ದೇಣಿಗೆ ಸಂಗ್ರಹಕ್ಕೆ ಬೀದಿಗಿಳಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ
ಉಡುಪಿ, ಮಾರ್ಚ್ 29: ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಐಸಿಸಿ ಸದಸ್ಯ ಅಮೃತ್ ಶೆಣೈ ಚುನಾವಣಾ ವೆಚ್ಚಕ್ಕಾಗಿ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಅಮೃತ್ ಶೆಣೈ ಉಡುಪಿ ಚಿಕ್ಕಮಗಳುರು ಕ್ಷೆತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿರುವ ಅಮೃತ್ ಶೆಣೈ ಚುನಾವಣಾ ವೆಚ್ಚ ಭರಿಸಲು ಸಾರ್ವಜನಿಕರಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಉಡುಪಿ ನಗರದಲ್ಲಿ ತಮ್ಮ ಬೆಂಬಲಿಗರ ಜೊತೆ ಸೇರಿ ಆಟೋ ಸ್ಟ್ಯಾಂಡ್ ಮತ್ತು ಅಂಗಡಿಗಳಿಗೆ ತೆರಳಿ ಚುನಾವಣಾ ಖರ್ಚಿಗಾಗಿ ಹಣ ಸಂಗ್ರಹಿಸುದ್ದಾರೆ. ಈ ಸಂದರ್ಭ ಅವರ ಅಭಿಮಾನಿಗಳು ಕೂಡ ವಂತಿಗೆ ಡಬ್ಬಿ ಹಿಡಿದು ಅಮೃತ್ ಶೆಣೈ ಅವರಿಗೆ ನೆರವಾದರು.
ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಮೈತ್ರಿ ಗೆಲುವು ಸುಲಭವಲ್ಲ
ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರವನ್ನು ಹೊಂದಾಣಿಕೆ ಮೈತ್ರಿ ನಿಯಮದಡಿ ಜೆಡಿಎಸ್ ಗೆ ಬಿಟ್ಟು ಕೊಟ್ಟ ಹಿನ್ನೆಲೆಯಲ್ಲಿ ಅಮೃತ್ ಶೆಣೈ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಿಡಿದೆದ್ದಿದ್ದರು .
ಜಿಲ್ಲೆಯಲ್ಲಿ ಅಸ್ಥಿತ್ವದಲ್ಲೇ ಇರದ ಪಕ್ಷಕ್ಕೆ, ಕ್ಷೇತ್ರವನ್ನು ಬಿಟ್ಟು ಕೊಟ್ಟಿರುವುದರ ವಿರುದ್ಧ ಕಿಡಿಕಾರಿದ್ದರು. ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಮೃತ್ ಶೆಣೈ ಹೈಕಮಾಂಡ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಉಡುಪಿ-ಚಿಕ್ಕಮಗಳೂರು:ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ ಕಣಕ್ಕೆ
ಕಳೆದ ಹಲವು ವರ್ಷ ಈ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿದ್ದೇನೆ.ಆದರೆ ಪಕ್ಷದ ಹೈಕಮಾಂಡ್ ತಮ್ಮಂಥ ಕಾರ್ಯಕರ್ತರ ಮನವಿಯನ್ನು ಕೇಳಿಸಿಕೊಳ್ಳಲಿಲ್ಲ.
ಹೀಗಾಗಿ ಪ್ರತಿಭಟನಾರ್ಥ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದೇನೆ. ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಒಂದು ಸಂದೇಶ ನೀಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಅಮೃತ್ ಶೆಣೈ ಪ್ರತಿಕ್ರಿಯಿಸಿದ್ದಾರೆ.