ಅನುಪಮಾ ಶೆಣೈ ಅವರಿಂದ ಹೊಸ ಪ್ರಾದೇಶಿಕ ಪಕ್ಷ
ಉಡುಪಿ, ಅಕ್ಟೋಬರ್ 03: ಭ್ರಷ್ಟ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದು ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಅನುಪಮಾ ಶೆಣೈ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ಪಿ ಹುದ್ದೆ ತೊರೆದ ಬಳಿಕವೇ ರಾಜಕೀಯ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು.
ಸಿದ್ದರಾಮಯ್ಯ ಅವರ ವಾಚಿನ ಕೇಸ್ ಸಿಬಿಐಗೆ ನೀಡಿ, ಮೋದಿಗೆ ಪತ್ರ
ಆದರೆ, ಈಗ ತಮ್ಮ ರಾಜಕೀಯ ರಂಗ ಪ್ರವೇಶದ ಬಗ್ಗೆ ಅನುಪಮಾ ಅವರು ಮಾತನಾಡಿದ್ದಾರೆ. ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ ಬಗ್ಗೆ ಸುಳಿವು ನೀಡಿದ್ದಾರೆ.
ಉಡುಪಿಯ ಉಚ್ಚಿಲದ ತಮ್ಮ ನಿವಾಸದಲ್ಲಿ ಸಮಾನ ಮನಸ್ಕರ ಜತೆ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಸಾರ್ವಜನಿಕರ ಸಲಹೆ ಪಡೆದುಕೊಂಡು, ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು.
ಈ ಕುರಿತಂತೆ ಅಕ್ಟೋಬರ್ 15ರಂದು ಮತ್ತೊಂದು ಸಭೆ ನಡೆಸಲಾಗುವುದು. ನವೆಂಬರ್ ಮೊದಲ ವಾರಕ್ಕೆ ಅಂತಿಮ ರೂಪು ರೇಷೆ ಸಿದ್ಧಪಡಿಸಿ, ಅಧಿಕೃತವಾಗಿ ಘೋಷಣೆ ಮಾಡಲಾಗುವುದು. ಬಳ್ಳಾರಿಯಿಂದಲೇ ಪಕ್ಷದ ಅಭಿಯಾನ ಆರಂಭಗೊಳ್ಳಲಿದೆ ಎಂದು ಎಂದು ಶೆಣೈ ಹೇಳಿದರು.
ನೀವು ಸಲಹೆ ನೀಡಬಹುದು: ಸಾಮಾಜಿಕ ಜಾಲ ತಾಣಗಳ ಮೂಲಕ ಅನುಪಮಾ ಶೆಣೈ ಅವರಿಗೆ ಸಾರ್ವಜನಿಕರು ಸಲಹೆ, ಸೂಚನೆಗಳನ್ನು ನೀಡಬಹುದು. ಅನುಪಮಾ ಶೆಣೈ ಅವರು ಇದಕ್ಕಾಗಿ ಹೊಸ ಫೇಸ್ ಬುಕ್ ಖಾತೆ ಆರಂಭಿಸಿದ್ದಾರೆ. ಜತೆಗೆ ರಾಜ್ಯದೆಲ್ಲೆಡೆ ಸಲಹೆಗಳನ್ನು ಸ್ವೀಕರಿಸಲು ಪ್ರತ್ಯೇಕ ಫೋನ್ ನಂಬರ್ ನೀಡಲಾಗಿದೆ. ಗ್ರಾಮ ಸ್ವರಾಜ್, ಮಹಿಳಾ ಸಬಲೀಕರಣ, ಪರಿಸರ ಸ್ನೇಹಿ ವಾತಾವರಣ, ಭ್ರಷ್ಟಾಚಾರ ಮುಕ್ತ ಕರ್ನಾಟಕ ಇದು ಅನುಪಮಾ ಅವರ ಪಕ್ಷದ ಮುಖ್ಯ ಅಂಶಗಳಾಗಿವೆ.