ಶ್ರೀ ಕೃಷ್ಣನ ನಾಡು ಉಡುಪಿಯ ಏಕೈಕ ಮಹಿಳಾ ಅಭ್ಯರ್ಥಿ ಈಕೆ
Recommended Video
ಉಡುಪಿ, ಮೇ 4: ವಿಧಾನಸಭೆ ಚುನಾವಣೆ ಹವಾ ಕೃಷ್ಣನಗರಿ ಉಡುಪಿಯಲ್ಲೂ ಜೋರಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಅನ್ನೋದು ಗಮನಾರ್ಹ ಸಂಗತಿ. ವಿಧಾನಸಭೆ ಚುನಾವಣೆ ವಿಷಯಕ್ಕೆ ಬಂದ್ರೆ ಇಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ.
ದೇಶಕ್ಕೆ ಉಡುಪಿ ನೀಡಿದ ಕೊಡುಗೆಯನ್ನು ಹಾಡಿ ಹೊಗಳಿದ ನರೇಂದ್ರ ಮೋದಿ
ದಶಕಗಳ ಹಿಂದೆ ಇಲ್ಲಿ ಮಹಿಳೆಯೊಬ್ಬರು ವಿಧಾನಸಭೆ ಪ್ರವೇಶಿಸಿದ್ದು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಯಾರೂ ಟಿಕೆಟ್ ಕೇಳುವ ಧೈರ್ಯ ತೋರಿಲ್ಲ. ಉಡುಪಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ತವರು. ಜೊತೆಗೆ ಪ್ರೇಕ್ಷಣೀಯ ಸ್ಥಳಗಳ ಬೀಡು. ಇವಿಷ್ಟೇ ಅಲ್ಲ ಕರಾವಳಿ ರಾಜಕೀಯವನ್ನು ಬಹುಮಟ್ಟಿಗೆ ಪ್ರಭಾವಿಸುವ ಶಕ್ತಿ ಉಡುಪಿ ಜಿಲ್ಲೆಗಿದೆ.
ಎಪ್ಪತ್ತರ ದಶಕದಲ್ಲಿ ಮನೋರಮಾ ಮಧ್ವರಾಜ್
ಕೃಷ್ಣನಗರಿಯಲ್ಲಿ ಮಹಿಳೆಯರ ಸಂಖ್ಯೆ ಮತ್ತು ಮಹಿಳಾ ಮತದಾರರ ಸಂಖ್ಯೆಯೂ ಪುರುಷರಿಗಿಂತ ಹೆಚ್ಚು. ಆದ್ರೆ ಮಹಿಳಾ ಪ್ರಾತಿನಿಧ್ಯದ ವಿಚಾರಕ್ಕೆ ಬಂದ್ರೆ ಇಲ್ಲೂ ಮಹಿಳೆಯರು ವಿಧಾನಸಭೆಗೆ ಸ್ಪರ್ಧಿಸಿದ್ದು ಕಡಿಮೆ.
ಎಪ್ಪತ್ತರ ದಶಕದಲ್ಲಿ ಮನೋರಮಾ ಮಧ್ವರಾಜ್ ಎಂಬ ಮೀನುಗಾರ ಸಮುದಾಯದ ಮಹಿಳೆ ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದೇ ಕೊನೆ. ಮುಂದೆ ಇಲ್ಲಿ ಮಹಿಳೆಯರು ಪುರುಷರ ನೆರಳಲ್ಲೇ ರಾಜಕೀಯ ಮಾಡಿದ್ರೇ ಹೊರತು, ವಿಧಾನಸಭೆಗೆ ಸ್ಪರ್ಧಿಸುವ ಅವಕಾಶವೇ ದೊರೆತಿಲ್ಲ.
ಟಿಕೆಟ್ ನೀಡಿದ ಉದಾಹರಣೆ ಇಲ್ಲ
ಉಡುಪಿ ಜಿಲ್ಲೆಯಲ್ಲಿರುವ ಮತದಾರರ ಸಂಖ್ಯೆ 9,78,503. ಈ ಪೈಕಿ ಮಹಿಳಾ ಮತದಾರರು 5,07,773 ರಷ್ಟಿದ್ರೆ ,ಪುರುಷ ಮತದಾರರ ಸಂಖ್ಯೆ 4,70,730. ಗಮನಾರ್ಹ ಸಂಗತಿ ಅಂದ್ರೆ ಉಡುಪಿ, ಚಿಕ್ಕಗಳೂರು ಲೋಕಸಭಾ ಸದಸ್ಯೆಯಾಗಿರುವವರು ಶೋಭಾ ಕರಂದ್ಲಾಜೆ. ಜಿಲ್ಲಾಧಿಕಾರಿಯಾಗಿ ಪ್ರಿಯಾಂಕಾ ಮೇರಿ ಆಡಳಿದ ಚುಕ್ಕಾಣಿ ಹಿಡಿದಿದ್ದಾರೆ.
