ಸಾಗರ್ ಬೆನ್ನಲ್ಲೇ ಕರಾವಳಿಗೆ ಅಪ್ಪಳಿಸಲಿದೆ ಮತ್ತೊಂದು ಚಂಡಮಾರುತ
ಉಡುಪಿ, ಮೇ 23: ಕರ್ನಾಟಕ ಕರಾವಳಿ ಮೇಲೆ ಒಂದರ ಹಿಂದೆ ಒಂದರಂತೆ ಚಂಡ ಮಾರುತಗಳು ಅಪ್ಪಳಿಸುತ್ತಿದ್ದು, ಸಾಗರ್ ಚಂಡಮಾರುತದ ಪರಿಣಾಮಗಳು ತಣ್ಣಗಾಗುವ ಮೊದಲೇ ಇನ್ನೊಂದು ಚಂಡ ಮಾರುತ ಕರಾವಳಿಯನ್ನು ಭಾದಿಸುತ್ತಿದೆ.
ಕರಾವಳಿಯ ಅರಬ್ಬೀ ಸಮುದ್ರದ ನೈಋುತ್ಯ ಭಾಗದಲ್ಲಿ ಮೇ 22 ರ ಸಂಜೆ 2ನೇ ಮೇಕುನ ಚಂಡ ಮಾರುತ ಸೃಷ್ಠಿಯಾಗಿದೆ. ಈ ಮೇಕುನ ಚಂಡ ಮಾರುತ ಕರಾವಳಿಯಲ್ಲಿ ಭಾರಿ ಗಾಳಿಯ ಜೊತೆಗೆ ಮಳೆಯನ್ನು ಕೂಡ ತರಲಿದೆ ಎಂದು ಹವಮಾನ ಇಲಾಖೆ ಈಗಾಗಲೇ ಎಚ್ಚರಿಕೆಯನ್ನು ನೀಡಿದೆ.
ಹೆಚ್ಚುತ್ತಿದೆ ಮುಂಗಾರು ಪೂರ್ವ ಮಳೆ ಅಬ್ಬರ: ಮೇ 25ರವರೆಗೂ ಸಾಧ್ಯತೆ
ಈ ಮೇಕುನ ಚಂಡ ಮಾರುತ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳ ಮೇಲೆ ಪ್ರಭಾವ ಬೀರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮೇಕುನ ಚಂಡ ಮಾರುತ ಮೇ 23 ರಿಂದ ಮೇ 25 ರ ವರೆಗೆ ಕರಾವಳಿ , ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗಾಳಿಯ ಜೊತೆ ಮಳೆಯನ್ನು ಹೊತ್ತು ತರಲಿದೆ ಎಂಬ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ. ಈ ಚಂಡ ಮಾರುತ ಮೇ 26ರ ಬೆಳಿಗ್ಗೆ ಓಮನ್ ಮತ್ತು ಯೆಮನ್ ಕರಾವಳಿಗೆ ಅಪ್ಪಳಿಸಿದೆ.
ಸೋಮವಾರದಿಂದಲೇ ರಾಜ್ಯದೆಲ್ಲಡೆ ಮುಂಗಾರು ಪೂರ್ವ ಮಳೆ ಚುರುಕಾಗಿದೆ. ಕರಾವಳಿ ಜಿಲ್ಲೆ ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಮೇ 25 ರವರೆಗೂ ಭಾರಿ ಮಳೆ ನಿರೀಕ್ಷಿಸಲಾಗಿದೆ.
ಮೀನುಗಾರರಿಗೆ ಎಚ್ಚರಿಕೆ
ಮೇಕುನ ಚಂಡಮಾರುತ ಮೇ 23 ಮತ್ತು 24 ರಂದು ತೀವ್ರತೆ ಪಡೆಯಲಿದೆ. ಗಂಟೆಗೆ 150-170 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಸಹಿತ ಓಮನ್ ಕರಾವಳಿಗೆ ಅಪ್ಪಳಿಸಲಿದೆ. ಈ ಹಿನ್ನಲೆಯಲ್ಲಿ ಮೇ 23 ರಿಂದ 26 ರವರೆಗೆ ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕೆಲ ದಿನಗಳ ಹಿಂದೆ ಅಪ್ಪಳಿಸಿದ ಸಾಗರ್ ಚಂಡ ಮಾರುತ ಮಾಡಿರುವ ಸಮಸ್ಯೆಗಳ ನಡುವೆಯೇ ಇನ್ನೊಂದು ಚಂಡ ಮಾರುತ ಕರಾವಳಿಯ ಜಿಲ್ಲೆಗಳನ್ನು ಬಾಧಿಸುತ್ತಿದೆ. ಸಾಗರ್ ಚಂಡ ಮಾರುತದ ಹಾವಳಿಯಿಂದಾಗಿ ಜಿಲ್ಲೆಯಲ್ಲಿ ದೈವಸ್ಥಾನಗಳ ಧ್ವಜ ಸ್ತಂಭ ಸೇರಿದಂತೆ ಹಲವಾರು ಕಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಈ ನಡುವೆ ಈಗ ಎದ್ದಿರುವ ಮೇಕುನ ಚಂಡ ಮಾರುತ ಯಾವ ರೀತಿ ಸಮಸ್ಯೆ ತಂದೊಡ್ಡಲಿದೆ ಎಂದು ಕಾದು ನೋಡಬೇಕಿದೆ.