ ಅರ್ಥವಾಗುತ್ತಿರಲಿಲ್ಲ. ತಾಯಿಯ ಭಾವನೆ ಬೇರೆಯವರಿಗೆ ತಿಳಿಯುತ್ತಿರಲಿಲ್ಲ. ಆದರೆ 12 ವರ್ಷದ ಅಜ್ಞಾತವಾಸದ ಬಳಿಕ ತಾಯಿ ಈಗ ಮತ್ತೆ ಮನೆ ಸೇರಿದ್ದಾರೆ.
'ತಾಯಿ' ಎಂದರೆ ಯಾರು: ರಾಜ್ಯ ಹೈಕೋರ್ಟ್ ನೀಡಿದ ಮನಮಿಡಿಯುವ ತೀರ್ಪು
ತಾಯಿಯನ್ನು ಹುಡುಕಿಕೊಂಡು ಬಂದ ಮಗನ ತೋಳಿನಲ್ಲಿ ಬಂಧಿಯಾಗಿ ಮತ್ತೆ ಊರು ಸೇರಿದ್ದಾರೆ. ತಾಯಿ-ಮಗನ ಅದ್ಭುತ ಪ್ರೀತಿಯ ಕ್ಷಣಕ್ಕೆ ಸಾಕ್ಷಿಯಾಗಿದ್ದು ಉಡುಪಿ ಜಿಲ್ಲೆಯ ಶಂಕರಪುರ 'ವಿಶ್ವಾಸದ ಮನೆ' ಎಂಬ ಕೇಂದ್ರ.
ಮಗನನ್ನು ಮುದ್ದಾಡುತ್ತಿರುವ ತಾಯಿ, ತಾಯಿಯನ್ನು ಬಿಗಿದಪ್ಪಿದ ಮಗ. ಇಬ್ಬರ ಕಣ್ಣಲ್ಲೂ ಖುಷಿಯಿಂದ ಜಿಣುಗುತ್ತಿರುವ ಕಣ್ಣೀರ ಹನಿ. ಹನ್ನೆರಡು ವರ್ಷಗಳ ನಂತರ ತಾಯಿ ಮಗ ಒಂದಾದ ಅದ್ಭುತ ಕ್ಷಣ. ತಾಯಿ ಮಗ ಒಂದಾದ ಖುಷಿಯಲ್ಲಿದ್ದರೆ, ನೆರೆದಿದ್ದವರ ಕಣ್ಣಲ್ಲಿ ಇಬ್ಬರ ನಿಷ್ಕಲ್ಮಶ ಪ್ರೀತಿ ಕಂಡು ಆನಂದಭಾಷ್ಪವೇ ಹರಿದಿದೆ.
ಪುತ್ರ ಕೇಂದ್ರ ಸಚಿವನಾದರೂ ಕೃಷಿ ಕಾರ್ಮಿಕರಾಗಿ ದುಡಿಯುವ ತಂದೆ-ತಾಯಿ
ಆ ತಾಯಿಯ ಹೆಸರು ಬೇಗಂ. ಉತ್ತರ ಭಾರತದ ಅಸ್ಸಾಂ ಮೂಲದ ಮಹಿಳೆ. 2007ರಲ್ಲಿ ಗಂಡನ ಸಾವಿನ ಬಳಿಕ ಬೇಗಂ ಮಾನಸಿವಾಗಿ ಕುಗ್ಗಿ ಹೋಗಿದ್ದರು. 2008ರಲ್ಲಿ ಮನೆಯಿಂದ ಹೊರ ಬಂದ ಆಕೆ ಊರೂರು ಅಲೆದು, 2009ರಲ್ಲಿ ಮಂಗಳೂರು ಸೇರಿದ್ದರು. ಮಂಗಳೂರಿನ ಬೀದಿಯಲ್ಲಿ ಅಲೆದಾಡುತ್ತಿದ್ದ ಈಕೆಯನ್ನು ಗಮನಿಸಿದವರೊಬ್ಬರು, ಉಡುಪಿ ಶಂಕರಪುರದಲ್ಲಿ ಇರುವ ವಿಶ್ವಾಸದ ಮನೆಯ ಸಂಸ್ಥಾಪಕ ಸುನೀಲ್ ಜಾನ್, ಡಿಸೋಜಾಗೆ ತಿಳಿಸಿದ್ದರು.
ತಾಯಿ ಚಾಮುಂಡಿ ಬಳಿ ಯತ್ನಾಳ್ ಬೇಡಿಕೊಂಡಿದ್ದೇನು?
