ವಿಸ್ಮಯ: ಪ್ರಳಯರುದ್ರನ ಗಣ 'ವೀರಭದ್ರಸ್ವಾಮಿ' ಪಾತ್ರಿಯ ದೇಹ ಆವರಿಸಿದಾಗ!
Recommended Video
ಹಿಂದೂ ಪೂಜಾಪದ್ದತಿ, ನಾಗಾರಾಧನೆ, ದೈವಾರಾಧನೆ ಮುಂತಾದ ಆಚರಣೆಗಳನ್ನು ಮೌಢ್ಯ, ಜನರ ಕಣ್ಣಿಗೆ ಮಂಕುಬೂದಿ ಎರಚುವುದು ಎಂದು ಪ್ರತಿಪಾದಿಸುವ ಕೆಲವೊಂದು ವರ್ಗದವರು, ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ದ ದೇವಾಲಯವೊಂದರಲ್ಲಿ ನಡೆಯುವ ವಾರ್ಷಿಕ ಜಾತ್ರೆ ಮತ್ತು ದರ್ಶನ ಸೇವೆಯನ್ನೊಮ್ಮೆ ನೋಡಿ ತಮ್ಮ ನಿರ್ಧಾರವನ್ನು ಪರಾಮರ್ಶಿವುದು ಒಳ್ಳೆಯದು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ವರ್ಷಕ್ಕೊಮ್ಮೆ ನಡೆಯುವ ವಿಶಿಷ್ಟವಾದ ಈ ಉತ್ಸವದಲ್ಲಿ ಶಿವನ ಗಣ ಎಂದೇ ನಂಬಲಾಗುವ ವೀರಭದ್ರಸ್ವಾಮಿ, ದರ್ಶನ ಪಾತ್ರಿಯ ಮೂಲಕ ದೇಹವನ್ನು ಆವರಿಸಿ ದೈವ ನರ್ತನ ನಡೆಸುವುದು, ಅದಾದ ನಂತರ ನುಡಿಗಟ್ಟು (ದೈವವಾಣಿ) ಅನ್ನು ನೀಡುವುದು, ಭಕ್ತರನ್ನು ಅಕ್ಷರಸಃ ರೋಮಾಂಚನಗೊಳಿಸುತ್ತದೆ. ಇದು, ಅನಾದಿ ಕಾಲದಿಂದಲೂ ಇಲ್ಲಿ ನಡೆದುಕೊಂಡು ಬರುವ ಪದ್ದತಿ.
ಅನಂತ್ ಕುಮಾರ್ ಹೆಗಡೆ : ಏರುವ ಏಣಿಯನ್ನು ತಾವೇ ತಳ್ಳಿದರೇ?
ದಿನ, ನಕ್ಷತ್ರ ಯಾವುದೇ ಇರಲಿ, ಫೆಬ್ರವರಿ ಎಂಟರಂದು ನಡೆಯುವ ಮಹತೋಭಾರ ವೀರಭದ್ರಸ್ವಾಮಿ ದೇವಾಲಯದಲ್ಲಿ ನಡೆಯುವ ಜಾತ್ರೆ, ದರ್ಶನ, ಕೆಂಡಸೇವೆ, ಕೋಲ ಮುಂತಾದವುಗಳು ಮುಂಜಾನೆ ನಾಲ್ಕು ಗಂಟೆಗೆ ಆರಂಭವಾಗಿ, ರಾತ್ರಿಯಿಡೀ ನಡೆಯುವುದು ಇಲ್ಲಿನ ವಿಶೇಷ. ಪ್ರತೀಬಾರಿಯೂ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಗಣನೀಯವಾಗಿ ವೃದ್ದಿಸುವುದು ಗಮನಿಸಬೇಕಾದ ಅಂಶ ಎನ್ನುವುದು ದೇವಾಲಯದ ಆಡಳಿತ ಮಂಡಳಿಯವರ ಅಭಿಪ್ರಾಯ.
