ಚುನಾವಣೆ ಬಂದಾಗ ಮಾತ್ರ ಅಮಿತ್ ಶಾಗೆ ಮೀನುಗಾರರ ನೆನಪು: ಮಧ್ವರಾಜ್
ಉಡುಪಿ, ಫೆಬ್ರವರಿ 13: ಕರಾವಳಿಯ ಮತ್ಸ್ಯ ಉದ್ಯಮಿಗಳ ಮೇಲೆ ನಡೆದ ಐಟಿ ದಾಳಿ ಕುರಿತಂತೆ ಪ್ರತಿಕ್ರಿಯಿಸಿರುವ ಮೀನುಗಾರಿಕಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, "ಟಾರ್ಗೆಟ್ ಗೆಲ್ಲಾ ನಾನು ಹೆದರುವುದಿಲ್ಲ. ನನ್ನನ್ನು ದೇವರು ಬಿಟ್ಟು ಬೇರೆ ಯಾರು ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ನಾನು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾ ಬಂದಿದ್ದೇನೆ. ದೇಶದ ಕಾನೂನಿಗೆ ತಲೆ ಬಾಗಿ ಅದರಂತೆ ನಡೆದುಕೊಳ್ಳುವವ ನಾನು," ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನಾನು ಚುನಾವಣೆಯಲ್ಲಿ ಯಾರಿಂದಲೂ ದುಡ್ಡು ಪಡೆಯುವವನಲ್ಲ. ಫಿಶ್ ಮಿಲ್ ಗಳಿಂದಲೂ ಫಂಡ್ ಪಡೆದವಲ್ಲ. ಹೀಗಾಗಿ ಟಾರ್ಗೆಟ್ ಗೆ ಹೆದರುವ ಅವಶ್ಯಕತೆಯಿಲ್ಲ," ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಉಸ್ತುವಾರಿ, ಕ್ರೀಡಾ ಸಚಿವ, ಪ್ರಮೋದ್ ಮಧ್ವರಾಜ್ ಸಂದರ್ಶನ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಉಡುಪಿಯಲ್ಲಿ ಮೀನುಗಾರರ ಸಮಾವೇಶ ನಡೆಸುತ್ತಿರುವ ಕುರಿತು ಮಾತನಾಡಿದ ಅವರು, "ಚುನಾವಣೆ ಹತ್ತಿರ ಬಂದಾಗ ಅಮಿತ್ ಶಾ ಅವರಿಗೆ ಮೀನುಗಾರರು ಹಾಗೂ ಹಿಂದೂಗಳು ನೆನಪಾಗುತ್ತದೆ. ಮೀನುಗಾರರು ಮುರ್ಖರಲ್ಲ. ಕೇಂದ್ರ ಸರ್ಕಾರ ಮೀನುಗಾರರಿಗೆ ಏನೂ ಕೊಟ್ಟಿಲ್ಲ. ಡಿಸೇಲ್ ಸಬ್ಸಿಡಿ ಹಾಗೂ ಸೀಮೆ ಎಣ್ಣೆಯನ್ನು ರಾಜ್ಯ ಸರ್ಕಾರ ನೀಡುತ್ತಿರುವಂತೆ , ಕೇಂದ್ರ ಸರ್ಕಾರ ಕೊಡಲು ಯಾಕೆ ಮನಸ್ಸು ಮಾಡುತ್ತಿಲ್ಲ.?" ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನ ಸಾಫ್ಟ್ ಹಿಂದುತ್ವ ಆರೋಪದ ಬಗ್ಗೆ ಮಾತನಾಡಿದ ಅವರು, "ಹಾರ್ಡ್, ಸಾಫ್ಟ್ ಹಿಂದುತ್ವ ಅಂದ್ರೆ ಏನು? ಜನರನ್ನು ಕೊಲ್ಲೋದು ಹಿಂದುತ್ವವೇ? ಕಾಂಗ್ರೆಸ್ ನವರು ಹಿಂದುಗಳಲ್ವಾ? ನಾವು ದೇವಸ್ಥಾನಕ್ಕೆ ಹೋಗ್ಲಿಕ್ಕಿಲ್ವಾ? ಬಿಜೆಪಿಯವರು ಮಾತ್ರ ದೇವಸ್ಥಾನಕ್ಕೆ ಹೋಗಬೇಕಾ? ಕಾಂಗ್ರೆಸ್ ನವರು ದೇವಸ್ಥಾನಕ್ಕೆ ಹೋಗಲು ನಿರ್ಬಂಧವಿದೆಯಾ?" ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, "ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಲು ಈಗ ಪ್ರಾರಂಭಿಸಿದ್ದಲ್ಲ . ಮೊದಲಿನಿಂದಲೂ ಅವರು ದೇವಾಲಯಗಳಿಗೆ ಹೋಗುತ್ತಿದ್ದಾರೆ," ಎಂದು ವಿವರಣೆ ನೀಡಿದರು.