ಆರ್.ಎಸ್.ಎಸ್ ಮತ್ತು ಸಾಧುಗಳು ಮನುಸ್ಮೃತಿಯನ್ನು ಒಪ್ಪುವುದಿಲ್ಲ:ಪೇಜಾವರ ಶ್ರೀ
ಉಡುಪಿ, ನವೆಂಬರ್ 25 : ಉಡುಪಿಯಲ್ಲಿ ನಡೆಯುತ್ತಿರುವ 'ಧರ್ಮ ಸಂಸದ್' ನಲ್ಲಿ ಅಸ್ಪೃಶ್ಯತೆಯ ವಿರುದ್ದ ನಿರ್ಣಯಗಳನ್ನು ಅಂಗೀಕಾರ ಮಾಡಿದ ನಂತರ ಮಾತನಾಡಿದ ವಿ.ಎಚ್.ಪಿ ಅಂತತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ 'ಅಸ್ಪೃಶ್ಯತೆ ವಿರುದ್ಧ ಬಗ್ಗೆ ಎಲ್ಲಾ ಸಂತರು ಅಭಿಪ್ರಾಯ ಮಂಡಿಸಿದ್ದಾರೆ. ಅಂಬೇಡ್ಕರ್ ಕನಸು ಶೀಘ್ರ ನನಸಾಗಲಿದೆ' ಎಂದರು,
ಉಡುಪಿ : ಪ್ರಗತಿಪರ ನಿರ್ಣಯಗಳನ್ನು ಅಂಗೀಕರಿಸಿದ 'ಧರ್ಮ ಸಂಸದ್'
ಮೊದಲ ದಿನಕ್ಕಿಂತಲೂ ಎರಡನೇಯ ದಿನ ಉತ್ಸಾಹದ ಗೋಷ್ಠಿಗಳು, ಕ್ರಾಂತಿಕಾರಿ ಹೇಳಿಕೆಗಳು, ಕೆಲವು ವಿವಾದಾತ್ಮಕ ಹೇಳಿಕೆಗಳು ಧರ್ಮ ಸಂಸದ್ ವೇದಿಕೆಯಿಂದ ಹೊರಬಿದ್ದವು. ಬ್ರಾಹ್ಮಣಪರ ಎಂಬ ಹಣೆಪಟ್ಟಿಯನ್ನು ಕಳೆದುಕೊಳ್ಳಲು ಕೊಂಟಕಟ್ಟಿ ನಿಂತವರಂತೆ ಮಾತನಾಡಿದ ಪ್ರವೀಣ್ ಭಾಯ್ ತೊಗಾಡಿಯಾ 'ಸಂವಿಧಾನದಲ್ಲಿ ಉಲ್ಲೇಖವಾಗಿರುವುದು ಕಾರ್ಯರೂಪಕ್ಕೆ ಬರಲಿದೆ' ಎಂದು ಆಶಾವಾದ ವ್ಯಕ್ತಪಡಿಸಿದರು.
ಅಸ್ಪೃಶ್ಯತೆ ಹಿಂದೂ ಧರ್ಮದಲ್ಲಿ ಇಲ್ಲವೆಂದು ಪ್ರತಿಪಾದಿಸಿದ ಪ್ರವೀಣ್ ಭಾಯ್ ತೊಗಾಡಿಯಾ 'ಪ್ರಧಾನಿ ಮತ್ತು ರಾಷ್ಟ್ರಪತಿಗಳೇ ಇದಕ್ಕೆ ಉದಾಹರಣೆ ಇಲ್ಲಿ ಯರೂ ಮೇಲಲ್ಲ ಕೀಳಲ್ಲ ಎಂಬುದು ಕಣ್ಣ ಮುಂದಿರುವ ಸತ್ಯ' ಎಂದರು.
ಇದೇ ವೇದಿಕೆಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ದಲಿತವಿರೋಧಿ, ಬ್ರಾಹ್ಮಣಪರ ಗ್ರಂಥ ಎಂದೇ ಪರಿಗಣಿತವಾದ 'ಮನುಸ್ಮೃತಿ'ಯ ವಿರುದ್ಧವಾಗಿ ಕಿಡಿಕಾರಿ ಆಶ್ಚರ್ಯ ಹುಟ್ಟಿಸಿದರು. 'ಆರ್.ಎಸ್.ಎಸ್ ಮತ್ತು ಸಾಧು ಸಂತರು ಮನುಸ್ಮೃತಿಯನ್ನು ಒಪ್ಪುವುದಿಲ್ಲ' ಎಂದು ಕಂಡಾತುಂಡವಾಗಿ ಹೇಳಿದರು.