ಗೋಕರ್ಣ ದೇವಾಲಯ: ಪಟ್ಟಭದ್ರ ಸ್ವಹಿತಾಸಕ್ತಿಗಳಿಗೆ ಮತ್ತೆಮತ್ತೆ ಮುಖಭಂಗ
ಆಗುಂಬೆ ಘಾಟಿ ಇಳಿದ ಕೂಡಲೇ ಸಿಗುವ ಊರು ಸೋಮೇಶ್ವರ, ಅಲ್ಲಿಂದ ಸ್ವಲ್ಪ ಒಳಕ್ಕೆ ನಡೆದರೆ ಸಿಗುವ ಇನ್ನೊಂದು ಪುಟ್ಟ ಊರು ಮಡಾಮಕ್ಕಿ. ನಕ್ಸಲರ ಪ್ರಭಾವ ಹೆಚ್ಚಾಗಿರುವಂತಹ ಪ್ರದೇಶವಿದು. ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಈ ದೇವಾಲಯದಲ್ಲಿ ವೀರಭದ್ರಸ್ವಾಮಿ, ಗಣಪತಿ, ಬನಶಂಕರಿ ಸಹಿತ ಪರಿವಾರ ದೈವಗಳ ಗುಡಿಯಿದೆ.
ಸೀತಾನದಿ ತಪ್ಪಲಲ್ಲಿರುವ ದೇವಾಲಯ
ಅಷ್ಟೇನೂ ಅಭಿವೃದ್ದಿ ಕಾಣದ ಸೀತಾನದಿ ತಪ್ಪಲಲ್ಲಿರುವ ಈ ದೇವಾಲಯದ ಪ್ರಮುಖ ಆರಾಧ್ಯ ದೇವರು/ದೈವ ವೀರಭದ್ರಸ್ವಾಮಿ. ಮಾಡು (ಚಾವಣಿ) ಇಲ್ಲದ ದೇವರು ಎಂದೇ ಖ್ಯಾತಿ ಪಡೆದಿರುವ ಈ ದೇವಸ್ಥಾನದಲ್ಲಿ ಮಣ್ಣಿನ ದೊಡ್ಡ ಕಟ್ಟೆಯಲ್ಲೇ ವೀರಭದ್ರ ನೆಲೆಸಿದ್ದಾನೆ ಎನ್ನುವುದು ಇತಿಹಾಸ. ರಕ್ಕಸರ ಕಾಟ ಹೆಚ್ಚಾದಾಗ, ವೀರಭದ್ರ ಕೋಪೋದ್ರಿಕ್ತನಾಗಿ ದುಷ್ಟ ಶಕ್ತಿಗಳನ್ನು ಸಂಹರಿಸಿ, ಇಲ್ಲಿ ನೆಲೆಸಿದ್ದಾನೆ ಎನ್ನುತ್ತದೆ ಪುರಾಣ. ಏನಿದು ಇತಿಹಾಸ, ಮುಂದೆ ಓದಿ..
ವೃಷಭಯೋಗೇಶ್ವರ ಎನ್ನುವ ಮುನಿಯಿಂದ ಶಿವನ ಕುರಿತು ತಪಸ್ಸು
ಶತಮಾನಗಳ ಹಿಂದೆ, ರಕ್ಕಸರು ಶಿವನ ಪರಮಭಕ್ತರಾದ ಖುಷಿಮುನಿಗಳಿಗೆ ವಿಪರೀತ ಕೀಟಲೆಯನ್ನು ನೀಡುತ್ತಿರುತ್ತಾರೆ. ಆಗ, ವೃಷಭಯೋಗೇಶ್ವರ ಎನ್ನುವ ಮುನಿಯು ಶಿವನ ಕುರಿತು ತಪಸ್ಸನ್ನು ಮಾಡುತ್ತಾನೆ. ಆಗ ವೀರಭದ್ರ ಪ್ರತ್ಯಕ್ಷನಾಗುತ್ತಾನೆ, ರಾಕ್ಷಸರ ಕಾಟವನ್ನು ಕಂಡು ಕೋಪೋದ್ರಿಕ್ತನಾಗಿ ತನ್ನ ತಲೆಯನ್ನು ದೊಡ್ಡಶಿಲೆಯೊಂದಕ್ಕೆ ಬಡಿಯುತ್ತಾನೆ. ಶಿಲೆ ಚೂರುಚೂರಾಗಿ, ಅದರಲ್ಲಿ ಒಂದು ಶಿಲೆ ಅರ್ಧಚಂದ್ರಾಕೃತಿಯಲ್ಲಿ ಪರಿವರ್ತನೆಯಾಗುತ್ತದೆ.