ಬಳಿಕ ಸುನಿಲ್ ಬೇಗಂ ಅವರನ್ನು ತನ್ನ ವಿಶ್ವಾಸದ ಮನೆಗೆ ಕರೆತಂದು ಔಷಧೋಪಚಾರ ಮಾಡಿದ ಬಳಿಕ ಬೇಗಂ ಗುಣಮುಖರಾದರು. ಹೆಸರು ಬೇಗಂ, ಐವರು ಮಕ್ಕಳು ಅನ್ನೋದು ಬಿಟ್ಟರೆ ಹೆಚ್ಚು ಮಾತನಾಡುತ್ತಿರಲಿಲ್ಲ. ಬೇಗಂ ಅವರಿಗೆ ಬಂಗಾಳಿ ಭಾಷೆ ಬಿಟ್ಟರೆ ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಎಲ್ಲ ವಿಧದಲ್ಲೂ ಮನೆಯವರ ಸಂಪರ್ಕಕ್ಕೆ ಪ್ರಯತ್ನ ಪಟ್ಟರೂ ಆಕೆಯ ಮನೆಯವರನ್ನು ಸಂಪರ್ಕ ಮಾಡುವುದ ಮಾತ್ರ ಕಷ್ಟವಾಗಿತ್ತು.
ಅವರು ನೀಡಿದ ಅಲ್ಪ ಸ್ವಲ್ಪ ಮಾಹಿತಿಯನ್ನು ಆಧರಿಸಿ ಸುಮಾರು 25ಕ್ಕೂ ಹೆಚ್ಚು ಪತ್ರಗಳನ್ನು ಬರೆದರೂ ಕಳುಹಿಸಿದ ಪತ್ರ ಹಾಗೆಯೇ ಹಿಂದೆ ಬರುತಿತ್ತು. ಆದರೆ ಕೊನೆಗೂ ತಾಯಿ ಮಕ್ಕಳು ಒಂದಾಗೋದು ದೇವರಿಗೂ ಪ್ರಿಯವಾಗಿತ್ತೋ ಏನೋ, ಇತ್ತೀಚೆಗೆ ಮಣಿಪಾಲ್ KMC ವಿದ್ಯಾರ್ಥಿಗಳು, ಆಶ್ರಮಕ್ಕೆ ಭೇಟಿ ನೀಡಿದಾಗ ಆಕೆಯನ್ನು ಮಾತನಾಡಿಸಿ ಮಾಹಿತಿ ಸಂಗ್ರಹಿಸಿ, ವಿಳಾಸವನ್ನು ಪತ್ತೆ ಹಚ್ಚಿದರು.
ಅಪೂರ್ವ ಕ್ಷಣಕ್ಕೆ ವಿದ್ಯಾರ್ಥಿಗಳು ಕೊಂಡಿ ಆದರು. ಈ ಬಗ್ಗೆ ಮಾತನಾಡಿದ ವಿಶ್ವಾಸ ಮನೆಯನ್ನು ನೋಡಿಕೊಳ್ಳುತ್ತಿರುವ ಸುನೀಲ್ ಜಾನ್ ಡಿಸೋಜಾ, "ತಾಯಿ ಬೇಗಂ ಅವರನ್ನು ಮರಳಿ ಅವರ ಮನೆಗೆ ಸೇರಿಸಲು ತುಂಬಾ ಪ್ರಯತ್ನಿಸಿದ್ದೆವು. ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ ಈಗ ತಾಯಿ ತನ್ನ ಕುಟುಂಬ ಸೇರುತ್ತಿರುವುದು ಖುಷಿಯನ್ನು ನೀಡಿದೆ" ಎಂದರು.
ಬೇಗಂ ಅವರ ಐವರು ಮಕ್ಕಳಲ್ಲಿ ಎರಡನೇ ಮಗ ತಹಜ್ಜುದ್ದೀನ್ ತಾಯಿಯನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗಲು ಅಸ್ಸಾಂ ರಾಜ್ಯದಿಂದ ಉಡುಪಿಗೆ ಬಂದಿದ್ದಾರೆ. "ತಾಯಿ ನಮ್ಮನ್ನು ಬಿಟ್ಟು ಹೋಗುವಾಗ ನನಗೆ 12 ವರ್ಷ ಆಗಿತ್ತು. ಅಂದಿನಿಂದ ತಾಯಿಗಾಗಿ ಸಾಕಷ್ಟು ಹುಡುಕಾಟ ನಡೆಸಿದೆವು. ಆದರೆ ಸಾಧ್ಯವಾಗಿಲ್ಲ ಕೊನೆಗೂ, ವಿಶ್ವಾಸದ ಮನೆ ತಾಯಿಯನ್ನು ನೀಡಿದೆ" ಅಂದು ಕಣ್ಣೀರು ಹಾಕಿದರು.
Recommended Video
ಒಟ್ಟಿನಲ್ಲಿ ತಾಯಿಯ ಇಳಿ ವಯಸ್ಸಿನಲ್ಲಿ ಆದರೂ ಮಕ್ಕಳಿಗೆ ತಾಯಿ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ. ತಾಯಿಗೆ ಮಕ್ಕಳ ಪ್ರೀತಿ ದಕ್ಕಿದೆ. ವಿಶ್ವಾಸದ ಮನೆಗೂ ತಾಯಿ ಮಕ್ಕಳನ್ನು ಒಂದಾಗಿಸಿದ ಸಂತೃಪ್ತಿ ಇದೆ.