ಇನ್ನು ಸ್ಥಳೀಯ ಸಂಸ್ಥೆಗಳಲ್ಲೂ ಮಹಿಳಾ ಪ್ರತಿನಿಧಿಗಳಿದ್ದಾರೆ. ಆದ್ರೆ ಜನಸಂಖ್ಯೆಯ ಆಧಾರದಲ್ಲಿ ನೋಡೋದಾದ್ರೆ ರಾಜಕೀಯವಾಗಿ ಇಲ್ಲೂ ಲಿಂಗ ಅಸಮಾನತೆ ಢಾಳಾಗಿ ಕಾಣಿಸುತ್ತದೆ.
ಕಾಂಗ್ರೆಸ್ ಹಿಂದೊಮ್ಮೆ ಸರಳಾ ಕಾಂಚನ್ ಎಂಬುವರಿಗೆ ಟಿಕೆಟ್ ನೀಡುವ ಧೈರ್ಯ ಮಾಡಿತ್ತು. ಆದ್ರೆ ಆಕೆ ಆ ಚುನಾವಣೆಯಲ್ಲಿ ಗೆದ್ದಿರಲಿಲ್ಲ. ಉಳಿದಂತೆ ಬಿಜೆಪಿ ಅಥವಾ ಜೆಡಿಎಸ್ ನಿಂದ ವಿಧಾನಸಭೆಗೆ ಮಹಿಳೆಯರಿಗೆ ಟಿಕೆಟ್ ನೀಡಿದ ಉದಾಹರಣೆ ಇಲ್ಲ.
ಏಕೈಕ ಮಹಿಳಾ ಅಭ್ಯರ್ಥಿ ಅನುಪಮಾ
ನೀವು ನಂಬಲೇಬೇಕು. ಖಾಕಿ ಧರಿಸಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಅನುಪಮಾ ಶೆಣೈ ಜಿಲ್ಲೆಯ ಏಕೈಕ ಮಹಿಳಾ ಅಭ್ಯರ್ಥಿ. ಕಾಪು ಕ್ಷೇತ್ರದಿಂದ ಅನುಪಮಾ ಸ್ಪರ್ಧೆ ಮಾಡುತ್ತಿದ್ದಾರೆ. ಅನುಪಮಾ ಶೆಣೈ, ಬಳ್ಳಾರಿಯ ಕೂಡ್ಲಿಗಿಯಲ್ಲಿ ಪರಮೇಶ್ವರ್ ನಾಯ್ಕ್ ವಿರುದ್ಧ ಸಿಡಿದೆದ್ದ ಮಹಿಳೆ. ಡಿವೈಎಸ್ಪಿ ಆಗಿದ್ದವರು ಈಗ ಮಾಜಿಯಾಗಿದ್ದಾರೆ. ಹಾಲಿ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
ಜನ್ಮಸ್ಥಳ ಉಡುಪಿ ಜಿಲ್ಲೆಯಾದರೂ ಕಾರ್ಯಕ್ಷೇತ್ರ ಬಳ್ಳಾರಿಯಲ್ಲೇ ಅನುಪಮಾ ಫೇಮಸ್ಸು. ಹಾಗಾಗಿ ಉತ್ತರ ಕರ್ನಾಟಕದ ಯಾವುದೇ ಕ್ಷೇತ್ರದಿಂದ ಅವರು ಸ್ಪರ್ಧಿಸಬಹುದು ಎಂಬ ಊಹಾಪೋಹ ಇತ್ತು. ಆದರೆ ಸದ್ಯ ಅವರು ತನ್ನ ತವರೂರು ಕಾಪು ಕ್ಷೇತ್ರದಿಂದಲೇ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.
ಬಿಜೆಪಿ ವಿರುದ್ಧ ಸಮರ
ಆರಂಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಾಗ, ಅನುಪಮಾ ಬಿಜೆಪಿ ಬಗ್ಗೆ ಒಲವು ಹೊಂದಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ತಾನು ಬಿಜೆಪಿ ಅಲ್ಲ ಅಂತ ತೋರಿಸಿಕೊಳ್ಳೋಕೆ, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಸಮರ ಸಾರಿದ್ದರು.
ಇದೇ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದ್ದರು. ಇದೀಗ ಎರಡೂ ರಾಷ್ಟ್ರೀಯ ಪಕ್ಷಗಳಿಗೆ, ಸೆರಗಿನಲ್ಲಿಟ್ಟ ಕೆಂಡದ ಥರ ಕಾಟ ಕೊಡ್ತೇನೆ ನೋಡ್ತಾ ಇರಿ ಅಂತಾರೆ ಅನುಪಮಾ. ರಾಜ್ಯದಲ್ಲಿ ಅನುಪಮಾ ಹವಾ ಈಗ ಕಡಿಮೆಯಾಗಿದೆ. ರಾಜಕಾರಣದ ಪಟ್ಟುಗಳು ಇವರಿಗಿನ್ನೂ ಹೊಸತು, ಸ್ವಕ್ಷೇತ್ರದಲ್ಲಾದರೂ ಒಂದಿಷ್ಟು ಮತ ಗಳಿಸಿ ತೋರಿಸಿದರೆ, ಅಂದು ಸರ್ಕಾರದ ವಿರುದ್ದ ಬಂಡೆದ್ದದ್ದು ಸಾರ್ಥಕ ಎನ್ನಬಹುದು.