ಮಡಾಮಕ್ಕಿ ಪರಿಸರದಲ್ಲಿ ಮಣ್ಣಿನ ಕಟ್ಟೆಯನ್ನು ಕಟ್ಟಿ ಪ್ರತಿಷ್ಠೆ
ಈ ಶಿಲೆಯನ್ನು ವೃಷಭಯೋಗೇಶ್ವರ ಮುನಿ, ಮಡಾಮಕ್ಕಿ ಪರಿಸರದಲ್ಲಿ ಮಣ್ಣಿನ ಕಟ್ಟೆಯನ್ನು ಕಟ್ಟಿ ಪ್ರತಿಷ್ಠೆ ಮಾಡುತ್ತಾನೆ. ವೀರಭದ್ರ ಮೊಣಕಾಲನ್ನು ಊರಿ, ನೆಲೆಯಾದ ಸ್ಥಳವಿದು ಎನ್ನುವುದು ಪ್ರತೀತಿ. ವೈಕುಂಠಸ್ಥರಾಗಿರುವ ಶಿರೂರು ಶ್ರೀಗಳು, ಇಂದಿಗೆ ಸುಮಾರು ಹದಿನೆಂಟು ವರ್ಷಗಳ ಹಿಂದೆ, ಇದರ ಜೀರ್ಣೋದ್ದಾರ ಕಾರ್ಯವನ್ನು ನಡೆಸಿದ್ದರು. ದೇವಾಲಯದ ಆವರಣದಲ್ಲಿ ಪರಿವಾರ ದೈವಗಳಾದ ಕೋಟೆರಾಯ, ಕಲ್ಲುಕುಟಿಗ, ಪಂಜುರ್ಲಿ, ಯಕ್ಷಿ, ಬೊಬ್ಬರ್ಯ, ಜುಮಾದಿ, ಬಂಟ ಶಿವರಾಯ, ಹುಲಿ ದೇವರು ಮುಂತಾದ ದೈವಗಳ ಗುಡಿಯೂ ಇದೆ.
ಮಹಾಪೂಜೆಯ ವೇಳೆ, ದರ್ಶನ ಪಾತ್ರಿ ದೇವರ ಮುಂದೆ ಕೂತಿರುತ್ತಾರೆ
ರಾತ್ರಿ 10.30ರ ಸುಮಾರಿಗೆ ಆರಂಭವಾಗುವ ವೀರಭದ್ರನ ದರ್ಶನಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿರುತ್ತಾರೆ. ಮಹಾಪೂಜೆಯ ವೇಳೆ, ದರ್ಶನ ಪಾತ್ರಿ ದೇವರ ಮುಂದೆ ಕೂತಿರುತ್ತಾರೆ. ಉದ್ದೇಶಪೂರ್ವಕವಾಗಿಯೇ, ತೆಂಗಿನಕಾಯಿಯನ್ನು ದರ್ಶನ ಪಾತ್ರಿಗೆ ಕಾಣಸಿಗದಂತೆ ಬಚ್ಚಿಟ್ಟಿರುತ್ತಾರೆ. ಚೆಂಡೆ, ವಾದ್ಯ, ಮೈನವಿರೇಳಿಸುವ ನಾದಸ್ವರದ ಮಧ್ಯೆ, ಅದೇಗೋ, ತೆಂಗಿನಕಾಯಿಯನ್ನು ದರ್ಶನ ಪಾತ್ರಿ ಹುಡುಕಿ ಒಂದೇ ಏಟಿನಲ್ಲಿ ತನ್ನ ಹಣೆಗೆ ಹೊಡೆದುಕೊಂಡು ತೆಂಗಿನಕಾಯಿಯನ್ನು ಚೂರುಚೂರು ಮಾಡುವ ಮೂಲಕ, ವೀರಭದ್ರನ ಅವತಾರ ಕಣ್ಣೆದರು ಬರಲು ಆರಂಭಿಸುತ್ತದೆ.