ಧರ್ಮ ಸಂಸತ್ತಿನಲ್ಲಿ ಅಷ್ಟಮಠದ ನಿಯಮಕ್ಕೆ ಪೇಜಾವರರಿಂದ ಅಪಚಾರ?
"ಕೆಲ ಜಾತ್ಯತೀತವಾದಿಗಳು ಆರ್ಎಸ್ಎಸ್, ವಿಎಚ್ಪಿ ಮತ್ತು ಹಿಂದೂ ಧರ್ಮದ ಸ್ವಾಮೀಜಿಗಳು ಮನುಸ್ಮೃತಿಯನ್ನು ಬೆಂಬಲಿಸುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಹಿಂದೂ ಧರ್ಮದ ಬಹುತೇಕ ಸಾಧು ಸಂತರು ಮನುಸ್ಮೃತಿಯನ್ನು ಬೆಂಬಲಿಸುವುದಿಲ್ಲ' ಎಂದರು.
ವಿಶ್ವಹಿಂದೂ ಪರಿಷತ್ ನ ಅಂತರರಾಷ್ಟ್ರೀಯ ಅಧ್ಯಕ್ಷ ಸುರೇಂದ್ರ ಕುಮಾರ್ ಜೈನ್ ಮಾತನಾಡಿ " ಕೇರಳದ ಪಾರ್ಥಸಾರಥಿ ದೇವಸ್ಥಾನವನ್ನು ಸರ್ಕಾರ ವಶಮಾಡಿಕೊಂಡಿದೆ, ಹಿಂದೂಗಳ ಎಲ್ಲಾ ದೇವಸ್ಥಾನ ಸರ್ಕಾರ ಕಬ್ಜಾ ಮಾಡಲಿದೆ, ಕರ್ನಾಟಕದಲ್ಲಿ ಚುನಾವಣೆ ನಂತರ ಒಂದೂ ದೇವಸ್ಥಾನ ಹಿಂದೂಗಳ ಬಳಿ ಉಳಿಯುವುದಿಲ್ಲ, ಚುನಾವಣೆ ಇರೋದರಿಂದ ಸರ್ಕಾರ ಈಗ ಸುಮ್ಮನಿದೆ' ಎಂದು ಎಚ್ಚರಿಸಿದರು.
'ಹಿಂದೂ ದೇವಸ್ಥಾನ ಮಾತ್ರ ನಿಮಗೆ ಯಾಕೆ ಬೇಕು, ಮಸೀದಿ- ಚರ್ಚ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ, ಮಸೀದಿ- ಚರ್ಚ್ ನ್ನು ಮುಟ್ಟುವ ಧೈರ್ಯ ಸರ್ಕಾರಕ್ಕಿಲ್ಲ,' ಎಂದು ಸರ್ಕಾರಗಳಿಗೆ ಸವಾಲ್ ಎಸೆದರು.
ದೇವಸ್ಥಾನ ಸಾಮಾಜೀಕರಣವಾಗಬೇಕು, ಸರ್ಕಾರೀಕರಣ ಆಗುವುದಕ್ಕೆ ಧರ್ಮ ಸಂಸದ್ ವಿರೋಧವಿದೆ, ದೇವಸ್ಥಾನದ ಹಣವೆಲ್ಲ ಸರ್ಕಾರದ ಖಜಾನೆ ಸೇರುತ್ತಿದೆ, ದೇಗುಲ ಅದೇ ಧರ್ಮದ ವಶದಲ್ಲಿ ಇರಬೇಕು, ಈ ಬಗ್ಗೆ ಕಾನೂನಿನಲ್ಲೂ ಉಲ್ಲೇಖವಿದೆ, ದೇವಸ್ಥಾನ ಯಾರ ಸುಪರ್ದಿಗೆ ಬರಬೇಕೆಂದು ಮುಂದೆ ನಿರ್ಣಯಿಸುತ್ತೇವೆ ಎಂದು ಅವರು ಹೇಳಿದರು.