ಮದುವೆಯಾಗಲು ಹೊರಟಿದ್ದ ಇಂಜಿನಿಯರ್ ಉಡುಪಿ ಅಷ್ಟಮಠದ ಉತ್ತರಾಧಿಕಾರಿ
ಉಡುಪಿ, ಏ 22: 'ತಾನೊಂದು ಬಗೆದರೆ ಮಾನವ, ಬೇರೆಯೊಂದು ಬಗೆಯುವುದು ದೈವ' ಎನ್ನುವ ಗಾದೆಮಾತಿನಂತೆ, ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಗಿದ್ದ ಇಂಜಿನಿಯರ್ ಪದವೀಧರರೊಬ್ಬರು, ಉಡುಪಿ ಅಷ್ಟಮಠದ ಉತ್ತರಾಧಿಕಾರಿಯಾಗಿ ಸನ್ಯಾಸ ಸ್ವೀಕರಿಸಿದ್ದಾರೆ.
ಚಿತ್ರ: ಇಂಜಿನಿಯರಿಂಗ್ ಪದವೀಧರ ಉಡುಪಿ ಪುತ್ತಿಗೆ ಮಠದ ಉತ್ತರಾಧಿಕಾರಿ
ಉಡುಪಿ ಹೊರವಲಯದ ಹಿರಿಯಡಕ ಬಳಿಯ ಪುತ್ತಿಗೆಯಲ್ಲಿ, ಸೋಮವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಯತಿಗಳಾದ ಸುಗುಣೇಂದ್ರತೀರ್ಥರು, ತಮ್ಮ ಉತ್ತರಾಧಿಕಾರಿಯಾಗಿ ಪ್ರಶಾಂತ್ ಆಚಾರ್ಯ ಅವರಿಗೆ ಸನ್ಯಾಸ ಬೋಧನೆಯನ್ನು ಮಾಡಿದ್ದಾರೆ.
ಉಡುಪಿ ಪುತ್ತಿಗೆ ಸುಗುಣೇಂದ್ರ ಶ್ರೀಗಳಿಂದ ಶಿಷ್ಯ ಸ್ವೀಕಾರ
ಉಡುಪಿ ನಗರದ ಕುಂಜಿಬೆಟ್ಟು ನಿವಾಸಿಯಾಗಿದ್ದ ಪ್ರಶಾಂತ್ ಆಚಾರ್ಯ (27) ಇಂಜಿನಿಯರಿಂಗ್ ಪದವೀಧರ ಮತ್ತು ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಗುರುರಾಜ ಆಚಾರ್ಯ ಮತ್ತು ವಿನುತಾ ಆಚಾರ್ಯ ದಂಪತಿಗಳ ಪುತ್ರ.
ಮಗನಿಗೆ ಮದುವೆ ಮಾಡಿಸಲು ಜಾತಕ ಹುಡುಕುತ್ತಿದ್ದ ದಂಪತಿಗಳು, ಪುತ್ತಿಗೆ ಶ್ರೀಗಳ ಆಶಯದ ಮೇಲೆ, ಪುತ್ರನನ್ನು ಮಠಕ್ಕೆ ಒಪ್ಪಿಸಿದ್ದರು. ಶನಿವಾರ (ಏ 20) ಸನ್ಯಾಸ ಸ್ವೀಕಾರದ ಪೂರ್ವಭಾವಿಯಾಗಿ ಆತ್ಮಶ್ರಾದ್ದ, ವಿರಾಜ ಹೋಮ ಸಹಿತ, ಹಲವು ಧಾರ್ಮಿಕ ಪ್ರಕ್ರಿಯೆಗಳು ನಡೆದಿದ್ದವು.
ಈ ಎಲ್ಲಾ ಮೊದಲ ಹಂತದ ಪ್ರಕ್ರಿಯೆ ನಡೆದ ನಂತರವಷ್ಟೇ, ಸನ್ಯಾಸ ಸ್ವೀಕಾರದ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಪುತ್ತಿಗೆ ಮಠ ಹೊರಡಿಸಿತ್ತು. ಸೋಮವಾರ ಬೆಳಗ್ಗೆ 11.40 - 11.45ರ ಶುಭಲಗ್ನದಲ್ಲಿ , ಪುತ್ತಿಗೆ ಮೂಲಮಠದಲ್ಲಿ ಸುಗುಣೇಂದ್ರತೀರ್ಥರು, ಪ್ರಶಾಂತ್ ಆಚಾರ್ಯ ಅವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿದ್ದು, ಪುತ್ತಿಗೆ ಮಠದ ಯತಿಪರಂಪರೆಯ 31ನೇ ಯತಿಗಳಾಗಿದ್ದಾರೆ.
ಮೊದಲಿಂದಲೂ ಆಧ್ಯಾತ್ಮಕದ ಕಡೆಗೆ ಒಲವು ಹೊಂದಿದ್ದ ಪ್ರಶಾಂತ್ ಆಚಾರ್ಯ, ಸಂಸ್ಕೃತದ ಪ್ರಾಥಮಿಕ ಜ್ಞಾನವನ್ನು ಸಂಪಾದಿಸಿದ್ದಾರೆ. ನೂತನ ಶ್ರೀಗಳಿಗೆ "ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು" ಎಂದು ಪುತ್ತಿಗೆ ಹಿರಿಯ ಶ್ರೀಗಳು ನಾಮಕರಣ ಮಾಡಿದ್ದಾರೆ.
ಉಡುಪಿಯ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ವಿಶಿಷ್ಟ ರೀತಿಯಲ್ಲಿ ಗುಡ್ ಫ್ರೈಡೇ ಆಚರಣೆ
ಕೆಲವು ವರ್ಷಗಳ ಹಿಂದೆ, ಅದಮಾರು ಮಠದ ಯತಿಗಳಾದ ವಿಶ್ವಪ್ರಿಯ ತೀರ್ಥ ಸ್ವಾಮೀಜಿಗಳು, ಇಂಜಿನಿಯರಿಂಗ್ ಪದವೀಧರರೊಬ್ಬರನ್ನು ತಮ್ಮ ಶಿಷ್ಯರನ್ನಾಗಿ ನೇಮಿಸಿದ್ದರು. ಈಶಪ್ರಿಯ ತೀರ್ಥರು ಅದಮಾರು ಮಠದ ಕಿರಿಯಶ್ರೀಗಳು.