ನಾಗಾರಾಧನೆಗೆ ಮಾತ್ರ ಹೆಚ್ಚಾಗಿ ಪಿಂಗಾರವನ್ನು ಬಳಸಿಕೊಳ್ಳಲಾಗುತ್ತದೆ
ಪರಶುರಾಮ ಸೃಷ್ಟಿಯಲ್ಲಿ (ಕಾಸರಗೋಡು, ದ.ಕ, ಉಡುಪಿ ಜಿಲ್ಲೆ) ನಾಗಾರಾಧನೆಗೆ ಮಾತ್ರ ಹೆಚ್ಚಾಗಿ ಪಿಂಗಾರವನ್ನು ಬಳಸಿಕೊಳ್ಳಲಾಗುತ್ತದೆ. ಆದರೆ, ಇಲ್ಲಿ ದರ್ಶನದ ಸಮಯದಲ್ಲಿ ಪಾತ್ರಿಗೆ ಪಿಂಗಾರವನ್ನೇ ನೀಡಲಾಗುತ್ತದೆ. ಪಿಂಗಾರವನ್ನು ಮುಖಕ್ಕೆ ಉಜ್ಜಿಕೊಳ್ಳುತ್ತಾ, ದೇವಾಲಯಕ್ಕೆ ಮೂರು ಪ್ರದಕ್ಷಣೆ ಬರುವ ಪಾತ್ರಧಾರಿ, ದೇವಾಲಯದ ಆವರಣವನ್ನು ಬಿಟ್ಟು ಮೊದಲ ಮೂರು ಸುತ್ತು ಹೊರಗೆ ಹೋಗುವುದಿಲ್ಲ. ಹಲವು ಕೆಜಿಗಳಷ್ಟು ಪಿಂಗಾರವನ್ನು ದರ್ಶನ ಪಾತ್ರಿ ಮುಖಕ್ಕೆ ಉಜ್ಜಿಕೊಳ್ಳುತ್ತಾ ಸಾಗುತ್ತಾರೆ.
ಮುಳ್ಳಿನಿಂದ ತಯಾರಿಸಲಾದ ಪಾದರಕ್ಷೆಯನ್ನು ಧರಿಸುವ ದರ್ಶನ ಪಾತ್ರಿ
ದರ್ಶನದ ಕೊನೆಯ ಸುತ್ತಿನಲ್ಲಿ ಮುಳ್ಳಿನಿಂದ ತಯಾರಿಸಲಾದ ಪಾದರಕ್ಷೆಯನ್ನು ಧರಿಸುವ ದರ್ಶನ ಪಾತ್ರಿ, ಅದರಲ್ಲೇ ದೇವಾಲಯಕ್ಕೆ ಒಂದು ಸುತ್ತು ಬರುವುದು ಮೈನವಿರೇಳಿಸುವಂತಹ ಘಟನೆ. ಮೂರು ಸುತ್ತಿನಲ್ಲೂ, ದೀವಟಿಗೆಯನ್ನು (ಹಿತ್ತಾಳೆಯ ಬೆಂಕಿಯ ಕೋಲು) ಮೈಮೇಲೆ ಎಳೆದುಕೊಳ್ಳುತ್ತಲೇ ಸಾಗುತ್ತಾ, ಜೊತೆಗೆ, ದೇವರ ಮುಂದೆ ಹಾಕಿರುವ ಹೂವಿನ ಮಾಲೆಗಳನ್ನು ಎಳೆದುಕೊಂಡು ಹೋಗುತ್ತಿರುತ್ತದೆ. ದೇವರು ಮೈಮೇಲೆ ಆವರಿಸಿದಾಗ, ಪಾತ್ರಿಯ ಮುಖದಲ್ಲಾಗುವ ಬದಲಾವಣೆಗಳನ್ನು ಅತ್ಯಂತ ಸ್ಪಷ್ಟವಾಗಿ ಗಮನಿಸಬಹುದಾಗಿದೆ. ದೇವಾಲಯಕ್ಕೆ ಮೂರು ಸುತ್ತು ಹಾಕಿದ ನಂತರ, ದೇವಾಲಯದ ಪ್ರಧಾನ ಅರ್ಚಕರಿಗೆ ನುಡಿಗಟ್ಟನ್ನು ನೀಡಿ, ದೇವಾಲಯದ ಹೊರಭಾಗದಲ್ಲಿ ಹಾಕಲಾಗಿರುವ ಕೆಂಡದ ಮೇಲೆ ಓಡಾಡುವ ಮೂಲಕ, ಈ ಧಾರ್ಮಿಕ ಪ್ರಕ್ರಿಯೆ ಅಂತ್ಯವಾಗುತ್ತದೆ.
ಮಹತೋಭಾರ ವೀರಭದ್ರಸ್ವಾಮಿ ದೇವಾಲಯ
ತುಳುನಾಡಿನ ಹಲವು ದೇವಾಲಯಗಳಲ್ಲಿ ದೈವ ದರ್ಶನ ನಡೆಯುವುದಾದರೂ, ಮಡಾಮಕ್ಕಿಯ ವೀರಭದ್ರಸ್ವಾಮಿ ದೇವಾಲಯದಲ್ಲಿ ನಡೆಯುವ ಈ ಪದ್ದತಿ ಭಕ್ತರ ಮನದಲ್ಲಿ ನೆಲೆಯೂರುತ್ತದೆ. ದರ್ಶನ ನಡೆಯುವ ಸುಮಾರು 30-40ನಿಮಿಷ ದೇವರು ಮೈಮೇಲೆ ಆವರಿಸಿರುವುದನ್ನು ದರ್ಶನ ಪಾತ್ರಿಯ ಹಾವಭಾವದಲ್ಲಿ ಕಾಣಬಹುದಾಗಿದೆ. ಪ್ರತೀ ವರ್ಷ, ಫೆಬ್ರವರಿ ಎಂಟರಂದು ನಡೆಯುವ ಈ ಉತ್ಸವದಲ್ಲಿ ಸಾಧ್ಯವಾದರೆ ನೀವೂ ಒಮ್ಮೆ ಭಾಗವಹಿಸಿ. ವಿಳಾಸ: ಮಹತೋಭಾರ ವೀರಭದ್ರಸ್ವಾಮಿ ದೇವಾಲಯ, ಅಂಚೆ ಮಡಾಮಕ್ಕಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ. ಉಡುಪಿಯಿಂದ ಹೋಗುವ ಮಾರ್ಗ - ಹಿರಿಯಡಕ, ಪೆರ್ಡೂರು, ಹೆಬ್ರಿ, ಸೋಮೇಶ್ವರ. ಉಡುಪಿಯಿಂದ ಸುಮಾರು ಅರವತ್ತು ಕಿಲೋಮೀಟರ್ ದೂರದಲ್ಲಿ ಈ ದೇವಾಲಯವಿದೆ.